AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಜ್ ಕಾರು ಡಿಕ್ಕಿಯಾಗಿ ಫ್ಯಾಷನ್ ಡಿಸೈನರ್ ಸಾವು: ಕೇಸ್​ ಹಿಂಪಡೆಯಲು ಆರೋಪಿಯಿಂದ ಒಂದೂವರೆ ಕೋಟಿ ಆಮಿಷ

ಮದ್ಯಪಾನ ಮಾಡಿದ ಯುವಕ ಚಾಲನೆ ಮಾಡುತ್ತಿದ್ದ ಬೆಂಜ್ ಕಾರು ಡಿಕ್ಕಿಯಾಗಿ 30 ವರ್ಷದ ಫ್ಯಾಷನ್ ಡಿಸೈನರ್ ಸಂಧ್ಯಾ ಮೃತಪಟ್ಟಿದ್ದಾರೆ. ಕೆಂಗೇರಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಅಪಘಾತದ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ ಆದರೆ ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಜ್ ಕಾರು ಡಿಕ್ಕಿಯಾಗಿ ಫ್ಯಾಷನ್ ಡಿಸೈನರ್ ಸಾವು: ಕೇಸ್​ ಹಿಂಪಡೆಯಲು ಆರೋಪಿಯಿಂದ ಒಂದೂವರೆ ಕೋಟಿ ಆಮಿಷ
ಮೃತ ಸಂಧ್ಯಾ, ಬೆಂಜ್​ ಕಾರು
Jagadisha B
| Edited By: |

Updated on: Nov 05, 2024 | 2:26 PM

Share

ಬೆಂಗಳೂರು, ನವೆಂಬರ್​ 05: ಬೆಂಜ್ ​ಕಾರು (Benz car) ಡಿಕ್ಕಿಯಾಗಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೆಂಗೇರಿ ಬಸ್​ ನಿಲ್ದಾಣದ (Kengeri Bus Stand) ಬಳಿ ನಡೆದಿದೆ. ಫ್ಯಾಷನ್ ಡಿಸೈನರ್ ಸಂಧ್ಯಾ (30) ಮೃತ ದುರ್ದೈವಿ. ಫ್ಯಾಷನ್ ಡಿಸೈನರ್ (Fashion designer) ಆಗಿರುವ ಸಂಧ್ಯಾ ಅವರು ಬಟ್ಟೆ ಅಂಗಡಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ (ನ.02) ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಕೆಂಗೇರಿ ಬಸ್‌ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದರು.

ಈ ವೇಳೆ ಮದ್ಯದ ಮತ್ತಿನಲ್ಲಿ ಬೆಂಜ್​ ಕಾರು ಚಲಾಯಿಸಿಕೊಂಡು ಬಂದ ಯುವಕ, ಸಂಧ್ಯಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಧ್ಯಾ ಅವರನ್ನು 5 ಮೀಟರ್ ಉಜ್ಜಿಕೊಂಡು ಹೋಗಿದೆ. ಅಪಘಾತದ ರಭಸಕ್ಕೆ ಸಂಧ್ಯಾ ತಲೆಗೆ ತೀವ್ರ ಪೆಟ್ಟಾಗಿ, ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಅಪಘಾತದ ಬಳಿಕ ಯುವಕ ಪರಾರಿಯಾಗಲು ಯತ್ನಿಸಿದ್ದಾನೆ. ಆಗ, ಸ್ಥಳೀಯರು ಯುವಕನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಸಂಧ್ಯಾರ ಸಹೋದರ ಶೇಖರ್ ಮಾತನಾಡಿ, ನನ್ನ ಅಕ್ಕ ಕೆಂಗೇರಿ ಬಳಿ ದಿಶಾ ಫ್ಯಾಷನ್​ನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದರು. ಮನೆಗೆ ಬರುತ್ತಿರುವುದಾಗಿ ಕರೆ ಮಾಡಿ ಸಹ ಹೇಳಿದ್ದರು. ಆದರೆ, 7 ಗಂಟೆ ಸಮಯದಲ್ಲಿ ಪೊಲೀಸರು ಫೋನ್ ಮಾಡಿ “ಮರ್ಸಿಡೆಸ್ ಬೆಂಜ್ ಕಾರು ಡಿಕ್ಕಿ ಹೊಡೆದಿದೆ. ಸಂಧ್ಯಾ ಅವರು ಮೃತಪಟ್ಟಿದ್ದಾರೆ ಅಂತ ಹೇಳಿದರು” ಎಂದು ತಿಳಿಸಿದರು.

ಇದನ್ನೂ ಓದಿ: ಆಟೋ ಆಸೆ ತೋರಿಸಿ ಪಟಾಕಿ ಹಚ್ಚಿದ ಡಬ್ಬದ ಮೇಲೆ ಕೂರಿಸಿ ಯುವಕನ ಪ್ರಾಣ ತೆಗೆದ ದುರುಳರು

ಅಕ್ಕಳನ್ನು ಸುಮಾರು ಐದಾರು ಮೀಟರ್ ಕಾರು ಉಜ್ಜಿಕೊಂಡು ಹೋಗಿದೆ. ಆಮೇಲೆ ಒಂದು ವಾಹನಕ್ಕೆ ಡಿಕ್ಕಿ ಹೊಡೆದು ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ನಂತರ, ಸ್ಥಳಿಯರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನನ್ನ ಅಕ್ಕಾ ತುಂಬಾ ನೋವು ತಿಂದಿದ್ದಾರೆ. ಸ್ಥಳಿಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಆಗಲ್ಲ ಎಂದಾಗ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ಆರೋಪಿ ಕುಟುಂಬದವರಿಂದ ಒಂದುವರೆ ಕೋಟಿ ಆಮಿಷ

ಆರೋಪಿ ಕಡೆಯಿಂದ ಯಾರೊ ಒಬ್ಬರು ಗನ್​ ಮೆನ್ ರೀತಿ ಇರುವವರು ನಮ್ಮ ಅಣ್ಣನ ಬಳಿ ಬಂದು ಹಣಕ್ಕೆ ಆಮೀಷ ಒಡ್ಡಿದ್ದಾರೆ. ಕೇಸ್ ಏನು ಬೇಡ, ಎಫ್​ಐಆರ್ ಬೇಡ ನಾವು ಒಂದುವರೆ ಕೋಟಿ ಕೊಡುತ್ತೇವೆ ಎಂದು ಹೇಳಿದ್ದಾರಂತೆ. ಆದರೆ ನಮಗೆ ಹಣ ಏನು ಬೇಡ. ನಮಗೆ ನಮ್ಮ ಅಕ್ಕನ ಸಾವಿಗೆ ನ್ಯಾಯ ಬೇಕು. ಹಣ ಮುಖ್ಯ ಅಲ್ಲ ಅಕ್ಕನ ಜೀವ ಮುಖ್ಯ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಸಂಧ್ಯಾ ಸಹೋದರ ಹೇಳಿದರು.

ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ದಯಾನಂದ ಮಾತನಾಡಿ, ಕೆಂಗೇರಿ ಬಸ್ ನಿಲ್ದಾಣದ ಮುಂದೆ ಬೆಂಜ್ ಕಾರು ಡಿಕ್ಕಿಯಾಗಿ 30 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಬಳಿಕ ಕೇಸ್ ದಾಖಲು ಮಾಡಿ ಆರೋಪಿಯನ್ನು ಬಂಧಿಸಿದ್ದೇವೆ. ಡ್ರಂಕ್ & ಡ್ರೈವ್ ಮತ್ತು ರಕ್ತ ಪರೀಕ್ಷೆ ಮಾಡಿಸಲಾಗಿದೆ. ‘ಉದ್ದೇಶಪೂರ್ವಕವಲ್ಲದ ಕೊಲೆ’ ಎಂದು ಕೇಸ್ ದಾಖಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ