ಕೆಐಎಡಿಬಿ ಹಂಚಿಕೆಯಲ್ಲಿ 4,248 ಕೋಟಿ ರೂ. ಬಾಕಿ: 4 ತಿಂಗಳಲ್ಲಿ ವಸೂಲಿ ಮಾಡುವಂತೆ ಸಚಿವ ಎಂಬಿ ಪಾಟೀಲ್​​ ಗಡುವು

| Updated By: ಗಂಗಾಧರ​ ಬ. ಸಾಬೋಜಿ

Updated on: Oct 13, 2023 | 8:43 PM

ನಗರದ ಖನಿಜ‌ ಭವನದಲ್ಲಿ KIADB ಪ್ರಗತಿ ಪರಿಶೀಲನಾ ಸಭೆ ಮಾಡಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ ಹಂಚಿಕೆ ನಿವೇಶನಗಳಿಂದ 4,248 ಕೋಟಿ ರೂ. ಬಾಕಿ ಹಣ ಬರಬೇಕಿದ್ದು, 4 ತಿಂಗಳಲ್ಲಿ ಕಟ್ಟುನಿಟ್ಟಾಗಿ ಬಾಕಿ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆಐಎಡಿಬಿ ಹಂಚಿಕೆಯಲ್ಲಿ 4,248 ಕೋಟಿ ರೂ. ಬಾಕಿ: 4 ತಿಂಗಳಲ್ಲಿ ವಸೂಲಿ ಮಾಡುವಂತೆ ಸಚಿವ ಎಂಬಿ ಪಾಟೀಲ್​​ ಗಡುವು
ಸಚಿವ ಎಂ.ಬಿ.ಪಾಟೀಲ್
Follow us on

ಬೆಂಗಳೂರು, ಅಕ್ಟೋಬರ್​​​ 13: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (KIADB) ಹಂಚಿಕೆ ನಿವೇಶನಗಳಿಂದ 4,248 ಕೋಟಿ ಬಾಕಿ ಹಣ ಬರಬೇಕಿದ್ದು, 4 ತಿಂಗಳಲ್ಲಿ ಕಟ್ಟುನಿಟ್ಟಾಗಿ ಬಾಕಿ ವಸೂಲಿ ಮಾಡುವಂತೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಖನಿಜ‌ ಭವನದಲ್ಲಿ KIADB ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಾಕಿ ವಸೂಲಿ ಮಾಡುವಲ್ಲಿ ವಿಫಲರಾದರೆ ಮಂಡಳಿ ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

5,932 ಕೈಗಾರಿಕಾ ಘಟಕಗಳಿಂದ 2,825 ಕೋಟಿ ರೂ. ಬಾಕಿ ಬರಬೇಕಾಗಿದೆ. ಎಸ್​​ಸಿ-ಎಸ್​ಟಿ ವರ್ಗಗಳ ಅಡಿಯಲ್ಲಿ 741 ಕೋಟಿ ರೂ. ಬಾಕಿ ಉಳಿದಿದೆ. ಜೊತೆಗೆ SC-ST ವರ್ಗಗಳಿಗೆ ನೀಡುವ ಸಬ್ಸಿಡಿ ಬಾಬ್ತಿನಲ್ಲಿ 680 ಕೋಟಿ ರೂ. ಬಾಕಿ ಇದೆ. ಉದ್ಯಮ ಸ್ಥಾಪಿಸಿ ತಮ್ಮ ಹೆಸರಿಗೆ ನಿವೇಶನ ಮಾಡಿಸಿಕೊಳ್ಳುವ ಕೊನೆ ಹಂತದಲ್ಲಿ ಇರುವವರು 2,100 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಅಂಥವರ ವಿರುದ್ಧ 4 ತಿಂಗಳೊಳಗೆ ಕ್ರಮ ಜರುಗಿಸಿ ಬಾಕಿ ವಸೂಲಿ ಮಾಡಲೇಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಡಲ್‌ಗಳಷ್ಟು ಹಣ ಯಾರದ್ದು? ಐಟಿ ರೇಡ್‌ ಬೆನ್ನಲ್ಲೇ ಹುಟ್ಟಿಕೊಂಡ ರಾಜಕೀಯ ನಂಟು!

ಲೋಡ್​ ಶೆಡ್ಡಿಂಗ್ ವಿಚಾರವನ್ನು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್​ ಗಂಭೀರವಾಗಿ ಪರಿಗಣಿಸಿದ್ದಾರೆ. ಕೇಂದ್ರ ಸರ್ಕಾರಕ್ಕೂ ಕೆ.ಜೆ.ಜಾರ್ಜ್ ಮನವಿ ಮಾಡಿಕೊಂಡಿದ್ದಾರೆ. ಕೈಗಾರಿಕೆಗಳಿಗೆ ಸ್ವಲ್ಪ ಕಷ್ಟ ಆಗಬಹುದು. ಕಷ್ಟ ಆಗದೇ ಇರುವ ತರಹ ನೋಡಿಕೊಳ್ಳುತ್ತೇವೆ. ಎಂಎಸ್ಎಂಇಗಳಿಗೆ ಸ್ವಲ್ಪ ಕಷ್ಟ ಆಗಬಹುದು, ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.

ಗುತ್ತಿಗೆದಾರರ ಮೇಲೆ ದಾಳಿ ಆದರೆ ಕಾಂಗ್ರೆಸ್​ಗೆ ಏನು ಸಂಬಂಧ?

ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ದುಡ್ಡು ಕಾಂಗ್ರೆಸ್​ನವರದ್ದು ಅಂತ ಇದೆಯಾ? ನಾವೂ ಹೇಳುತ್ತೇವೆ ಇದು ಬಿಜೆಪಿ ಹಣ, ಜೆಡಿಎಸ್ ಹಣ ಅಂತ. ಅವರು ಜೆಡಿಎಸ್​ನವರು, ಬಿಜೆಪಿಯವರು ಅಂತ ಹೇಳುತ್ತೇನೆ ಮುಂದೇನು? ಬೇಸ್ ಲೆಸ್ ಆರೋಪ ಇದು. ಕಮಿಷನ್ ವಿಚಾರ ಏನಿದ್ದರು ಅದು ಬಿಜೆಪಿಯದ್ದು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಲೋಡ್​ ಶೆಡ್ಡಿಂಗ್: ಕೊನೆಗೂ ಮೌನ ಮುರಿದ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಕೆಂಪಣ್ಣ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಪಾರದರ್ಶಕವಾಗಿರುವ ಎಲ್ಲ ಬಿಲ್ ಪೇಮೆಂಟ್ ನಾವು ಮಾಡುತ್ತಿದ್ದೇವೆ. ಎಲ್ಲಿ ಅನುಮಾನ‌ ಇದೆ ಅದನ್ನು ಮಾಡಿಲ್ಲ. ತರಾತುರಿಯಲ್ಲಿ ಎಲ್ಲವನ್ನೂ ಮಾಡುವುದಕ್ಕಾಗುತ್ತಾ ಎಂದರು. ಕೆಲವೊಂದು ಬಿಲ್ ಪೇಮೆಂಟ್ ಪ್ರಿಯಾರಿಟಿ ಮೇಲೆ ಮಾಡಬೇಕಾಗುತ್ತದೆ. ಪ್ರಿಯಾರಿಟಿ ನಾವೇ ನಿರ್ಧಾರ ಮಾಡುತ್ತೇವೆ.

ಕಾಂಗ್ರೆಸ್​ಗೂ ಐಟಿ ದಾಳಿಯಲ್ಲಿ ಸಿಕ್ಕಿರುವ ಹಣಕ್ಕೂ ಸಂಬಂಧ ಇಲ್ಲ. ಯಾವುದೋ ಗುತ್ತಿಗೆದಾರರ ಮೇಲೆ ದಾಳಿ ಆದರೆ ನಮಗೆ ಏನು ಸಂಬಂಧ? ಸಿದ್ದರಾಮಯ್ಯಗೆ ಲಿಂಕ್ ಮಾಡುವುದಕ್ಕೆ ಬಿಜೆಪಿ ಬಳಿ ದಾಖಲೆ ಇದೆಯಾ? ಬಜೆಟ್​ಗಿಂತ ಜಾಸ್ತಿ ಕೊಟ್ಟೋಗಿದ್ದಾರೆ ಬಿಜೆಪಿಯವರು. ಅವರದೇ ಹಣೆಬರಹ ಈಗ ಅನುಭವಿಸುತ್ತಿರುವುದು. ಸಿಕ್ಕ ಸಿಕ್ಕ ಕಡೆ ಬೇಕಾಬಿಟ್ಟಿ ಬಿಲ್ ಮಾಡಿಹೋಗಿದ್ದಾರೆ ಬಿಜೆಪಿಯವರು ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.