BMTC Bus Accident: ಬಿಎಂಟಿಸಿ ಬಸ್ – ಬೈಕ್ ಡಿಕ್ಕಿ: ಮಲ್ಲೇಶ್ವರ ನಿವಾಸಿ ಯುವತಿ ಸಾವು

| Updated By: ಗಣಪತಿ ಶರ್ಮ

Updated on: Feb 02, 2024 | 12:04 PM

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ನಿಂದ ಮತ್ತೊಂದು ಅಪಘಾತ ಸಂಭವಿಸಿದ್ದು, ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಬಿಎಂಟಿಸಿಯಿಂದಾಗುವ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಐದಾರು ಮಂದಿ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಸಹ ಬಿಎಂಟಿಸಿ ಬಸ್ ಬೈಕ್​ಗೆ ಡಿಕ್ಕಿಯಾಗಿ ಯುವಕ ಮೃತಪಟ್ಟಿದ್ದರು.

BMTC Bus Accident: ಬಿಎಂಟಿಸಿ ಬಸ್ - ಬೈಕ್ ಡಿಕ್ಕಿ: ಮಲ್ಲೇಶ್ವರ ನಿವಾಸಿ ಯುವತಿ ಸಾವು
ಮೃತ ಯುವತಿ ಕುಸುಮಿತಾ ಹಾಗೂ ಬಿಎಂಟಿಸಿ ಬಸ್
Follow us on

ಬೆಂಗಳೂರು, ಫೆಬ್ರವರಿ 2: ಬಿಎಂಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ (BMTC Bus Accident) ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಂಗಳೂರಿನ (Bengaluru) ಹರಿಶ್ಚಂದ್ರ ಘಾಟ್​ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಕೆಂಗೇರಿಯ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತಿದ್ದ ಮಲ್ಲೇಶ್ವರ ನಿವಾಸಿ ಯುವತಿ ಕುಸುಮಿತಾ (21) ಇಂದು ಬೆಳಗ್ಗೆ 8.30ಕ್ಕೆ ಕಾಲೇಜಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.

ಮಲ್ಲೇಶ್ವರಂನಿಂದ ಹರಿಶ್ಚಂದ್ರಘಾಟ್​​​ಗೆ ಬೈಕ್ ನಲ್ಲಿ ಬರುತಿದ್ದ ಯುವತಿ, ಬಳಿಕ ಮೆಟ್ರೋ ಬಳಸಿ ಕಾಲೇಜಿಗೆ ತೆರಳುತಿದ್ದಳು. ಶುಕ್ರವಾರ ಬೆಳಗ್ಗೆ ಸಹ ಎಂದಿನಂತೆಯೇ, ಮಲ್ಲೇಶ್ವರದಿಂದ ಹೊರಟಿದ್ದಳು. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಬಸ್ ಆಕೆ ತೆರಳುತ್ತಿದ್ದ ಬೈಕ್​ಗೆ ಡಿಕ್ಕಿಹೊಡೆದಿದೆ. ಬಳಿಕ ಬೈಕ್ ಸಮೇತ ಎಳೆದೊಯ್ದಿದೆ.

ಬಳಿಕ ಗಾಯಾಗೊಂಡಿದ್ದ ಆಕೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಸದ್ಯ ಮೃತದೇಹವನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ.

ಮಾರತ್ತಹಳ್ಳಿಯ ವರ್ತೂರು ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್​ ಹರಿದು ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಇತ್ತೀಚೆಗೆ ಸಂಭವಿಸಿತ್ತು.

ಹೆಚ್ಚುತ್ತಿರುವ ಬಿಎಂಟಿಸಿ ಅಪಘಾತ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳು ಕಳೆದ ಕೆಲವು ತಿಂಗಳುಗಳಲ್ಲಿ ಹೆಚ್ಚಾಗಿದೆ. 2023 ರ ಅಕ್ಟೋಬರ್​​ ತಿಂಗಳೊಂದರಲ್ಲೇ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮೂವರು ಮೃತಪಟ್ಟ ಪ್ರತ್ಯೇಕ ಘಟನೆಗಳು ವರದಿಯಾಗಿದ್ದವು. ಡಿಸೆಂಬರ್​​ 28ರಂದು ಬಿಎಂಟಿಸಿ ಬಸ್​ಗೆ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವನ್ನಪ್ಪಿದ್ದರು. ಅದಾದ ನಂತರ ಜನವರಿ 6ರಂದು ಬಿಎಂಟಿಸಿ ವೋಲ್ವೋ ಬಸ್​ ಹರಿದು ಬೈಕ್ ಸವಾರ ಮೃತಪಟ್ಟಿದ್ದರು.

ದೇವನಹಳ್ಳಿ: ಕ್ರಷರ್​​ನಲ್ಲಿ ಮಹಿಳೆ ಮೇಲೆ ಹರಿದ ಟಿಪ್ಪರ್​​, ಮಹಿಳೆ ಸಾವು

ಕ್ರಷರ್​​ನಲ್ಲಿ ಮಹಿಳೆ ಮೇಲೆ ಟಿಪ್ಪರ್ ಹರಿದು ಮಹಿಳೆಯೊಬ್ಬರು ಮೃತಪಟ್ಟ ದಾರುಣ ಘಟನೆ ಹೊಸಕೋಟೆ ತಾಲೂಕಿನ ಮುತುಕದಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಮುತುಕದಹಳ್ಳಿ ಗ್ರಾಮದ ಮಂಜುಳಾ (39) ಮೃತ ಮಹಿಳೆಯಾಗಿದ್ದಾರೆ. ಮಹಿಳೆ ವಿಶ್ವ ವಿನಾಯಕ ಸ್ಟೋನ್ ಕ್ರಷರ್​​ನಲ್ಲಿ ಕೆಲಸಕ್ಕಿದ್ದರು. ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ಟಿಪ್ಪರ್​​ ಹಿಮ್ಮುಖವಾಗಿ ಚಲಿಸಿದ್ದು, ಮಹಿಳೆ ಮೇಲೆ ಟಿಪ್ಪರ್​ ಚಕ್ರ ಹರಿದಿದೆ. ಪರಿಣಾಮವಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ವೋಲ್ವೋ ಬಸ್​ಗೆ ಬೈಕ್ ಸವಾರ ಬಲಿ

ಘಟನೆ ಬಳಿಕ ಸ್ಥಳದಲ್ಲಿ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ನಂದಗುಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ