
ಬೆಂಗಳೂರು, ಡಿಸೆಂಬರ್ 27: ಬೆಂಗಳೂರು ನವವಿವಾಹಿತೆ ಗಾನವಿ (26) (Ganavi Suicide Case)ಆತ್ಮಹತ್ಯೆ ಪ್ರಕರಣದಲ್ಲೀಗ ಮಹತ್ವದ ತಿರುವು ಸಿಕ್ಕಿದೆ. ಎರಡು ತಿಂಗಳ ಹಿಂದೆಯಷ್ಟೇ ಸೂರಜ್ ಅನ್ನು ವರಿಸಿದ್ದ ಗಾನವಿ ಆತ್ಮಹತ್ಯೆಗೆ ಯತ್ನಿಸಿ, ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆಕೆಯ ಆತ್ಮಹತ್ಯೆ ಬೆನ್ನಲ್ಲೇ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿರುವುದರ ಜೊತೆ ಆತನ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವುದು ಈ ಪ್ರಕರಣಕ್ಕೆ ಹೊಸ ತಿರುವು ತಂದಿದೆ.
ಗಂಡನೊಂದಿಗೆ ಮನಸ್ತಾಪ ಮಾಡಿಕೊಂಡು ಪಾಲಕರ ಮನೆಗೆ ಮರಳಿದ್ದ ಗಾನವಿ, ಆತ್ಮಹತ್ಯೆಗೆ ಯತ್ನಿದಸಿದ್ದರು. ಅಸ್ವಸ್ಥಳಾಗಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಬ್ರೈನ್ ಡೆಡ್ ಆಗಿದ್ದ ಕಾರಣ ಕೊನೆಯುಸಿರೆಳೆದಿದ್ದರು. ಇದೀಗ ಮಹಾರಾಷ್ಟ್ರದಲ್ಲಿ ಸೂರಜ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಗಾನವಿಯ ಸಾವಿನ ಬಳಿಕ ಸೂರಜ್ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ಪತ್ನಿಯ ಆತ್ಮಹತ್ಯೆಯ ವಿಚಾರದಲ್ಲಿ ಆಕೆಯ ಪೋಷಕರು ಹಾಗೂ ಸಂಬಂಧಿಕರ ಆಕ್ರೋಶ ಮತ್ತು ಅವರಿಂದಾದ ಅವಮಾನ ತಡೆಯಲಾಗದೆ ತಾಯಿ- ಮಗ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ ‘ಫಸ್ಟ್ ನೈಟ್ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ’
ಸೂರಜ್ ಮತ್ತು ಗಾನವಿ ಹನಿಮೂನ್ಗೆ ಶ್ರೀಲಂಕಾಗೆ ತೆರಳಿದ್ದರು. ಆದರೆ ಅಲ್ಲಿ ದಂಪತಿ ನಡುವೆ ಕಲಹಗಳು ಏರ್ಪಟ್ಟಿತ್ತು. ಜೊತೆಗೆ ಗಾನವಿಯ ವಿವಾಹಪೂರ್ವ ಸಂಬಂಧದ ವಿಚಾರದಿಂದ ದಾಂಪತ್ಯದಲ್ಲಿ ಕಲಹ ಉಂಟಾಗಿತ್ತು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಎಲ್ಲಾ ಕಾರಣದಿಂದ ಹನಿಮೂನ್ ಮಧ್ಯದಲ್ಲೇ ಮೊಟಕುಗೊಳಿಸಿ ಗಾನವಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಶ್ರೀಲಂಕಾದಿಂದ ವಾಪಸ್ ಆದ ಬಳಿಕ ಗಾನವಿ ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:09 am, Sat, 27 December 25