ವೋಟರ್ ಐಡಿ ಹಗರಣ: ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡ ಬಂಧನ

ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಸಂಗ್ರಹಿಸಿರುವ ಆರೋಪದಡಿ ಚಿಲುಮೆ ಸಂಸ್ಥೆಯ ಮುಖ್ಯಸ್ಥ, ಪ್ರಮುಖ ಆರೋಪಿ ರವಿಕುಮಾರ್​​ನ ಸಹೋದರ ಕೆಂಪೇಗೌಡನನ್ನು ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಬಂಧಿಸಿದ್ದಾರೆ.

ವೋಟರ್ ಐಡಿ ಹಗರಣ:  ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಸಹೋದರ ಕೆಂಪೇಗೌಡ ಬಂಧನ
ಸಾಂದರ್ಭಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Nov 19, 2022 | 9:44 PM

ಬೆಂಗಳೂರು: ಬೆಂಗಳೂರಿನಲ್ಲಿ ಮತದಾರರ ವೈಯಕ್ತಿಕ ಮಾಹಿತಿ (ದತ್ತಾಂಶ) ಸಂಗ್ರಹಿಸಿರುವ ಆರೋಪದಡಿ ಚಿಲುಮೆ ಸಂಸ್ಥೆಯ ಮುಖ್ಯಸ್ಥ, ಪ್ರಮುಖ ಆರೋಪಿ ರವಿಕುಮಾರ್ ಸಹೋದರ ಕೆಂಪೇಗೌಡನನ್ನು ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಬಂಧಿಸಿದ್ದಾರೆ. ಇನ್ನೂ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್‌ ಪರಾರಿಯಾಗಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಕೆಂಪೇಗೌಡ ಪ್ರಕರಣಕ್ಕೆ ಬೇಕಾದ ಇಂಪಾರ್ಟೆಂಟ್ ಆರೋಪಿಯಾಗಿದ್ದಾನೆ. ಕೆಂಪೇಗೌಡ ಚಿಲುಮೆ ಸಂಸ್ಥೆಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ನೋಡಿಕೊಳ್ತಿದ್ದರು.

ಕಾಂಗ್ರೆಸ್ ವಿರುದ್ಧವೇ ಹಗರಣ ತಿರುಗಿಸಿದ ಬಿಜೆಪಿ, ಮಹತ್ವದ ದಾಖಲೆ ಬಿಡುಗಡೆ

ಬೆಂಗಳೂರಿನಲ್ಲಿ ವೋಟರ್  ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಪ್ರಕಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ರೆ, ಇತ್ತ ಈ ವಿಚಾರಕ್ಕೆ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಜಟಾಪಟಿ ಜೋರಾಗಿದೆ. ಇನ್ನು ಇದರ ಬಗ್ಗೆ ಮೊದಲಿಗೆ ಧ್ವನಿ ಎತ್ತಿ ದೂರು ದಾಖಲಿಸಿದ್ದ ಕಾಂಗ್ರೆಸ್​ ವಿರುದ್ಧವೇ ಇದೀಗ ಬಿಜೆಪಿ ಪ್ರತ್ಯಸ್ತ್ರ ಪ್ರಯೋಗಿಸಿದ್ದು,  ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಮಹತ್ವದ ದಾಖಲೆ ಬಿಡುಗಡೆ ಮಾಡಿದೆ.

ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಹಗರಣ ತಿರುಗಿಸಿದ ಬಿಜೆಪಿ, ಸ್ಫೋಟಕ ದಾಖಲೆಗಳ ಜತೆ ಕಾಂಗ್ರೆಸ್ ವಿರುದ್ಧ ದೂರು ಚುನಾವಣೆ ಆಯೋಗಕ್ಕೆ ದೂರು ನೀಡಿದೆ. ಚಿಲುಮೆ ಸಂಸ್ಥೆಗೆ ಅನುಮತಿ ಕೊಟ್ಟಿದ್ದೇ ಕಾಂಗ್ರೆಸ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ 2017ರಲ್ಲಿ ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿದೆ. 2017ರ ಸೆಪ್ಟೆಂಬರ್ 27ರಂದು ಬಿಬಿಎಂಪಿ ಅನುಮತಿ ಕೊಟ್ಟಿತ್ತು ಎಂದು ದೂರಿನಲ್ಲಿ ಹಲವು ದಾಖಲೆಗಳನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದೆ.

BBMP ವೈಟ್​​ಫೀಲ್ಡ್ ಉಪವಲಯದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ. ಬಿಎಲ್​​ಒಗಳು, ಜಿಲ್ಲಾಧಿಕಾರಿಗಳು, ಕಂದಾಯ ಅಧಿಕಾರಿಗಳ ಜೊತೆಗೂಡಿ ಮತದಾನ ಪಟ್ಟಿ ಪರಿಷ್ಕರಣೆ & ಇತರೆ ಕಾರ್ಯಗಳನ್ನ ನಿರ್ವಹಿಸಲು ಆದೇಶ ಹೊರಡಿಸಿತ್ತು ಎಂದು 2017ರ ಸೆಪ್ಟೆಂಬರ್​​ 27ರಂದು ಅನುಮತಿ ನೀಡಿದ್ದ ದಾಖಲೆ ಬಿಡುಗಡೆ ಮಾಡಿದೆ.

ಬಿಎಲ್ ಓಗಳ ಜೊತೆ ಸೇರಿಕೊಂಡು ನಿಯಮಾನುಸಾರ ಕೆಲಸ ನಿರ್ವಹಿಸಲು ಚಿಲುಮೆ ಸಂಸ್ಥೆಗೆ ಪಾಲಿಕೆ ಆದೇಶ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಬಿಎಲ್ ಓಗಳ ಬದಲಾಗಿ ತಾವೇ ಬಿಎಲ್ ಓಗಳಾಗಿ ನಕಲಿ ಐಡಿ ಸೃಷ್ಟಿಸಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿರುವ ಆರೋಪ ಬಂದಿದೆ. ಹೀಗಾಗಿ ಚಿಲುಮೆ ಸಂಸ್ಥೆ ತಪ್ಪು ಮಾಡಿದ್ರೆ ನಮ್ಮ ಪಕ್ಷಕ್ಕೇನು ಸಂಬಂಧ ಎಂದು ಬಿಜೆಪಿ ವಾದಿಸುತ್ತಿದೆ.

ಸಿದ್ದರಾಮಯ್ಯ ಅವಧಿಯಲ್ಲೇ ಆದೇಶ ಹಿನ್ನಲೆ ಸಿದ್ದರಾಮಯ್ಯನವರೇ ಪ್ರಮುಖ ಆರೋಪಿ ಎಂದು ಕೌಂಟರ್ ಸಿಎಂಗೆ ಗೊತ್ತಿರಲೇಬೇಕು ಎಂಬ ಸಿದ್ದರಾಮಯ್ಯ ವಾದವನ್ನೇ ಮುಂದಿಟ್ಟುಕೊಂಡು ಅಂದು ಆದೇಶ ನೀಡಿದ ಸಂದರ್ಭದಲ್ಲಿ ಸಿಎಂ ಆಗಿದ್ದಾಗ ಸಿದ್ದರಾಮಯ್ಯಗೆ ಗೊತ್ತಿರಲಿಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ.

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಕೇಳುತ್ತಿರುವ ಸಿದ್ದರಾಮಯ್ಯಗೆ ಈಗ ಇದೇ ದಾಖಲೆ ಮುಂದಿಟ್ಟು ಸಿದ್ದು ವಿರುದ್ಧವೇ ತನಿಖೆ ನಡೆಸಬೇಕು ಎನ್ನುವುದು ಬಿಜೆಪಿ ಆಗ್ರಹಿಸುತ್ತಿದೆ. ಈ ಪ್ರಕರಣದ ಬೀಜ ಬಿತ್ತಿದ್ದೇ ಅಂದಿನ ಕಾಂಗ್ರೆಸ್ ಸರ್ಕಾರ ಎನ್ನುತ್ತಿರುವ ಬಿಜೆಪಿ, ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯಲು ಕೆಲ ಸಚಿವರಿಗೆ ಪಕ್ಷದಿಂದ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಹೋರಾಡಲು ಬಿಜೆಪಿ ನಿರ್ಧರಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published On - 9:14 pm, Sat, 19 November 22

Web contact

TV9 Kannada

Read More
Follow Us