Bengaluru Traffic: ಬೆಂಗಳೂರಿನ ಈ ಪ್ರದೇಶಗಳಲ್ಲಿ ವಾಹನ ಸಂಚಾರಕ ನಿಷೇಧ, ಮಾರ್ಗಸೂಚಿ ಬದಲಾವಣೆ ಹೊರಡಿಸಿದ ಟ್ರಾಫಿಕ್ ಪೊಲೀಸ್

|

Updated on: Dec 04, 2023 | 11:46 AM

ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ. ಬೆಂಗಳೂರಿನ ವರ್ಸೋವ ಲೇಔಟ್ ಬಳಿಯ ಫ್ಲೈಓವರ್‌ನಲ್ಲಿ ಮತ್ತು ಅದರ ಸುತ್ತಲೂ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಸಂಚಾರ ಬದಲಾವಣೆಗಳನ್ನು ಘೋಷಿಸಿದ್ದಾರೆ. ಇನ್ನು ಕೆಲ ಕಡೆ ವಾಹನ ಸಂಚಾರ ನಿಷೇಧಿಸಲಾಗಿದೆ.

Bengaluru Traffic: ಬೆಂಗಳೂರಿನ ಈ ಪ್ರದೇಶಗಳಲ್ಲಿ ವಾಹನ ಸಂಚಾರಕ ನಿಷೇಧ, ಮಾರ್ಗಸೂಚಿ ಬದಲಾವಣೆ ಹೊರಡಿಸಿದ ಟ್ರಾಫಿಕ್ ಪೊಲೀಸ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.04: ಸಿಲಿಕಾನ್ ಸಿಟಿ ಬೆಂಗಳೂರು ಈಗ ಟ್ರಾಫಿಕ್ ಸಿಟಿಯಾಗಿ ಬದಲಾಗಿದೆ (Bengaluru Traffic) . ಬೆಂಗಳೂರಿಗರು ತಮ್ಮ ಹೆಚ್ಚಿನ ಸಮಯವನ್ನು ಟ್ರಾಫಿಕ್‌ನಲ್ಲಿ ಸಿಲುಕಿ ಕಳೆಯುವಂತಾಗಿದೆ. ಹೀಗಾಗಿ ಟ್ರಾಫಿಕ್​ನಲ್ಲೇ ಪಿಜ್ಜಾ ಆರ್ಡರ್ ಮಾಡಿ ತಿನ್ನುವುದು, ಸಮಯ ವ್ಯರ್ಥ ಮಾಡುವುದೇಕೆ ಎಂದು ತರಕಾರಿ ಕಟ್ ಮಾಡಿಕೊಳ್ಳುವಂತಹ ಎಷ್ಟೂ ಘಟನೆಗಳು ನಗರದಲ್ಲಿ ಹೆಚ್ಚಾಗಿರುವ ಟ್ರಾಫಿಕ್​ಗೆ ಉದಾಹರಣೆಗಳಾಗಿವೆ. ಇನ್ನು ಟ್ರಾಫಿಕ್​ ಸಮಸ್ಯೆಗಳನ್ನು ನಿಯಂತ್ರಿಸುವ ಸಲುವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police) ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನಿರ್ಬಂಧನೆಗಳನ್ನು, ಮಾರ್ಗಸೂಚಿ ಬದಲಾವಣೆಗಳನ್ನು ಹೊರಡಿಸಿದ್ದಾರೆ.

ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಸಂಚಾರ ಬದಲಾವಣೆಗಳನ್ನು ಮಾಡಲಾಗಿದೆ. ಬೆಂಗಳೂರಿನ ವರ್ಸೋವ ಲೇಔಟ್ ಬಳಿಯ ಫ್ಲೈಓವರ್‌ನಲ್ಲಿ ಮತ್ತು ಅದರ ಸುತ್ತಲೂ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಸಂಚಾರ ಬದಲಾವಣೆಗಳನ್ನು ಘೋಷಿಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಕಗ್ಗದಾಸಪುರ ಮೇಲ್ಸೇತುವೆ ಮತ್ತು ಸುತ್ತಮುತ್ತ ಸಂಚಾರ ವ್ಯತ್ಯಯ ಹಿನ್ನೆಲೆ ಮಾರ್ಗ ಬದಲಾವಣೆ ಮಾಡಲಾಗಿದೆ. ಕಗ್ಗದಾಸಪುರ ಮುಖ್ಯರಸ್ತೆಯ ನಾಗವಾರಪಾಳ್ಯದಿಂದ ಕಗ್ಗದಾಸಪುರ ರೈಲ್ವೇ ಗೇಟ್ ಜಂಕ್ಷನ್‌ವರೆಗೆ ಸಂಚರಿಸುವ ವಾಹನಗಳನ್ನು 5ನೇ ಅಡ್ಡ ರಸ್ತೆ ಬೈರಸಂದ್ರ ಜಂಕ್ಷನ್‌ಗೆ ತಿರುಗಿಸಿಕೊಳ್ಳಲು ಮಾರ್ಗ ಬದಲಾವಣೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿಗೆ ಸಿಲುಕಿ ಉರುಳಿ ಬಿದ್ದ ಕ್ಯಾಂಟರ್ ವಾಹನ; ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ಟ್ರಾಫಿಕ್ ಜಾಮ್

ವಾಹನ ಸವಾರರು ಬಲ ತಿರುವು ಪಡೆದು ಜಿ.ಎಂ.ಪಾಳ್ಯ ಜಂಕ್ಷನ್ ತಲುಪಲು ಹಾಗೂ ಕಗ್ಗದಾಸಪುರ ರೈಲ್ವೆ ಗೇಟ್‌ನಿಂದ ನಾಗವಾರಪಾಳ್ಯ ಕಡೆಗೆ ಹೋಗುವ ವಾಹನಗಳು ರೈಲ್ವೇ ಗೇಟ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ವಿಜ್ಞಾನನಗರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗುವಂತೆ ಸೂಚಿಸಲಾಗಿದೆ. ವಾಹನಗಳು ಬಿಇಎಂಎಲ್ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಗೀತಾಂಜಲಿ ಲೇಔಟ್ ಜಂಕ್ಷನ್‌ನಲ್ಲಿ ಮತ್ತೊಂದು ಬಲಕ್ಕೆ ತಿರುಗಬೇಕು ಇದರಿಂದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ನಾಗವಾರಪಾಳ್ಯ ತಲುಪಬಹುದು. ಪ್ರಯಾಣಿಕರು ಜಿಎಂ ಪಾಳ್ಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ನಂತರ ಬೈರಸಂದ್ರ ಮುಖ್ಯರಸ್ತೆಯ ಮೂಲಕ ನಾಗವಾರಪಾಳ್ಯವನ್ನು ತಲುಪಬಹುದು.

ಈ ಪ್ರದೇಶಗಳಲ್ಲಿ ವಾಹನ ಸಂಚಾರ ನಿಷೇಧ

ಇನ್ನು ಕೆಲ ಕಡೆ ವಾಹನ ಸಂಚಾರ ನಿಷೇಧಿಸಲಾಗಿದೆ. ಪೂರ್ವಂಕರ ಅಪಾರ್ಟ್‌ಮೆಂಟ್‌ನಿಂದ ಕಗ್ಗದಾಸಪುರ ರೈಲ್ವೆ ಗೇಟ್ ನಿಲ್ದಾಣದವರೆಗೆ ಯಾವುದೇ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೈಗೆತ್ತಿಕೊಂಡಿರುವ ನಿರ್ಮಾಣ ಕಾಮಗಾರಿ ಮುಗಿಯುವವರೆಗೂ ಈ ಪ್ರದೇಶದಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ