ಬೆಂಗಳೂರು ಮಳೆಗೆ ಯುವತಿ ಬಲಿ: ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಇನ್ಫೋಸಿಸ್ ಉದ್ಯೋಗಿ ದುರಂತ ಅಂತ್ಯ

|

Updated on: May 21, 2023 | 7:35 PM

ಪ್ರವಾಸಕ್ಕೆ ಬೆಂಗಳೂರಿಗೆ ಬಂದಿದ್ದ ಮಹಿಳೆಯೋರ್ವಳು ಬೆಂಗಳೂರಿನ ಮಹಾಮಳೆಗೆ ದುರಂತ ಅಂತ್ಯ ಕಂಡಿದ್ದಾಳೆ. ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ ತಡಮಾಡಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ ಎನ್ನುವ ಆರೋಪ ಕೇಳಿಬಂದಿವೆ.

ಬೆಂಗಳೂರು ಮಳೆಗೆ ಯುವತಿ ಬಲಿ: ಸೇಂಟ್‌ ಮಾರ್ಥಾಸ್‌ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಇನ್ಫೋಸಿಸ್ ಉದ್ಯೋಗಿ ದುರಂತ ಅಂತ್ಯ
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಸಂಜೆ ವೇಳೆ ಸುರಿದ ಭಾರಿ ಮಳೆಗೆ ಫರ್ವ ಯುವತಿ ಬಲಿಯಾಗಿರುವ ದುರ್ಘಟನೆ ನಡೆದಿದೆ. ನಗರದ ಹೃದಯ ಭಾಗದಲ್ಲಿರುವ ಕೆ.ಆರ್. ವೃತ್ತದ ಬಳಿಯಿರುವ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಕಾರು ಸಿಲುಕಿಕೊಂಡು ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವತಿಯನ್ನು ಭಾನುರೇಖಾ (22) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಇನ್ಫೋಸಿಸ್​ನ ಉದ್ಯೋಗಿಯಾಗಿದ್ದಳು. ಶಾಲೆ, ಕಾಲೇಜುಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿದ್ದ ಕುಟುಂಬಕ್ಕೆ ಬೆಂಗಳೂರು ತೋರಿಸಲು ಕರೆಯಿಸಿಕೊಂಡಿದ್ದಳು. ಆದ್ರೆ, ಬೆಂಗಳೂರಿನ ಮಹಾಮಳೆಗೆ ಭಾನುರೇಖಾ ದುರಂತ ಅಂತ್ಯಕಂಡಿದ್ದಾಳೆ.

ಇದನ್ನೂ ಓದಿ: Bangalore Rain: ಬೆಂಗಳೂರಿನಲ್ಲಿ ಭಾರೀ ಮಳೆ: ಅಂಡರ್​ಪಾಸ್​ನಲ್ಲಿ ಮುಳುಗಿದ ಕಾರು, ಓರ್ವ ಮಹಿಳೆ ಸ್ಥಿತಿ ಗಂಭೀರ, ಸ್ಥಳಕ್ಕೆ ಸಿಎಂ ಭೇಟಿ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಯುವತಿ ಬಲಿ

ಬೆಂಗಳೂರಿನ ಕೆ.ಆರ್. ಸರ್ಕಲ್‌ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಮುಳುಗಿದ ಕಾರನಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಣೆ ಮಾಡುವಷ್ಟರಲ್ಲಿ ಯುವತಿ ಹಾಗೂ ವೃದ್ಧೆ ಇಬ್ಬರೂ ನೀರು ಕುಡಿದು ಅಸ್ವಸ್ಥರಾಗದ್ದರು. ಅವರನ್ನು ಕೂಡಲೇ ಹತ್ತಿರದಲ್ಲೇ ಇದ್ದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಆಸ್ಪತ್ರೆ ಸಿಬ್ಬಂದಿ ಯುವತಿ ಸ್ಥಿತಿ ಗಂಭೀರವಾಗಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳುವಲ್ಲಿ ನಿರಾಕರಿಸಿದ್ದಾರೆ.  ನಂತರ, ಪತ್ರಕರ್ತರು ತರಾಟೆಗೆ ತೆಗೆದುಕೊಂಡ ಬಳಿ ಸುಮಾರು ಅರ್ಧ ಗಂಟೆ ನಂತರ ಯುವತಿಯನ್ನು ಆಸ್ಪತ್ರೆಯೊಳಗೆ ಸೇರಿಸಿಕೊಂಡಿದ್ದಾರೆ. ಆದ್ರೆ, ಅಷ್ಟರಾಗಲೇ ಯುವತಿಯ ಜೀವ ಹೋಗಿದೆ. ಅರ್ಧ ಗಂಟೆಯೊಳಗೆ ಚಿಕಿತ್ಸೆ ನೀಡಿದ್ದರೆ ಯುವತಿ ಬದುಕುತ್ತಿದ್ದಳೋ ಏನೋ. ಆದ್ರೆ, ಆಸ್ಪತ್ರೆಯ ಅಮಾನವೀಯತೆಗೆ ಬಾಳಿ ಬದುಕಬೇಕಾಗಿದ್ದ ಯುವತಿಯ ಪ್ರಾಣ ನುಂಗಿದ್ದಾರೆ.

ಸೆಂಟ್ ಮಾರ್ಥಸ್ ಆಸ್ಪತ್ರೆ ಸಿಬ್ಬಂದಿ ಅಮನಾವೀಯ ಘಟನೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ‌. ಆಸ್ಪತ್ರೆ ಸಿಬ್ಬಂದಿ ಬೇಗ ಆಸ್ಪತ್ರೆಗೆ ದಾಖಲಿಸಿಕೊಂಡಿದ್ರೆ ಭಾನುರೇಖ ಪ್ರಾಣ ಉಳಿತಿತ್ತು ಅಂತ ಪ್ರತ್ಯಕ್ಷದರ್ಶಿ ಹಾಗೂ ಆಟೋ ಚಾಲಕ ಹೇಳಿದ್ದಾರೆ. ಸದ್ಯ ಭಾನು ರೇಖಾ ಕಣ್ಮುಂದೆ ಪ್ರಾಣ ಹೋಗಿರೋದನ್ನ ಕಂಡು ಅವರ ತಾಯಿ ಹಾಗು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಇನ್ನು ಘಟನಾ ಸ್ಥಳಕ್ಕೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ಪರಿಶೀಲಿಸಿದರು.  ಬಳಿಕ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಸ್ವಸ್ಥಗೊಂಡಿದ್ದ ಯುವತಿ ಭಾನು ಮೃತಪಟ್ಟಿದ್ದಾರೆ. ವಿಜಯವಾಡದವರು ಬೆಂಗಳೂರು ನೋಡಲು ಬಂದಿದ್ದರು. ದಿಢೀರ್ ಮಳೆ ಬಂದಿದ್ದರಿಂದ ನೀರು ತುಂಬಿ ದುರಂತ ಸಂಭವಿಸಿದೆ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ವಿಚಾರಣೆ ನಡೆಸಲಾಗುವುದು. ನಾವು ನಿರ್ಲಕ್ಷ್ಯ ಮಾಡಿಲ್ಲವೆಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ತನಿಖೆ ಬಳಿಕ ತಪ್ಪು ಮಾಡಿದ್ದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು. ಇನ್ನು ಮೃತ ಕುಟುಂಬಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಹಾಗೂ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.

ಇನ್ನು ಆಸ್ಪತ್ರೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ಮಾಡಿದ್ರೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

Published On - 5:49 pm, Sun, 21 May 23