Justice Alok Aradhe: ಕರ್ನಾಟಕ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ನಿವೃತ್ತಿ ಹಿನ್ನೆಲೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕ

Karnataka High Court: ನ್ಯಾ. ಅಲೋಕ್ ಅರಾಧೆ ರಾಜ್ಯ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

Justice Alok Aradhe: ಕರ್ನಾಟಕ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ನಿವೃತ್ತಿ ಹಿನ್ನೆಲೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇಮಕ
ಕರ್ನಾಟಕ ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿ ಅಲೋಕ್ ಅರಾಧೆ
Edited By: ಸಾಧು ಶ್ರೀನಾಥ್​

Updated on: Jun 30, 2022 | 2:47 PM

ಬೆಂಗಳೂರು: ಇತ್ತೀಚೆಗೆ ರಾಜ್ಯವನ್ನು ಕಾಡಿದ ಹಿಜಾಬ್​ ವಿವಾದದಂತಹ ಪ್ರಕರಣಗಳನ್ನು ತಮ್ಮ ನ್ಯಾಯಪೀಠದಲ್ಲಿ ಇತ್ಯರ್ಥ ಮಾಡಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ (CJ Rituraj Awasthi) ನಿವೃತ್ತಿಯಾಗಲಿದ್ದಾರೆ (Retirement). ಹಾಗಾಗಿ ಅವರ ಸ್ಥಾನವನ್ನು ತುಂಬಲು ಹಂಗಾಮಿಯಾಗಿ ಅಲೋಕ್ ಅರಾಧೆ ನೇಮಕಗೊಂಡಿದ್ದಾರೆ. ನ್ಯಾ. ಅಲೋಕ್ ಅರಾಧೆ (Justice Alok Aradhe) ರಾಜ್ಯ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.

ಜಸ್ಟೀಸ್ ಅಲೋಕ್ ಅರಾಧೆ ಅವರು ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಜುಲೈ 3 (ಭಾನುವಾರ) ಪದಗ್ರಹಣ ಮಾಡಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ 62ನೇ ವರ್ಷಕ್ಕೆ ಕಾಲಿಡಲಿದ್ದು ಜುಲೈ 2 ರಂದು ನಿವೃತ್ತಿ ಹೊಂದಲಿದ್ದಾರೆ. ಸುಪ್ರೀಂಕೋರ್ಟ್​ (Supreme Court) ಜಡ್ಜ್​​ಗಳು ತಮ್ಮ 65ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರೆ ಹೈಕೋರ್ಟ್ ಜಡ್ಜ್​​ಗಳು ತಮ್ಮ 62ನೇ ವಯಸ್ಸಿನಲ್ಲಿ ನಿವೃತ್ತಿಯಾಗುತ್ತಾರೆ.

ಛತ್ತೀಸಗಢದ ಅಲೋಕ್ ಆರಾಧೆ ಅವರ ಪರಿಚಯ:

ಮಾನ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರು 1964 ರ ಏಪ್ರಿಲ್ 13 ರಂದು ಇಂದಿನ ಛತ್ತೀಸಗಢದ ರಾಜಧಾನಿ ರಾಯ್‌ಪುರದಲ್ಲಿ ಜನಿಸಿದರು. ವ್ಯಾಸಂಗ – B.Sc ಮತ್ತು LLB. ಜುಲೈ 12, 1988 ರಂದು ವಕೀಲರಾಗಿ ದಾಖಲಾದರು. ಏಪ್ರಿಲ್ 2007 ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು.

ಜಬಲ್‌ಪುರದಲ್ಲಿ ಮಧ್ಯಪ್ರದೇಶದ ಹೈಕೋರ್ಟ್‌ನಲ್ಲಿ ಸಿವಿಲ್ ಮತ್ತು ಸಾಂವಿಧಾನಿಕ, ಮಧ್ಯಸ್ಥಿಕೆ ಮತ್ತು ಕಂಪನಿ ವಿಷಯಗಳ ಕುರಿತು ಅಭ್ಯಾಸ ಮಾಡಿದ್ದಾರೆ. ಡಿಸೆಂಬರ್ 29, 2009 ರಂದು ಮಧ್ಯಪ್ರದೇಶದ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಮತ್ತು ಫೆಬ್ರವರಿ 15, 2011 ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು.

ಸೆಪ್ಟೆಂಬರ್ 16, 2016 ರಂದು ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ಗೆ ವರ್ಗವಾದರು. ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಯಾದ ಮೇಲೆ 17.11.2018 ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Law Minister Kiren Rijiju) ಟ್ವೀಟ್ ಮಾಡಿದ್ದಾರೆ.

Published On - 2:29 pm, Thu, 30 June 22

Web contact

TV9 Kannada

Read More
Follow Us