ಕಾಂಗ್ರೆಸ್ ಸರ್ಕಾರ ರಚನೆಗೂ ಮುನ್ನ ವಿದ್ಯುತ್ ದರ ಏರಿಸಿ ಆದೇಶ: ಇಂಧನ ಇಲಾಖೆ ಸ್ಪಷ್ಟನೆ

|

Updated on: Jun 15, 2023 | 6:53 PM

ಕಾಂಗ್ರೆಸ್ ಸರ್ಕಾರ ರಚನೆಯಾಗುವ ಮುನ್ನವೇ ವಿದ್ಯುತ್ ದರ ಏರಿಕೆ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು ಎಂದು ಇಂಧನ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದೆ.

ಕಾಂಗ್ರೆಸ್ ಸರ್ಕಾರ ರಚನೆಗೂ ಮುನ್ನ ವಿದ್ಯುತ್ ದರ ಏರಿಸಿ ಆದೇಶ: ಇಂಧನ ಇಲಾಖೆ ಸ್ಪಷ್ಟನೆ
ವಿದ್ಯುತ್ ದರ ಏರಿಕೆ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ ಇಂಧನ ಇಲಾಖೆ
Follow us on

ಬೆಂಗಳೂರು: ವಿದ್ಯುತ್ ದರ ಏರಿಕೆ (Power Tariff Hike) ಖಂಡಿಸಿ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಸಣ್ಣ ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸುತ್ತಿವೆ. ರಾಜಕೀಯ ಕೆಸರೆರಚಾಟವೂ ನಡೆಯುತ್ತಿದೆ. ಈ ನಡುವೆ ದರ ಏರಿಕೆ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ ಇಂಧನ ಇಲಾಖೆ (Energy department), ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವ ಮುನ್ನವೇ ಆದೇಶ ಪ್ರಕಟಿಸಲಾಗಿತ್ತು ಎಂದು ಹೇಳಿದೆ. ಅಲ್ಲದೆ, ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಇಲಾಖೆಯು ವಿದ್ಯುತ್ ಸರಬರಾಜು ಕಂಪನಿಗಳಿಗೆ (ESCOMs) ನಿರ್ದೇಶನ ನೀಡಿದೆ.

ಶುಲ್ಕ ಪರಿಷ್ಕರಣೆ ಅಧಿಸೂಚನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮೇ 12 ರಂದು ಹೊರಡಿಸಿತ್ತು. ವಿಧಾನಸಭಾ ಚುನಾವಣೆ ಮತ್ತು ನೀತಿ ಸಂಹಿತೆ ಹಿನ್ನೆಲೆ ಇದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ರಾಜ್ಯದಲ್ಲಿ ಹೊಸ ಸರ್ಕಾರವನ್ನು ರಚಿಸಿರುವುದು ಮೇ 20ರಂದು. ಅಂದರೆ ವಿದ್ಯುತ್ ದರ ಪರಿಷ್ಕರಣೆ ಅಧಿಸೂಚನೆಯ ನಂತರ ಎಂದು ಸ್ಪಷ್ಟೀಕರಣ ನೀಡಿದೆ.

ವಿದ್ಯುತ್ ದರ ಪರಿಷ್ಕರಣೆಯು 2023ರ ಜೂನ್ ಬಿಲ್ಲಿಂಗ್​ನಿಂದ ಅನ್ವಯವಾಗುವಂತೆ ಜಾರಿಗೆ ಬಂದಿದೆ. ಎರಡು ತಿಂಗಳ ವಿದ್ಯುತ್ ದರ ಹೆಚ್ಚಳದ ಪರಿಣಾಮ ಮತ್ತು 2023 ಮಾರ್ಚ್​ರಲ್ಲಿ ಹೆಚ್ಚಿನ ವಿದ್ಯುತ್ ವೆಚ್ಚ ಪಾವತಿಗಳ ಪರಿಣಾಮದಿಂದ ವಿದ್ಯುತ್ ದರ ಹೆಚ್ಚಾಗಿದೆ. ನಂತರದ ತಿಂಗಳುಗಳಲ್ಲಿ ದರಗಳು ತುಲನಾತ್ಮಕವಾಗಿ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ” ಎಂದು ಸ್ಪಷ್ಟೀಕರಣ ನೀಡಿದೆ.

ಪ್ರತಿ ಮನೆಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಯನ್ನು ಕಾಂಗ್ರೆಸ್ ಘೋಷಿಸಿದ ಕೆಲವೇ ದಿನಗಳಲ್ಲಿ ಪ್ರತಿ ಯೂನಿಟ್‌ಗೆ 2.89 ರೂ.ಗಳವರೆಗೆ ಹೆಚ್ಚಳ ಮಾಡಲಾಗಿತ್ತು. 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಪೂರ್ವಾವಲೋಕನದ ಪರಿಣಾಮದೊಂದಿಗೆ ಜೂನ್‌ನಿಂದ ಏರಿಕೆ ಮಾಡಲಾಗುತ್ತಿದೆ.

ಜುಲೈ 1ರಿಂದ ಬಳಕೆ ಮಾಡುವ ವಿದ್ಯುತ್ (200 ಯುನಿಟ್ ವರೆಗೆ) ಉಚಿತವಾಗಿರಲಿದೆ. ಇದಕ್ಕೂ ಮುಂಚಿನ ತಿಂಗಳ ಬಿಲ್​ ಅನ್ನು ಗ್ರಾಹಕರು ಪಾವತಿಸಬೇಕು ಎಂದು ಇಂಧನ ಇಲಾಖೆ ತಿಳಿಸಿದೆ. ಅಲ್ಲದೆ, ಗ್ರಾಹಕರ ಕುಂದುಕೊರತೆಗಳನ್ನು ಪರಿಶೀಲಿಸಲು ಮತ್ತು ಅವುಗಳನ್ನು ಪರಿಹರಿಸಲು ESCOMಗಳಿಗೆ ನಿರ್ದೇಶನ ನೀಡಿದ್ದು, ಸಂದರ್ಭಗಳನ್ನು ಅವಲಂಬಿಸಿ ESCOMಗಳು ಬಿಲ್‌ಗಳ ಪಾವತಿಗೆ ಸಮಯವನ್ನು ವಿಸ್ತರಿಸಬಹುದು ಎಂದು ತಿಳಿಸಿದೆ.

ದರ ಹೆಚ್ಚಳ ನಿರಾಕರಿಸಿದ್ದ ಬಿಜೆಪಿ ಸರ್ಕಾರ

ಪ್ರತಿಪಕ್ಷಗಳು ದರ ಏರಿಕೆ ವಿಚಾರವನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿವೆ. ಹಿಂದಿನ ಬಿಜೆಪಿ ಸರ್ಕಾರ, ವಿದ್ಯುತ್ ದರ ಪರಿಷ್ಕರಣೆಯನ್ನು ಅನುಮೋದಿಸಲು ನಿರಾಕರಿಸಿತ್ತು. ನಮ್ಮ ಅವಧಿಯಲ್ಲಿ ದರ ಹೆಚ್ಚಿಸಿಲ್ಲ. ನಾವು ಪರಿಷ್ಕರಣೆಯನ್ನು ತಿರಸ್ಕರಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿದ್ದು, ಇದರಿಂದ ಬಿಲ್‌ಗಳು ಹೆಚ್ಚಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Shivamogga: ವಿದ್ಯುತ್ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ, ಸಂಸದ ಬಿವೈ ರಾಘವೇಂದ್ರ ಪೊಲೀಸ್ ವಶಕ್ಕೆ

ಇದಾದ ನಂತರ ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ಕರ್ನಾಟಕದ ಹಲವೆಡೆ ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆಗಳು ಆರಂಭಗೊಂಡಿವೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಶಿಫಾರಸುಗಳ ಆಧಾರದ ಮೇಲೆ ವಿದ್ಯುತ್ ದರ ಹೆಚ್ಚಿಸಲಾಗಿದೆ. ನಾವು ಸುಂಕವನ್ನು ಹೆಚ್ಚಿಸಿದ್ದೇವೆ ಎಂದು ಬಿಜೆಪಿಯವರು ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಾಜಕೀಯ ಕೆಸರೆರಚಾಟದ ನಡುವೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ವಿದ್ಯುತ್ ದರ ಇಳಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯವನ್ನು ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ಪರಿಶೀಲಿಸಿ. ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಜಾರಿಗೊಳಿಸಿ ಎಂದು ಪತ್ರದಲ್ಲಿ ತಿಳಿಸಿದ್ದರು.

ನಿನ್ನೆಯಷ್ಟೇ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕೂಡ ದರ ಇಳಿಕೆಗೆ ಮನವಿ ಮಾಡಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಹೊಂದಿಸಲು ಪರದಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ವಿದ್ಯುತ್ ದರ ಇಳಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ