Rohith Chakrathirtha: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣೆ ಸಮಿತಿ ವಿಸರ್ಜನೆ; ಸಿಎಂ ಹೇಳಿಕೆಯ ಒಳಾರ್ಥಗಳು ಹಲವು

|

Updated on: Jun 04, 2022 | 8:30 AM

Text Book Revision Committee: ಪಠ್ಯವನ್ನು ಓದದೇ ಕೇವಲ ವ್ಯಕ್ತಿಯನ್ನೇ ಗುರಿಯಾಗಿಸಿ ನಡೆಯುತ್ತಿದ್ದ ಟೀಕೆಯನ್ನು ಹಲವು ಆಕ್ಷೇಪಿಸಿದ್ದರು. ಮುಖ್ಯಮಂತ್ರಿಯ ಪತ್ರಿಕಾ ಹೇಳಿಕೆಯೂ ಪಠ್ಯಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದೆ.

Rohith Chakrathirtha: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣೆ ಸಮಿತಿ ವಿಸರ್ಜನೆ; ಸಿಎಂ ಹೇಳಿಕೆಯ ಒಳಾರ್ಥಗಳು ಹಲವು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಚಿಂತಕ ರೋಹಿತ್ ಚಕ್ರತೀರ್ಥ
Follow us on

ಬೆಂಗಳೂರು: ಹಿಂದುತ್ವ ಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಚಿಂತಕ ರೋಹಿತ್ ಚಕ್ರತೀರ್ಥ (Rohith Chkrathirtha) ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು (Text Book Revision Committee) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಸರ್ಜಿಸಿದ್ದಾರೆ. ಪಠ್ಯ ಪರಿಷ್ಕರಣೆಯ ಕ್ರಮಗಳ ಬಗ್ಗೆ ಎದ್ದಿರುವ ವಿವಾದಗಳ ಕಾರಣಕ್ಕೆ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಈ ಸಮಿತಿಯನ್ನು ವಿಸರ್ಜಿಸುತ್ತಿಲ್ಲ ಎಂಬ ಸೂಚನೆಯನ್ನೂ ಪತ್ರಿಕಾ ಪ್ರಕಟಣೆಯಲ್ಲಿ ಮುಖ್ಯಮಂತ್ರಿ ನೀಡಿದ್ದಾರೆ. ಪರೋಕ್ಷವಾಗಿ ಸಮಿತಿಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ’ ಎಂದು ಹೇಳಿದ್ದಾರೆ. ಈ ಪತ್ರಿಕಾ ಹೇಳಿಕೆಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಸಹಿಯೂ ಇದೆ.

ಸರ್ಕಾರದ ಈ ಕ್ರಮದೊಂದಿಗೆ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ವಿವಾದವೊಂದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಂತೆ ಆಗಿದೆ. ಆದರೆ, ಮುಖ್ಯಮಂತ್ರಿಯ ಈ ಕ್ರಮವು ಪಠ್ಯಪರಿಷ್ಕರಣೆ ವಿವಾದವನ್ನು ಸಂಪೂರ್ಣ ಶಮನ ಮಾಡಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ಆಗಿರುವ ಪಠ್ಯ ಪರಿಷ್ಕರಣೆ ತಿರಸ್ಕರಿಸಬೇಕು. ಅಂಬೇಡ್ಕರ್, ಕನ್ನಡ ಧ್ವಜ ಮತ್ತು ರಾಷ್ಟ್ರಕವಿ ಕುವೆಂಪು ಅವರಿಗೆ ಈ ಹಿಂದೆ ಅವಮಾನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ, ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯ ಮುಂದುವರಿಸಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದಾರೆ. ಆದರೆ ಅದು ಉಂಟು ಮಾಡಿದ ಅವಾಂತರಗಳು, ವಿವಾದಗಳು ಇನ್ನೂ ಜೀವಂತವಾಗಿವೆ. ಶಾಲೆಗಳು ಆರಂಭವಾದರೂ ಪಠ್ಯಪುಸ್ತಕಗಳು ಈವರೆಗೆ ಸಿಕ್ಕಿಲ್ಲ. ಕೊರೊನಾ ಕಾರಣದಿಂದ ಹಿಂದಿನ ಎರಡು ವರ್ಷ ಶಾಲೆಗಳು ಮುಚ್ಚಿದ್ದವು. ಈಗ ತಾನೆ ಶಾಲೆಗೆ ಹೊರಟಿರುವ ಮಕ್ಕಳಿಗೆ ತುರ್ತಾಗಿ ಬರಗೂರು ಸಮಿತಿ ರೂಪಿಸಿದ, ಈಗಾಗಲೇ ಲಭ್ಯವಿರುವ ಪಠ್ಯಪುಸ್ತಕಗಳನ್ನೇ ಒದಗಿಸಬೇಕಾಗಿ ವಿನಂತಿ. ದಯವಿಟ್ಟು ಇದನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬೇಡಿ. ಈಗ ವಿವಾದಕ್ಕೆ ಒಳಗಾಗಿರುವ ಪರಿಷ್ಕೃತ ಪುಸ್ತಕಗಳನ್ನು ಗೋದಾಮಿಗೆ ಕಳಿಸಿ. ನಂತರ ಅವುಗಳ ಪರಿಶೀಲನೆಗೆ ಸಮಿತಿ ಮಾಡಿ. ಮೊದಲು ಮಕ್ಕಳಿಗೆ ಮೊದಲಿನ ಪಠ್ಯಪುಸ್ತಕ ತುರ್ತಾಗಿ ಒದಗಿಸಿ’ ಎಂದು ಅಂಕಣಕಾರ ಸನತ್ ಕುಮಾರ ಬೆಳಗಲಿ ಒತ್ತಾಯಿಸಿದ್ದಾರೆ.

ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ನಡೆದ ಪಠ್ಯಪರಿಷ್ಕರಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ವೇಳೆ ಪಠ್ಯವನ್ನು ಓದದೇ ಕೇವಲ ವ್ಯಕ್ತಿಯನ್ನೇ ಗುರಿಯಾಗಿಸಿ ನಡೆಯುತ್ತಿದ್ದ ಟೀಕೆಯನ್ನು ಹಲವು ಆಕ್ಷೇಪಿಸಿದ್ದರು. ‘ಪಠ್ಯದಲ್ಲಿ ಏನಿದೆ, ಏನಿಲ್ಲ ಎನ್ನುವುದನ್ನು ಓದದೇ ಟೀಕೆಯ ಸುರಿಮಳೆ ಹರಿಸಲಾಗುತ್ತಿದೆ. ರೋಹಿತ್‌ ಚಕ್ರತೀರ್ಥ ಎನ್ನುವ ವ್ಯಕ್ತಿಯೇ ನಿಮ್ಮ ವಿರೋಧವಾದರೆ ಅಜಾತಶತ್ರುವನ್ನು ಹುಡುಕಿಕೊಂಡು ಪುಸ್ತಕ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ’ ಎಂದು ಪತ್ರಕರ್ತ ರಾಜೀವ್ ಹೆಗಡೆ ಫೇಸ್​ಬುಕ್​ನಲ್ಲಿ ಮಾಡಿದ್ದ ಪಬ್ಲಿಕ್ ಪೋಸ್ಟ್​ನಲ್ಲಿ ಅಭಿಪ್ರಾಯಪಟ್ಟಿದ್ದರು.

ಪಠ್ಯಪುಸ್ತಕ ಪರಿಷ್ಕರಣೆ ವಿವಾದವನ್ನು ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿರುವ ಅಂಶ ಮುಖ್ಯಮಂತ್ರಿ ಕಚೇರಿಯ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿದುಬರುತ್ತದೆ. ಪರಿಷ್ಕರಣೆ ಸಮಿತಿಯ ವಿವಿಧ ನಿರ್ಣಯಗಳಿಗೆ ಎದ್ದ ಆಕ್ಷೇಪಗಳು ಮತ್ತು ಸಮಿತಿಯ ಅಧ್ಯಕ್ಷರ ಬಗ್ಗೆ ಹಲವರು ವ್ಯಕ್ತಪಡಿಸಿದ್ದ ಆಕ್ರೋಶಗಳನ್ನೂ ಪರೋಕ್ಷವಾಗಿ ಪತ್ರಿಕಾ ಹೇಳಿಕೆಯಲ್ಲಿ ಪ್ರಸ್ತಾಪಿಸಲಾಗಿದ್ದು, ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ. ಹಲವು ಆಕ್ಷೇಪಗಳಿಗೆ ಉತ್ತರ, ಸ್ಪಷ್ಟನೆಯನ್ನೂ ಕೊಟ್ಟಿದೆ.

ಮುಖ್ಯಮಂತ್ರಿ ಹೊರಡಿಸಿರುವ ಪತ್ರಿಕಾ ಹೇಳಿಕೆಯ ಮುಖ್ಯಾಂಶಗಳಿವು…

  1. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಮತ್ತು ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ.
  2. ಪ್ರಸ್ತುತ ಪಠ್ಯಪುಸ್ತಕದಲ್ಲಿರುವ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಹಲವು ಸ್ವಾಮೀಜಿಗಳು ಆಕ್ಷೇಪ ಮಾಡಿದ್ದಾರೆ. ಬಸವಣ್ಣನವರ ವಿಷಯಾಂಶದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯಿಂದ ರಚನೆಯಾದ ಪಠ್ಯಪುಸ್ತಕ ಮತ್ತು ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳೇ ಇವೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಪರಿಷ್ಕರಿಸಲಾಗುವುದು.
  3. ಕುವೆಂಪು ವಿರಚಿತ ನಾಡಗೀತೆಯನ್ನು ವಿಕೃತಗೊಳಿಸುವ ರೀತಿಯಲ್ಲಿ ಕವನ ಬರೆದ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲು ಸೈಬರ್ ಕ್ರೈಮ್ ಪೊಲೀಸರಿಗೆ ಸೂಚಿಸಲಾಗಿದೆ.
  4. ಪ್ರಸ್ತುತ ಪರಿಷ್ಕರಿಸುವ ಪಠ್ಯಪುಸ್ತಕದಲ್ಲಿ ಯಾವುದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸು ಸರ್ಕಾರಕ್ಕೆ ಇದೆ.
  5. ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯನ್ನು ಆಕ್ಷೇಪಾರ್ಹವಾಗಿ ವಿಕೃತಿಗೊಳಿಸಿದ ಅಂಶ ಪಠ್ಯಪುಸ್ತಕಗಳಲ್ಲಿ ಉಲ್ಲೇಖಗೊಂಡಿಲ್ಲ. ವಿಕೃತ ಕವನ ಬರೆದವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
  6. ಈ ಹಿಂದಿನ ಸಮಿತಿ ಸಿದ್ಧಪಡಿಸಿದ್ದ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಕುವೆಂಪು ಅವರ ಕುರಿತ 7 ಗದ್ಯ/ಪದ್ಯಗಳಿದ್ದವು. ಈಗ ಇದು 10ಕ್ಕೆ ಏರಿದೆ.
  7. ಹೊಸ ಪಠ್ಯಪುಸ್ತಕಗಳಲ್ಲಿ ನಾಡಪ್ರಭು ಕೆಂಪೇಗೌಡ ಕುರಿತ ಪಾಠವನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
  8. ಈ ಹಿಂದಿನ ಪಠ್ಯಪುಸ್ತಕಗಳಲ್ಲಿ ಇಸ್ಲಾಂ ಮತ್ತು ಕ್ರೈಸ್ತಧರ್ಮದ ಪರಿಚಯ ಇತ್ತು. ಈಗ ಹಿಂದೂ ಧರ್ಮದ ವಿಷಯವನ್ನೂ ಸೇರ್ಪಡೆ ಮಾಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಠ್ಯಪರಿಷ್ಕರಣೆ ಸಮಿತಿ ವಿಸರ್ಜಿಸಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:19 am, Sat, 4 June 22