ಉದ್ಯಮಿಯ ಸ್ಮಾರ್ಟ್​​ವಾಚ್​ನಲ್ಲಿ ಸರೆಯಾಯ್ತು ಮಾಡಾಳ್ ಪ್ರಶಾಂತ್​​ ಲಂಚ ಪ್ರಕರಣ; ಬಿಜೆಪಿ ಶಾಸಕನ ಮಗ ಬಲೆಗೆ ಬಿದ್ದದ್ದು ಹೀಗೆ

|

Updated on: Mar 06, 2023 | 7:20 PM

ಮಾಡಾಳ್ ಪ್ರಶಾಂತ್ 40 ಲಕ್ಷ ಲಂಚ ಸ್ವೀಕಾರ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು, ಉದ್ಯಮಿ ಧರಿಸಿದ್ದ ಸ್ಮಾರ್ಟ್ ವಾಚ್​ನಲ್ಲಿ ಲಂಚದ ಕುರಿತು ರೆಕಾರ್ಡ್​ ಆಗಿರುವ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಉದ್ಯಮಿಯ ಸ್ಮಾರ್ಟ್​​ವಾಚ್​ನಲ್ಲಿ ಸರೆಯಾಯ್ತು ಮಾಡಾಳ್ ಪ್ರಶಾಂತ್​​ ಲಂಚ ಪ್ರಕರಣ; ಬಿಜೆಪಿ ಶಾಸಕನ ಮಗ ಬಲೆಗೆ ಬಿದ್ದದ್ದು ಹೀಗೆ
ಸ್ಮಾರ್ಟ್​​ವಾಚ್, ಮಾಡಾಳ್ ಪ್ರಶಾಂತ್
Follow us on

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರ ಪುತ್ರ ಮಾಡಾಳ್ ಪ್ರಶಾಂತ್ 40 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿರುವುದು ಜಗಜ್ಜಾಹೀರಾದ ವಿಷಯ. ಸದ್ಯ ಈ ಪ್ರಕರಣ ಬೆಳಕಿಗೆ ಬಂದಿದ್ದರ ಹಿಂದೆ ಕುತೂಹಲಕಾರಿ ವಿದ್ಯಮಾನವೊಂದು ನಡೆದಿರುವುದು ತಿಳಿದುಬಂದಿದೆ. ತನಿಖೆಗೆ ಸಹಕರಿಸಿದ್ದ ಉದ್ಯಮಿ ಧರಿಸಿದ್ದ ಸ್ಮಾರ್ಟ್ ವಾಚ್​ನಲ್ಲಿ ಲಂಚಕ್ಕೆ ಬೇಡಿಕೆ ಇಡುತ್ತಿರುವ ದೃಶ್ಯ ರೆಕಾರ್ಡ್​ ಆಗಿರುವ ಕುತೂಹಲಕಾರಿ ವಿಚಾರ ಬಯಲಾಗಿದೆ. ಉದ್ಯಮಿಯ ಸ್ಮಾರ್ಟ್ ವಾಚ್​​ನಲ್ಲಿದ್ದ ಕ್ಯಾಮರಾದಲ್ಲಿ, ಲಂಚ ನೀಡುತ್ತಿರುವ ವಿಡಿಯೋ ಹಾಗೂ ಸಂಭಾಷಣೆ ರೆಕಾರ್ಡ್ ಆಗಿದೆ. ಈ ಸಾಕ್ಷ್ಯಾಧಾರಗಳನ್ನು ಆಧರಿಸಿ ಇದೀಗ ಶಾಸಕನ ಪುತ್ರ ಜೈಲು ಪಾಲಾಗಿದ್ದಾರೆ.

ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಪ್ರಕಾರ, ಉದ್ಯಮಿ ಕಶ್ಯಪ್ ಹಾಗೂ ಅವರ ಸಹಚರರಾದ ಎಸ್​.ಮೂರ್ತಿ ಮತ್ತು ಪ್ರಶಾಂತ್ ನಡುವೆ ಗುತ್ತಿಗೆ ಪಡೆಯಲು 81 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಪ್ರಶಾಂತ್ ಮುಂಗಡವಾಗಿ 40 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. ಪ್ರಶಾಂತ್​ ಅವರ ಕಚೇರಿಯಲ್ಲಿ ಭದ್ರತಾ ವ್ಯವಸ್ಥೆ ಹೊಂದಿದ್ದು, ಯಾರಾದರೂ ಭೇಟಿಯಾಗಲು ಬಂದರೆ ಅವರ ಮೊಬೈಲ್ ಫೋನ್ ಮತ್ತು ಇತರ ವಸ್ತುಗಳನ್ನು ಹೊರಗೆ ಇಡುವ ವ್ಯವಸ್ಥೆ ಇದೆ. ಆದ್ದರಿಂದ ಉದ್ಯಮಿ ಸ್ಮಾರ್ಟ್ ವಾಚ್​ ಬಳಸಿದ್ದು, ಕಚೇರಿಯಲ್ಲಿ ನಡೆದ ಎಲ್ಲ ಘಟನಾವಳಿಗಳನ್ನೂ ವಾಚ್​ನಲ್ಲಿರುವ ಸ್ಪೈ ಕ್ಯಾಮೆರಾದಿಂದ ರೆಕಾರ್ಡ್ ಮಾಡಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬೀಳುವಂತೆ ಪ್ಲ್ಯಾನ್​ ರೂಪಿಸಲಾಗಿತ್ತು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಇದನ್ನೂ ಓದಿ: ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ ಮಾಡಾಳ್​​ ವಿರೂಪಾಕ್ಷಪ್ಪ

ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಗಮದಲ್ಲಿ ಭಾರೀ ಅವ್ಯವಹಾರ

ರಾಜ್ಯ ಸಾಬೂನು ಮತ್ತು ಮಾರ್ಜಕಗಳ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಮಧ್ಯೆ, ಕಳೆದ ವಾರ ಬೆಂಗಳುರು ಜಲ ಮಂಡಳಿ ಮತ್ತು ಒಳಚರಂಡಿ (BWSSB) ಮುಖ್ಯ ಲೆಕ್ಕಾಧಿಕಾರಿಯಾಗಿರುವ ಮಾಡಾಳ್ ಪ್ರಶಾಂತ್‌ ಅವರ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು 40 ಲಕ್ಷ ರೂ.ಗೂ ಹೆಚ್ಚು ಮೊತ್ತದ ಲಂಚ ಪಡೆಯುತ್ತಿರುವುದು ಬಯಲಾಗಿತ್ತು. ಬಳಿಕ ಅವರನ್ನು ಲೋಕಾಯುಕ್ತ ತಂಡ ಮಾರ್ಚ್ 2 ರಂದು ವಶಕ್ಕೆ ಪಡೆದಿತ್ತು.

ಇದನ್ನೂ ಓದಿ: Madal Virupakshappa: ಲೋಕಾಯುಕ್ತ ಎಫ್ಐಆರ್ ರದ್ದು ಕೋರಿ ಹೈಕೋರ್ಟ್​​​ಗೆ ಅರ್ಜಿ ಸಲ್ಲಿಸಿದ ಮಾಡಾಳ್ ವಿರೂಪಾಕ್ಷಪ್ಪ

ಪ್ರಕರಣದಲ್ಲಿ ಲೋಕಾಯುಕ್ತ ತಂಡ ಪ್ರಶಾಂತ್​ನನ್ನು ಬಂಧಿಸಿದೆ. ಆದರೆ ಶಾಸಕ ಹಾಗೂ ಕೆಎಸ್​ಡಿಎಲ್ ಅಧ್ಯಕ್ಷ ವಿರೂಪಾಕ್ಷಪ್ಪ ತಲೆಮರೆಸಿಕೊಂಡೇ ಇದ್ದಾರೆ. ಪ್ರಕರಣದಲ್ಲಿ ವಿರೂಪಾಕ್ಷಪ್ಪ ಪ್ರಮುಖ ಆರೋಪಿ ಆಗಿದ್ದಾರೆ. ಮಾರ್ಚ್ 2 ಮತ್ತು 3 ರಂದು ಲೋಕಾಯುಕ್ತರು ನಡೆಸಿದ ದಾಳಿಯಲ್ಲಿ ಪ್ರಶಾಂತ್ ಅವರ ವೈಯಕ್ತಿಕ ಕಚೇರಿಯಿಂದ 2 ಕೋಟಿ ರೂ. ಮತ್ತು ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದಲ್ಲಿ ಕೊಟ್ಯಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮಾಡಾಳ್ ರಕ್ಷಿಸುವ ಪ್ರಶ್ನೆಯೇ ಇಲ್ಲ; ಬಿಎಸ್​ವೈ

ಭ್ರಷ್ಟಾಚಾರ ಯಾರೇ ಮಾಡಿದ್ದರೂ ಅದು ಅಕ್ಷಮ್ಯ ಅಪರಾಧ. ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ನಮ್ಮ ಪಕ್ಷ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿಲ್ಲ. ವಿರೂಪಾಕ್ಷಪ್ಪರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಇಂದು ಅಥವಾ ನಾಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನವಾಗಬಹುದು ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್​ ಯಡಿಯೂರಪ್ಪ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.