ಹೈಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಡೋಂಟ್​ ಕೇರ್; ಸೈಟ್​ಗಾಗಿ ಬಡ ಅಂಗವಿಕಲರ ಪ್ರತಿಭಟನೆ

ನಾಲ್ಕು ‌ತಿಂಗಳೊಳಗೆ ವಿಶೇಷ ಚೇತನರಿಗೆ ಹಕ್ಕುಪತ್ರ ನೀಡಿ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದ್ದರೂ ಅಧಿಕಾರಿಗಳು ಮಾತ್ರ ಬಡ ಅಂಗವಿಕಲರಿಗೆ ಸೈಟ್ ಹಂಚಿಕೆ ಮಾಡಿಲ್ಲ. ಹೀಗಾಗಿ ಹಕ್ಕುಪತ್ರಕ್ಕಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹೈಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಡೋಂಟ್​ ಕೇರ್; ಸೈಟ್​ಗಾಗಿ ಬಡ ಅಂಗವಿಕಲರ ಪ್ರತಿಭಟನೆ
ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದರೂ ಸೈಟ್ ಹಂಚಿಕೆ ಮಾಡದ ಅಧಿಕಾರಿಗಳ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ವಿಶೇಷ ಚೇತನರು
Rakesh Nayak Manchi

Updated on: Jun 25, 2023 | 9:12 PM

ಬೆಂಗಳೂರು: ನಾಲ್ಕು ‌ತಿಂಗಳೊಳಗೆ ಹಕ್ಕುಪತ್ರ ನೀಡಿ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಆದೇಶಿಸಿದ್ದರೂ ಅಧಿಕಾರಿಗಳು ಮಾತ್ರ ಬಡ ವಿಶೇಷ ಚೇತನರಿಗೆ ಸೈಟ್ ಹಂಚಿಕೆ ಮಾಡಿಲ್ಲ. ಹೀಗಾಗಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ‌ಕ್ಷೇತ್ರದ ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಳ್ಳೆಘಟ್ಟದಲ್ಲಿ ಇಂದು ನೂರಾರು ವಿಶೇಷ ಚೇತನರು ಹಕ್ಕುಪತ್ರಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.

ಕಣ್ಣು ಕಾಣಿಸಿದ,‌ ಕಿವಿ ಕೇಳಿಸದ, ಬಾಯಿ ಬಾರದ ಮತ್ತು ಕೈ ಕಾಲು ಸರಿಯಿಲ್ಲದ, ‌ಬುದ್ದಿಮಾಂದ್ಯರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ದಯವಿಟ್ಟು ನಮಗೆ ನಮ್ಮ ಸೈಟ್​ಗಳನ್ನು ಕೊಡಿ. ನಾವೆಲ್ಲರೂ ಅಂಗವಿಕಲರು, ನಿಮಗೆ ಹಣ ನೀಡಲು ನಮ್ಮ ಬಳಿ ಹಣ ಇಲ್ಲ. ಸೈಟ್ ಕೊಡದಿದ್ದರೆ ನಮಗೆ ವಿಷ ಕೊಟ್ಟು ಬಿಡಿ ನಾವೆಲ್ಲರೂ ಪ್ರಾಣ ಕಳೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಖುದ್ದಾಗಿ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಪತ್ರ ಬರೆದು ಸೈಟ್​ಗಳಿಗೆ ಹಕ್ಕುಪತ್ರ ನೀಡಲು ಹೇಳಿದರೂ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ವಿಶೇಷ ಚೇತನರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 3 ಸರ್ಕಾರ ಬದಲಾದರೂ ಶಾಲೆಗಳ ಪರಿಸ್ಥಿತಿ ಬದಲಾಗಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ತೀವ್ರ ತರಾಟೆ

ಕಳೆದ 14 ವರ್ಷಗಳಿಂದ 134 ಬಡ ವಿಶೇಷ ಚೇತನರು ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದರೂ ಸೈಟ್ ವಿತರಿಸಿಲ್ಲ. 2010 ರಲ್ಲಿ ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಸಾಧಿಕ್ ಕೆಂಗೇರಿಯ ರಾಮೋಹಳ್ಳಿಯ ಚಳ್ಳಗಟ್ಟದಲ್ಲಿ 134 ಬಡ ಅಂಗವಿಕಲರ ನಿವೇಶನಕ್ಕಾಗಿ ಐದು ಎಕರೆ ಜಾಗ ಮಂಜೂರು ಮಾಡಿದ್ದರು. ರಾಜೀವ್ ಗಾಂಧಿ ವಸತಿ ನಿಗಮದ ‌ಕಡೆಯಿಂದ ಸೈಟ್​ಗಳನ್ನು ನಿರ್ಮಿಸಲು 6 ಲಕ್ಷದ 90 ಸಾವಿರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

ಆದರೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಮಾತ್ರ ದೇಹದಲ್ಲಿ ನ್ಯೂನತೆಗಳಿರುವ ವಿಶೇಷ ಚೇತನರಿಗೆ ಹಕ್ಕುಪತ್ರ ನೀಡುತ್ತಿಲ್ಲ. ಹೀಗಾಗಿ ಇಂದು ತಮಗೆ ನೀಡಿರುವ ಸೈಟ್​​ಗಳ ಮುಂದೆ ಜಮಾಯಿಸಿದ ನೂರಾರು ವಿಶೇಷ ಚೇತನರು ಪ್ರತಿಭಟನೆ ಮಾಡಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us