ಸ್ನೇಹಿತರಿಗೆ ಪ್ರಾಣವನ್ನಾದರೂ ಕೊಡಿ, ಬ್ಯಾಂಕ್ ಡೀಟೇಲ್ಸ್ ಕೊಡ್ಬೇಡಿ! ಯಾಕೆ ಗೊತ್ತಾ?
ಬೆಂಗಳೂರಿನಲ್ಲಿ ಆಘಾತಕಾರಿ ಸೈಬರ್ ವಂಚನೆ ನಡೆದಿದೆ. ಸ್ನೇಹಿತನನ್ನು ನಂಬಿದ ವಿದ್ಯಾರ್ಥಿಯೊಬ್ಬ ತನ್ನ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡಿದ್ದ. ಸ್ನೇಹಿತ ಆಯುಷ್ ಈ ಖಾತೆಯನ್ನು ದುರ್ಬಳಕೆ ಮಾಡಿಕೊಂಡು 7 ಕೋಟಿ ರೂಪಾಯಿ ವಹಿವಾಟು ನಡೆಸಿದ್ದಾನೆ. ಬ್ಯಾಂಕ್ ಮಾಹಿತಿ ನೀಡಿದ ನಂತರ ವಂಚನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. ಘಟನೆ ಕುರಿತು ಬೆಂಗಳೂರು ಉತ್ತರ ವಿಭಾಗ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಬೆಂಗಳೂರು, ಫೆಬ್ರವರಿ 23: ಸ್ನೇಹಿತರ ಬಳಿ ನಾವು ಜೀವನದ ಹಲವು ಗೌಪ್ಯ ಸಂಗತಿಗಳನ್ನು ಹಂಚಿಕೊಳ್ಳುತ್ತೇವೆ. ಅವರು ನಮ್ಮ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ನಂಬುತ್ತೇವೆ. ಹೀಗೆಯೇ ತನ್ನ ಸ್ನೇಹಿತನನ್ನು ನಂಬಿದ್ದ ವಿದ್ಯಾರ್ಥಿಯೊಬ್ಬ ಸೈಬರ್ ವಂಚನೆಯ (Cyber Crime) ಖೆಡ್ಡಾದಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಒಂದು ವರ್ಷದ ಗೆಳೆತನ ನಂಬಿದ ವಿದ್ಯಾರ್ಥಿ ತನ್ನ ಬ್ಯಾಂಕ್ ಖಾತೆಯ ವಿವರವನ್ನು ತನ್ನ ಸ್ನೇಹಿತನೊಂದಿಗೆ ಹಂಚಿಕೊಂಡು ಪೇಚೆಗೆ ಸಿಲುಕಿದ್ದಾನೆ.
ತನ್ನ ಖಾತೆ ಬ್ಲಾಕ್ ಆಗಿದೆ ಎಂದು ವಿವರ ಪಡೆದಿದ್ದ ಆಯುಷ್
ಒಂದು ವರ್ಷದ ಹಿಂದೆ ವಿದ್ಯಾರ್ಥಿಗೆ ಪರಿಚಯವಾಗಿದ್ದ ಆಯುಷ್, ತನ್ನ ಅಕೌಂಟ್ ಬ್ಲಾಕ್ ಆಗಿದೆ ಎಂದು ವಿದ್ಯಾರ್ಥಿ ಬಳಿ ಆತನ ಬ್ಯಾಂಕ್ ವಿವರಗಳನ್ನು ಕೇಳಿದ್ದ. ಆತನನ್ನು ನಂಬಿದ್ದ ವಿದ್ಯಾರ್ಥಿ ತನ್ನ ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಸಿಮ್ ಎಲ್ಲವನ್ನೂ ಆಯುಷ್ಗೆ ನೀಡಿದ್ದ. ಇದನ್ನೇ ಬಳಸಿಕೊಂಡ ಆಯುಷ್, ಅಕೌಂಟ್ ಮೂಲಕ ಸುಮಾರು 7 ಕೋಟಿ ರೂ. ಹಣ ವರ್ಗಾಯಿಸಿದ್ದು, ಇದೇ ವಿಚಾರದಿಂದ ಬ್ಯಾಂಕ್ ಇತ್ತೀಚೆಗೆ ವಿದ್ಯಾರ್ಥಿಯನ್ನು ಸಂಪರ್ಕಿಸಿದೆ.
ಇದನ್ನೂ ಓದಿ ಮಾರಕಾಸ್ತ್ರಗಳಿಂದ ಕೊಚ್ಚಿ, ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ!
ನಿಮ್ಮ ಅಕೌಂಟ್ ಮೂಲಕ ಸೈಬರ್ ವಂಚನೆ ನಡೆದಿದೆ ಎಂದು ವಿದ್ಯಾರ್ಥಿಗೆ ಬ್ಯಾಂಕ್ ಮಾಹಿತಿ ನೀಡಿದ್ದು, ನಂತರ ವಿದ್ಯಾರ್ಥಿಯ ಖಾತೆಯನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. ಈ ಘಟನೆ ಬಗ್ಗೆ ವಿದ್ಯಾರ್ಥಿ ತಕ್ಷಣ ಬೆಂಗಳೂರು ಉತ್ತರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
