ವೈದ್ಯ ಎಡವಟ್ಟು; ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಯುವಕನ ಕಾಲು ಕತ್ತರಿಸುವ ಹಂತಕ್ಕೆ ಸೋಂಕು

| Updated By: ಆಯೇಷಾ ಬಾನು

Updated on: Jan 28, 2022 | 9:05 AM

ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ 18 ವರ್ಷದ ಅಭಿ ಎಂಬ ಯುವಕ ಜನವರಿ 6ರಂದು ಬೇಗೂರಿನ ಮೈಲಸಂದ್ರದಲ್ಲಿರುವ ಸಾನಿಕಾ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಶೀತ ಕೆಮ್ಮು ಜ್ವರ ಇದ್ದ ಕಾರಣ ಡಾ.ಅಶೋಕ್ ಎಂಬುವವರು ಅಭಿಗೆ ಇಂಜೆಕ್ಷನ್ ನೀಡಿದ್ದರು.

ವೈದ್ಯ ಎಡವಟ್ಟು; ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಯುವಕನ ಕಾಲು ಕತ್ತರಿಸುವ ಹಂತಕ್ಕೆ ಸೋಂಕು
ಪ್ರಾತಿನಿಧಿಕ ಚಿತ್ರ
Follow us on

ಆನೇಕಲ್: ವೈದ್ಯೋ ನಾರಾಯಣೋ ಹರಿ ಅಂತಾರೆ. ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದ್ರೆ ಆ ವೈದ್ಯರು ಮಾಡುವ ತಪ್ಪಿನಿಂದ ಇಡೀ ಜೀವನ ಕಷ್ಟಕ್ಕೆ ಸಿಲುಪುವ, ಸಿಲುಕಿರುವ ಘಟನೆಗಳು ಅನೇಕ. ಅದೇ ರೀತಿ ಇಲ್ಲಿ ವೈದ್ಯರ ಎಡವಟ್ಟಿನಿಂದ ಯುವಕನ ಕಾಲಿಗೆ ಸೋಂಕು? ಕುಟುಂಬಸ್ಥರು ನ್ಯಾಯಕ್ಕಾಗಿ ಪೊಲೀಸರ ಮೊರೆಹೋಗಿದ್ದಾರೆ.

ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ 18 ವರ್ಷದ ಅಭಿ ಎಂಬ ಯುವಕ ಜನವರಿ 6ರಂದು ಬೇಗೂರಿನ ಮೈಲಸಂದ್ರದಲ್ಲಿರುವ ಸಾನಿಕಾ ಕ್ಲಿನಿಕ್‌ಗೆ ಹೋಗಿದ್ದರು. ಈ ವೇಳೆ ಶೀತ ಕೆಮ್ಮು ಜ್ವರ ಇದ್ದ ಕಾರಣ ಡಾ.ಅಶೋಕ್ ಎಂಬುವವರು ಅಭಿಗೆ ಇಂಜೆಕ್ಷನ್ ನೀಡಿದ್ದರು. ಡಾ.ಅಶೋಕ್ ಇಂಜೆಕ್ಷನ್ ನೀಡಿದ ಬಳಿಕ ಅಭಿಗೆ ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ. ಇಂಜೆಕ್ಷನ್ ನೀಡಿದ ಜಾಗದಿಂದ ಇಡೀ ಕಾಲಿಗೆ ಸೋಂಕು ಹರಡಿದೆ. ಹೀಗಾಗಿ ಸಾನಿಕಾ ಕ್ಲಿನಿಕ್ ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ತಾವೇ ಸೋಂಕಿಗೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದರು. ಆದ್ರೆ ಈಗ ತಮ್ಮಿಂದ ಆಗಲ್ಲ ಎಂದು ಕ್ಲಿನಿಕ್‌ನವರಿಂದ ತಗಾದೆ ಕೇಳಿ ಬಂದಿದೆ.

ಸದ್ಯ ಈಗ ಕಾಲು ಕತ್ತರಿಸುವ ಹಂತಕ್ಕೆ ಸೋಂಕು ಹರಡಿಕೊಂಡಿದೆ. ಇತ್ತ ವೈದ್ಯರ ಎಡವಟ್ಟಿನಿಂದ ಯುವಕ ತನ್ನ ಕಾಲನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಅಭಿ ಅಕ್ಕ ಶಶಿಕಲಾ ನ್ಯಾಯಕ್ಕಾಗಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾರೆ.

FIR ದಾಖಲಾಗುತ್ತಿದ್ದಂತೆ ವೈದ್ಯ ಡಾ.ಅಶೋಕ್ ಪರಾರಿ
ಇನ್ನು FIR ದಾಖಲಾಗುತ್ತಿದ್ದಂತೆ ವೈದ್ಯ ಡಾ.ಅಶೋಕ್ ಪರಾರಿಯಾಗಿದ್ದಾರೆ. ಡಾ.ಅಶೋಕ್, ಸಾನಿಕಾ ಕ್ಲಿನಿಕ್‌ ನಡೆಸುತ್ತಿದ್ದರು. ಅಭಿಗೆ ಅವರು ನೀಡಿದ ಇಂಜೆಕ್ಷನ್​ನಿಂದ ಕಾಲಿಗೆ ಸೋಂಕು ಹರಡಿತ್ತು. ಈ ವೇಳೆ ಇನ್ಫೆಕ್ಷನ್ ಕಡಿಮೆ ಆಗಲು ವೈದ್ಯ ಅಶೋಕ್ ಮಾತ್ರೆಗಳನ್ನು ನೀಡಿದ್ದರು, ಆದರೆ ಮಾತ್ರೆಗಳನ್ನು ಸೇವಿಸಿದ ಬಳಿಕ ಇನ್ಫೆಕ್ಷನ್ ಹೆಚ್ಚಾಗಿತ್ತು. ನಂತರ ತಮ್ಮ ಎಡವಟ್ಟಿನ ಅರಿವಾಗಿ 40 ಸಾವಿರ‌ ರೂಪಾಯಿ‌ ಪರಿಹಾರ ನೀಡಿದ್ರು. ಅಲ್ಲದೆ ಮುಂದೆ ಚಿಕಿತ್ಸೆ ನೀಡಲು ಸಹ ನಿರಾಕರಿಸಿದ್ದರು. ಹೀಗಾಗಿ ವೈದ್ಯನ ವಿರುದ್ಧ ಎಫ್​ಐಆರ್ ದಾಖಲಿಸಲಾಗಿತ್ತು. ಎಫ್​ಐಆರ್ ದಾಖಲಾಗುತ್ತಿದ್ದಂತೆ ವೈದ್ಯ ಅಶೋಕ್ ನಾಪತ್ತೆಯಾಗಿದ್ದಾರೆ. ಸದ್ಯ ಕಾಲಿನ ಸೋಂಕಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಲಕ್ಷಾಂತರ ಹಣ ಖರ್ಚಾಗಿದೆ. ಸಾಲದ ಶೂಲಕ್ಕೆ ಕುಟುಂಬ ಸಿಲುಕಿದೆ. ವಯಸ್ಸಿಗೆ ಬಂದ ಮಗನ‌ ಸ್ಥಿತಿ ಕಂಡು ತಾಯಿ ಮರುಗುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಹೆರಿಗೆ ನಂತರ ಊದಿಕೊಂಡು, ಕೆಂಪಾಯಿತು ಹೊಟ್ಟೆ; ಸಿಟಿ ಸ್ಕ್ಯಾನ್​ನಲ್ಲಿ ಗೊತ್ತಾಯ್ತು ವೈದ್ಯರು ಮಾಡಿದ ಎಡವಟ್ಟು, ಕೋರ್ಟ್ ಮೆಟ್ಟಿಲೇರಿದ ಪತಿ

Published On - 12:41 pm, Thu, 27 January 22