ಮುಂದುವರಿದ ಭ್ರಷ್ಟಾಚಾರ ಆರೋಪ: ಶಿಕ್ಷಣ ಇಲಾಖೆ ವಿರುದ್ಧ ಸಿಡಿದೆದ್ದ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ

ಕರ್ನಾಟಕದಲ್ಲಿ ಹೊಸ ಸರ್ಕಾರ ಬಂದರೂ ಶಿಕ್ಷಣ ಇಲಾಖೆಯಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ಮುಂದುವರಿದಿದೆ ಎಂದು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಆಕ್ರೋಶ ಹೊರಹಾಕಿದೆ. ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ದೊಡ್ಡಮಟ್ಟದಲ್ಲಿ ಟೀಕಾಪ್ರಹಾರಗಳನ್ನು ನಡೆಸಿತ್ತು.

ಮುಂದುವರಿದ ಭ್ರಷ್ಟಾಚಾರ ಆರೋಪ: ಶಿಕ್ಷಣ ಇಲಾಖೆ ವಿರುದ್ಧ ಸಿಡಿದೆದ್ದ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ
ಶಿಕ್ಷಣ ಇಲಾಖೆಯ ವಿರುದ್ಧ ಮತ್ತೆ ಭ್ರಷ್ಟಾಚಾರದ ಆರೋಪ ಮಾಡಿದ ರುಪ್ಸಾ
Rakesh Nayak Manchi

Updated on: Jun 14, 2023 | 6:44 PM

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಲಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಟೀಕಾಪ್ರಹಾರಗಳನ್ನೇ ನಡೆಸಿತ್ತು. ಆದರೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರ ನಿಂತಿಲ್ಲ. ಹೊಸ ಸರ್ಕಾರ ಬಂದರೂ ಭ್ರಷ್ಟಾಚಾರ ಮುಂದುವರಿದಿದೆ ಎಂದು ಶಿಕ್ಷಣ ಇಲಾಖೆ ವಿರುದ್ಧ ರುಪ್ಸಾ (RUPSA) ಖಾಸಗಿ ಶಾಲೆಗಳ ಒಕ್ಕೂಟ ಸಿಡಿದೆದ್ದಿದೆ.

ಶಿಕ್ಷಣ ಇಲಾಖೆಯಲ್ಲಿ ಮುಂದುವರಿದ ಅವ್ಯಾಹತ ಭ್ರಷ್ಟಾಚಾರದ ಬಗ್ಗೆ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಹೇಳಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರ ಇದ್ದಾಗಲೇ ಸಾಕ್ಷಿ ಸಮೇತ ಕೆಲ ಭ್ರಷ್ಟರ ಮುಖವಾಡ ಬಯಲಾಗಿತ್ತು. ಆ ಬಗ್ಗೆ ತನಿಖೆ ನಡೆಯುವ ಹಂತದಲ್ಲೇ ಈಗ ಮತ್ತೆ ಅವರಲ್ಲೇ ಕೆಲವರು ಹಳೆ ಚಾಳಿ ಮುಂದುವರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಧಿಕಾರ ಬಲ ಇದೆ ಅಂತ ಬಿಂಬಿಸಿ ಉನ್ನತ ಅಧಿಕಾರಿಗಳ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಪಠ್ಯಪುಸ್ತಕ ಪರಿಷ್ಕರಣೆ, ಎಸ್​ಇಪಿ, ಮಾನ್ಯತೆ ನವೀಕರಣ, ವಾರ್ಷಿಕ ವೇಳಾಪಟ್ಟಿ, ಶೈಕ್ಷಣಿಕ ಗುಣಮಟ್ಟ, ಶಾಲಾ ಹಂತದಿಂದ ಮೇಲಿನ ಹಂತದವರೆಗೆ ಪುನಶ್ಚತನಗೊಳಿಸುವ, ಹಲವು ವಿಚಾರಗಳ ಕುರಿತು ಸಭೆ ಮಾಡಿ ಚರ್ಚೆ ನಡೆಸಿ ಅಂತ ಹೇಳಿಹೇಳಿ ಸುಸ್ತಾಗಿದೆ ಅಂತ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕೊಟ್ಟಿದ್ದ 6ನೇ ಗ್ಯಾರಂಟಿ ಜಾರಿ; ಕೆಕೆಆರ್​ಡಿಬಿಯಲ್ಲಿ ನಡೆದ ಭ್ರಷ್ಟಾಚಾರ ತನಿಖೆ ಆರಂಭ

ಮತೀಯ ವಿಷ ಬೀಜ ಬಿತ್ತುವ ಹಾಗೂ ಮಕ್ಕಳ ಮನಸ್ಸಿನಲ್ಲಿ ಅಶಾಂತಿ ಸೃಷ್ಟಿಸುವ ಪಾಠಗಳನ್ನು ಈಗಾಗಲೇ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಈ ಸಂಬಂಧ ಶಿಕ್ಷಣ ಸಚಿವರು ನಮ್ಮ ಜೊತೆಗೆ ಒಂದು ಸಭೆ ನಡೆಸಿ ಸೂಕ್ತ ಪರಿಹಾರ ಕೊಡಿ ಅಂತ ಸಿದ್ದರಾಮಯ್ಯ ಅವರ ಜೊತೆ ರುಪ್ಸಾ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಲಂಚದ ವ್ಯಾಪ್ತಿ ಶೇ.40-50 ರಷ್ಟು ಹೆಚ್ಚಾಗಿದೆ. ಡಿಡಿಪಿಐಗಳು ನೇರವಾಗಿ ಲಂಚ ಕೇಳುತ್ತಿದ್ದಾರೆ. ಇದರ ಆಡಿಯೋ ರೆಕಾರ್ಡ್ ಸಹ ಇದೆ. ಡಿಡಿಪಿಐಗೆ 20 %, ಬಿಇಒಗೆ 25% ಅಂತ ಕಮಿಷನ್ ತಗೋತಾರೆ. ಇಲಾಖೆಯ ಬಹುತೇಕ ಕೆಲಸಗಳಿಗೆ ಆನ್ ಲೈನ್ ವ್ಯವಸ್ಥೆ ಇಲ್ಲ. ಆನ್ ಲೈನ್ ವ್ಯವಸ್ಥೆ ತನ್ನಿ‌ ಅಂದ್ರೂ ಅಧಿಕಾರಿಗಳು‌ ಸುಮ್ಮನಿದ್ದಾರೆ. ಆನ್ ಲೈನ್ ವ್ಯವಸ್ಥೆ ಇಲ್ಲದೆ ಅಧಿಕಾರಿಗಳು ಲಂಚ ಬಾಕರಾಗುತ್ತಿದ್ದಾರೆ ಎಂದು ಲೋಕೇಶ್ ತಾಳಿಕಟ್ಟೆ ಅವರು ಕಳೆದ ವರ್ಷ ಆರೋಪ ಮಾಡಿದ್ದರು. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದೆ ಅಂತಾನೂ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Wed, 14 June 23

Loading...
Unable to load recommendations.
Follow Us