ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್​ಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ

ಉದ್ಯಮಿ ಟಿವಿ ಮೋಹನ್ ದಾಸ್ ಪೈ ಅವರು ಬೆಂಗಳೂರಿನಲ್ಲಿ ಉದ್ಯಮ ಪೂರಕ ವಾತಾವರಣದ ಬಗ್ಗೆ ಮಾಡಿರುವ ಟ್ವೀಟ್​​ ಈಗ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಪೈ ಅವರ ಟ್ವೀಟ್​ ಬಗ್ಗೆ ಖರ್ಗೆ ಖಾರವಾದ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದಿದ್ದಾರೆ.

ಉದ್ಯಮಿ ಮೋಹನ್ ದಾಸ್ ಪೈ ಟ್ವೀಟ್​ಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ಷೇಪ
ಪ್ರಿಯಾಂಕ್ ಖರ್ಗೆ & ಮೋಹನ್ ದಾಸ್ ಪೈ
Edited By:

Updated on: Nov 29, 2023 | 3:40 PM

ಬೆಂಗಳೂರು, ನವೆಂಬರ್ 29: ಬೆಂಗಳೂರಿನಲ್ಲಿ ಐಟಿ ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡುವಲ್ಲಿ ಸರ್ಕಾರ ವಿಫಲವಾಗುತ್ತಿದೆ ಎಂಬರ್ಥದಲ್ಲಿ ಉದ್ಯಮಿ ಟಿವಿ ಮೋಹನ್​ ದಾಸ್ ಪೈ (TV Mohandas Pai) ಮಾಡಿರುವ ಟ್ವೀಟ್​ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋಹನ್ ದಾಸ್ ಪೈಗೆ ಮಾಹಿತಿ ಕೊರತೆ ಇದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಂದೇ ಒಂದು ಕಂಪನಿ ಕರ್ನಾಟಕ ಬಿಟ್ಟು ಹೋಗಿಲ್ಲ. ಕೆಲವರಿಗೆ ಕರ್ನಾಟಕ ವಿರೋಧಿ ಹೇಳಿಕೆ ನೀಡುವುದು ಹವ್ಯಾಸವಾಗಿಬಿಟ್ಟಿದೆ. ಪದೇ ಪದೇ ಈ ರೀತಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇದೇ ಮೋಹನ್ ದಾಸ್ ಪೈ ಬೇರೆ ಬೇರೆ ರಾಜ್ಯಗಳ ಕಂಪನಿಗೆ ಬಂಡವಾಳ ಹೂಡಿಕೆ ಮಾಡುವುದಿಲ್ಲವೇ? ಅವರು ಡೈವರ್ಸಿಫಿಕೇಷನ್ ಮಾಡಿದ್ರೆ ಸರಿ, ಬೇರೆಯವರು ಮಾಡಿದ್ರೆ ತಪ್ಪಾ? ಕನ್ನಡಿಗರ ಪರವಾಗಿ ಮಾತನಾಡುವುದು ಬಿಟ್ಟು ಈ ರೀತಿ ಮಾತನಾಡಬಾರದು. ಅವರು ಒಂದೇ ಒಂದು ಕಂಪನಿಯ ಉದಾಹರಣೆ ನೀಡಲಿ ನೋಡೋಣ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾಕುವುದು ಬೇಡ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇವರೇ (ಮೋಹನ್ ದಾಸ್ ಪೈ) ಅಲ್ವಾ ಎಲ್ಲ ವಿಷನ್ ಗ್ರೂಪ್​​​ನಲ್ಲಿ ಇದ್ದವರು? ಫಿಲಿಪ್ಸ್ ಇನೊವೇಶನ್ ರಾಜ್ಯಕ್ಕೆ ಬಂದಾಗ ಇವರು ಬೆನ್ನು ತಟ್ಟಿದ್ದರೇ? ಸಕಾರಾತ್ಮಕವಾಗಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡ್ತೇವೆ. ಅವರ ಮಾತುಗಳಿಂದ ನಮಗೆ ರಾಜ್ಯಕ್ಕೆ ಬಂಡವಾಳ ಬರುತ್ತದೆ ಎಂದು ಭಾವಿಸುತ್ತೇವೆ. ಪದೇ ಪದೇ ಯಾಕೆ ಹೀಗೆ ನೆಗೆಟಿವ್ ಆಗಿ ಮಾತನಾಡ್ತಾರೆ ಗೊತ್ತಿಲ್ಲ. ಯಾವ ಬಂಡವಾಳ ಕೂಡ ರಾಜ್ಯದಿಂದ ವಾಪಸ್ ಹೊರಗಡೆ ಹೋಗಿಲ್ಲ. ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವಂತ ವ್ಯಕ್ತಿ ಅವರಲ್ಲ. ಆದರೆ ಪದೇ ಪದೇ ಕರ್ನಾಟಕ ವಿರೋಧಿ ನಿಲುವು ತಾಳಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಉದ್ಯಮಿ ಟಿವಿ ಮೋಹನ್ ದಾಸ್ ಪೈ ಟ್ವೀಟ್​ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಹೀಗಿತ್ತು

ಮೋಹನ್ ದಾಸ್ ಪೈ ಟ್ವೀಟ್ ಹೀಗಿದೆ


‘ಐಟಿ ನಗರವೆಂಬ ಬೆಂಗಳೂರಿನ ಹೆಗ್ಗಳಿಕೆ ಹೈದರಾಬಾದ್ ಪಾಲಾಗುವುದೇ? ಕಳೆದ 10 ವರ್ಷಗಳಿಂದ ಸತತವಾಗಿ ಬೆಂಗಳೂರನ್ನು ನಿರ್ಲಕ್ಷಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ನಗರವನ್ನು ಸುಧಾರಿಸಲು ಸರ್ಕಾರವು ಹೆಚ್ಚು ಒತ್ತು ನೀಡಲಿದೆ ಎಂಬುದಾಗಿ ಭಾವಿಸುತ್ತೇವೆ’ ಎಂದು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಎಂ ಆಫ್ ಕರ್ನಾಟಕ, ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us