ಬೆಂಗಳೂರು ಉಪನಗರ ರೈಲ್ವೆ ಯೋಜನೆ: 699 ಮರ ಕಡಿಯುವುದಕ್ಕೆ ಕರ್ನಾಟಕ ಹೈಕೋರ್ಟ್ ತಡೆ

Karnataka High Court; ತೀರಾ ಅನಿವಾರ್ಯವಲ್ಲದೇ ಹೋದರೆ ಮರಗಳನ್ನು ಕಡಿಯಬಾರದು ಎಂದು ಕರ್ನಾಟಕ ಹೈಕೋರ್ಟ್​ ವಿಭಾಗೀಯ ಪೀಠ ಬಿಬಿಎಂಪಿಗೆ ಹಾಗೂ ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆಗಾಗಿ 699 ಮರಗಳನ್ನು ಕಡಿಯುವ ನಿರ್ಣಯಕ್ಕೆ ಕೋರ್ಟ್​ ತಡೆಯಾಜ್ಞೆ ನೀಡಿದೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆ: 699 ಮರ ಕಡಿಯುವುದಕ್ಕೆ ಕರ್ನಾಟಕ ಹೈಕೋರ್ಟ್ ತಡೆ
ಬೆಂಗಳೂರು ಉಪನಗರ ರೈಲ್ವೆ ಯೋಜನೆ: 699 ಮರ ಕಡಿಯುವುದಕ್ಕೆ ಕರ್ನಾಟಕ ಹೈಕೋರ್ಟ್ ತಡೆ
Follow us
|

Updated on: Jun 13, 2024 | 8:01 AM

ಬೆಂಗಳೂರು, ಜೂನ್ 13: ಬೆಂಗಳೂರು ಉಪನಗರ ರೈಲ್ವೆ ಯೋಜನೆಯ (BSRP) ಕಾರಿಡಾರ್ 2 (ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರ ಮಧ್ಯೆ) ಕಾಮಗಾರಿಗಾಗಿ ಜುಲೈ 12 ರವರೆಗೆ 699 ಮರಗಳನ್ನು ಕಡಿಯಲು ಉದ್ದೇಶಿಸಿರುವುದಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಬುಧವಾರ ತಡೆಯೊಡ್ಡಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರ ವಿಭಾಗೀಯ ಪೀಠವು ಮಧ್ಯಂತರ ಆದೇಶ ನೀಡಿ ಮರ ಕಡಿಯುವುದಕ್ಕೆ ತಡೆಯಾಜ್ಞೆ ನೀಡಿದೆ.

ದತ್ತಾತ್ರೇಯ ಟಿ ದೇವರೆ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಬೆಂಗಳೂರಿನಲ್ಲಿ ಮರ ಗಣತಿ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ನಂತರ ನ್ಯಾಯಪೀಠ ಈ ಆದೇಶ ನೀಡಿದೆ.

2024 ರ ಮೇ 29 ರ ಜ್ಞಾಪಕ ಪತ್ರದಲ್ಲಿ, ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರಸ್ತೆಯನ್ನು ಅಗಲಗೊಳಿಸಲು 699 ಮರಗಳನ್ನು ಕಡಿಯಲು ಅಧಿಕಾರ ನೀಡಿದ್ದರು. 89 ಮರಗಳನ್ನು ಸ್ಥಳಾಂತರಿಸಲಾಗುವುದು ಎಂದು ಜ್ಞಾಪಕ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ನ್ಯಾಯಾಲಯದ ನಿರ್ದೇಶನಗಳನ್ನು ಬಿಬಿಎಂಪಿ ಪಾಲಿಸಿಲ್ಲ. ಮರ ಕಡಿಯುವ ಕುರಿತ ಆದೇಶವು ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ 15 ದಿನಗಳ ನಂತರ ಜಾರಿಗೆ ಬರಲಿದೆ ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿದರು.

ತೀರಾ ಅನಿವಾರ್ಯವಲ್ಲದ ಹೊರತು ಮರಗಳನ್ನು ಕಡಿಯಬಾರದು ಎಂದು ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಯಾವೊಬ್ಬ ಕನ್ನಡಿಗ ಕೂಡ ಮರಗಳನ್ನು ಕತ್ತರಿಸುವುದನ್ನು ಇಷ್ಟಪಡುವುದಿಲ್ಲ. ಹಾಗೆಯೇ, ನಾನು ಕನ್ನಡಿಗನಲ್ಲದಿದ್ದರೂ ಸಹ ತೀರಾ ಅನಿವಾರ್ಯ ಅಲ್ಲದ ಹೊರತು ಮರ ಕಡಿಯುವುದನ್ನು ಒಪ್ಪುವುದಿಲ್ಲ. ನಾವು ಅದನ್ನು ಜ್ಞಾಪಕ ಪತ್ರವನ್ನು ಪರಿಶೀಲಿಸುತ್ತೇವೆ. ಅನಿವಾರ್ಯವಲ್ಲದಿದ್ದರೆ ನೀವು ಅನಗತ್ಯವಾಗಿ ಮರವನ್ನು ಏಕೆ ಕತ್ತರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎಚ್​ಐವಿ ಪ್ರಮಾಣ ಏರಿಕೆ; ಯುವಕರೇ ಹೆಚ್ಚಾಗಿ ಏಡ್ಸ್ ರೋಗಕ್ಕೆ ತುತ್ತು

ಸದ್ಯ ಮರ ಕಡಿಯುವಿಕೆ ವಿಚಾರವಾಗಿ ಪ್ರತಿಕ್ರಿಯೆಯನ್ನು ಸಲ್ಲಿಸಲು ಜುಲೈ 8 ರವರೆಗೆ ಬಿಬಿಎಂಪಿಗೆ ವಿಭಾಗೀಯ ಪೀಠ ಕಾಲಾವಕಾಶ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ