ಕೆಂಪಣ್ಣ ಸೇರಿ 18 ಜನರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ಕೊಟ್ಟ ಸಚಿವ ವಿ.ಮುನಿರತ್ನ

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಮುನಿರತ್ನ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆಂಪಣ್ಣ ಸೇರಿ 18 ಜನರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಕೆ ಕೊಟ್ಟ ಸಚಿವ ವಿ.ಮುನಿರತ್ನ
ಸಚಿವ ಮುನಿರತ್ನ
Edited By:

Updated on: Sep 19, 2022 | 11:27 AM

ಬೆಂಗಳೂರು: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಮುನಿರತ್ನ(V Munirathna) ವಿರುದ್ಧ ಕಮಿಷನ್ ಆರೋಪ ಹಿನ್ನೆಲೆ ಸಚಿವ ವಿ.ಮುನಿರತ್ನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಕೆಂಪಣ್ಣ ಸೇರಿ 18 ಜನರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರ ಸಚಿವರ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿಕೊಂಡು ಬರ್ತಿದೆ. ಗುತ್ತೆಗೆದಾರರ ಸಂಘದವರು ಒಂದು ವರ್ಷಗಳಿಂದ ಆರೋಪ ಮಾಡ್ತಿದ್ದಾರೆ. ಆ ಮೇಲೆ ಮುಖ್ಯಮಂತ್ರಿಗಳು ಅವರನ್ನು ಕರೆದು ಮಾತಾಡಿದ್ರು, ಆರೋಪ ಮಾಡಿದ್ದನ್ನು ಬಿಟ್ಟಿಲ್ಲ. ಇವಾಗ ವಿಪಕ್ಷ ನಾಯಕರ ಮನೆಗೆ ಹೋಗಿ, ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು‌ ದೆಹಲಿ ಪ್ರವಾಸ ಸಂದರ್ಭದಲ್ಲಿ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಹೇಳಿದ್ದೆ. ಆ ಮೇಲೆ ಕೆಂಪಣ್ಣ ಬಳಿ ಇರುವ ದಾಖಲೆಗಳನ್ನು ಲೋಕಾಯುಕ್ತಕ್ಕೆ ಕೊಡಿ ಎಂದು ಕೇಳಿದ್ವಿ. 7 ದಿನಗಳ ಕಾಲಾವಕಾಶ ಕೊಟ್ರು ಅವ್ರು ಯಾವುದೇ ರೀತಿಯ ಪ್ರತಿಕ್ರಿಯೆ ಕೊಟ್ಟಿಲ್ಲ. ಅವ್ರು ಎಲ್ಲಿಯೂ ದಾಖಲೆ ಕೊಡುವ ಕೆಲಸ ಮಾಡಿಲ್ಲ. ಅವ್ರು ಕ್ಷಮೆನೂ ಕೇಳಿಲ್ಲ, ನಾನು ಕಳೆದ ತಿಂಗಳ 29ಕ್ಕೆ ಅವ್ರಿಗೆ ನೋಟಿಸ್ ಕೊಟ್ಟಿದ್ದೆ. ಆದರೆ ಅವ್ರು ದಾಖಲೆ ಬಿಡುಗಡೆ ಮಾಡದೆ ಇರೋದಕ್ಕೆ 30ಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೆ. ಇವಾಗ ಅವರ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದರು.

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿನಲ್ಲಿ ಅವ್ರು ಆಪಾದನೆ ಮಾಡಿದ್ದಾರೆ. ಅದಕ್ಕಾಗಿ ಅವ್ರು ದಾಖಲೆ ಕೊಡಬೇಕು. ಇಲ್ಲವಾದಲ್ಲಿ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಆಗುತ್ತದೆ. ನಮಗೆ ಇದರಿಂದ ಕೆಟ್ಟ ಹೆಸರು ಬಂದಿದೆ. ಹೀಗಾಗಿ ನ್ಯಾಯಾಲಯದಲ್ಲಿ ಒಂದು ರಿಟ್ ಅರ್ಜಿ ಹಾಕಿದ್ದೇವೆ. ನಾಲ್ಕು ತಿಂಗಳೊಳಗೆ ಇದನ್ನು ಮುಗಿಸುವಂತೆ ಕೋರ್ಟ್ ನಲ್ಲಿ ಮನವಿ ಮಾಡಿದ್ದೇನೆ. ಯಾಕೆಂದರೆ ನಾವು ಚುನಾವಣೆಗೆ ಹೋಗಬೇಕು. ಅದಕ್ಕಾಗಿ ನ್ಯಾಯಾಲಯದಲ್ಲಿ ಬೇಗ ಇತ್ಯರ್ಥ ಮಾಡಲು ರಿಟ್ ಅರ್ಜಿ ಕೂಡ ಹಾಕಿದ್ದೇನೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಮುನಿರತ್ನ ಕಿಡಿಕಾರಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:26 am, Mon, 19 September 22

Follow Us