
ರಾಮನಗರ, (ಮೇ 08): ಅದು ಬೊಂಬೆನಗರಿ ಚನ್ನಪಟ್ಟಣ (Channapatna) ಜನರ ಬಹುದಿನದ ಕನಸು. ನಮ್ಮ ತಾಲೂಕಿಗೂ ಬಿಎಮ್ ಟಿಸಿ ಬಸ್ (BMTC Bus) ಸೌಲಭ್ಯ ಓದಗಿಸಿ ಎಂದು ಕೇಳುತ್ತಿದ್ದರು. ಇದೀಗ ಕೊನೆಗೂ ಸಾರ್ವಜನಿಕರ ಬಹುದಿನದ ಕನಸು ನನಸಾಗಿದೆ. ಹೌದು…ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಮತ್ತು ಬೊಂಬೆಗಳ ನಾಡು ಚನ್ನಪಟ್ಟಣದ ನಡುವೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಬಿಎಂಟಿಸಿ (BMTC) ಭರ್ಜರಿ ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಎಸಿ ಬಸ್ ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇನ್ಮುಂದೆ ಜನರು ಬಿರು ಬೇಸಿಗೆಯಲ್ಲೂ ತಂಪಾಗಿ, ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.
ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿರೋ ಚನ್ನಪಟ್ಟಣದಿಂದ ಪ್ರತಿನಿತ್ಯ ಉದ್ಯೋಗ ಹಾಗೂ ಇತರೆ ಕೆಲಸಗಳಿಗಾಗಿ ಸಾವಿರಾರು ಜನರು ರಾಜಧಾನಿ ಬೆಂಗಳೂರಿಗೆ ಸಂಚಾರಿಸುತ್ತಾರೆ. ಆದರೆ ಸರಿಯಾದ ಸಮಯಕ್ಕೆ ಕೆಎಸ್ ಆರ್ ಟಿಸಿ ಬಸ್ ಗಳ ಸೌಲಭ್ಯವಿಲ್ಲದೇ ಸಾರ್ವಜನರಿಕರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ನಮಗೂ BMTC ಬಸ್ ಸೌಲಭ್ಯ ಕಲ್ಪಿಸಿ ಎಂದು ಮನವಿ ಮಾಡಿದ್ದು. ಇದೀಗ ಜನರ ಮನವಿಗೆ ಸ್ಪಂದಿಸಿರೋ ಸರ್ಕಾರ ಚನ್ನಪಟ್ಟಣಕ್ಕೂ ವಜ್ರ ವಿಸ್ತಾರ ಹವಾನಿಯಂತ್ರಿತ ಬಸ್ ಸೇವೆ ಓದಗಿಸಿದೆ.
ಅಂದಹಾಗೆ ಈ ಹಿಂದೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದವರೆಗೂ ಮಾತ್ರ ಈ ಬಸ್ ಗಳ ಸೌಲಭ್ಯ ದೊರೆತಿತ್ತು. ರಾಮನಗರದಿಂದ ಕೇವಲ 12 ಕಿಲೋಮೀಟರ್ ಇರೋ ರಾಜಧಾನಿಯಿಂದ 50 ಕಿಲೋಮೀಟರ್ ದೂರದಲ್ಲಿರೋ ಚನ್ನಪಟ್ಟಣಕ್ಕೆ ವಿಸ್ತರಿಸಲು ಮನವಿ ಮಾಡಲಾಗಿತ್ತು. ಅದರಿಂದ ಚನ್ನಪಟ್ಟಣಕ್ಕೂ ವಜ್ರ ವಿಸ್ತಾರ ಬಸ್ ಸೌಲಭ್ಯ ಸಿಕ್ಕಿದೆ. ಇನ್ನು ಇವತ್ತು ಶಾಸಕ ಸಿ ಪಿ ಯೋಗೇಶ್ವರ್ ಹಾಗೂ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್, ಬಸ್ ಗಳ ಓಡಾಟಕ್ಕೆ ಚಾಲನೆ ನೀಡಿದ್ದು, ಇಂದಿನಿಂದ ಪ್ರತಿನಿತ್ಯ ಎಂಟು ಬಸ್ ಗಳ ಓಡಾಟ ನಡೆಯಲಿದೆ. ಜೊತೆಗೆ ಇದರ ವಿಸ್ತರಣೆಯನ್ನ ಕನಕಪುರ ಸೇರಿ ಜಿಲ್ಲೆಯಾದ್ಯಂತ ಮಾಡಲು ಕೂಡ ಚಿಂತನೆ ಮಾಡಲಾಗಿದೆ.
ಬೆಂಗಳೂರು ಮತ್ತು ಚನ್ನಪಟ್ಟಣದ ನಡುವೆ ಕೇವಲ ಎಸಿ ಬಸ್ಗಳ ಸಂಚಾರ ಮಾತ್ರವಲ್ಲದೆ, ದಿನಕ್ಕೆ ಒಟ್ಟು 44 ಟ್ರಿಪ್ಗಳನ್ನು ಈ ಬಸ್ಗಳು ಕೈಗೊಳ್ಳಲಿವೆ. ಒಟ್ಟು 8 ಐಷಾರಾಮಿ ಎಸಿ ಬಸ್ಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿವೆ. ಇದರಿಂದಾಗಿ ಪ್ರತಿ ಅರ್ಧ ಅಥವಾ ಒಂದು ಗಂಟೆಗೊಮ್ಮೆ ಪ್ರಯಾಣಿಕರಿಗೆ ಎಸಿ ಬಸ್ ಸೌಲಭ್ಯ ದೊರೆಯಲಿದೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬರುವ ನೂರಾರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.
ಬೆಂಗಳೂರಿನ ಮೆಜೆಸ್ಟಿಕ್ನಿಂದ ಚನ್ನಪಟ್ಟಣಕ್ಕೆ ಪ್ರಯಾಣಿಸಲು ಬಿಎಂಟಿಸಿ 105 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ರೈಲು ಪ್ರಯಾಣಕ್ಕೆ ಹೋಲಿಸಿದರೆ ಸ್ವಲ್ಪ ದರ ಹೆಚ್ಚಿದ್ದರೂ, ಆರಾಮದಾಯಕ ಪ್ರಯಾಣ ಮತ್ತು ಸಮಯದ ಉಳಿತಾಯವನ್ನು ಗಮನಿಸಿದರೆ ಇದು ಸೂಕ್ತ. ಇನ್ನು ಈ ಬಸ್ಗಳು ಚನ್ನಪಟ್ಟಣದಿಂದ ಹೊರಟು ರಾಮನಗರ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಸ್ಟಾಪ್ ನೀಡಲಿವೆ. ಇದರಿಂದ ಈ ಎರಡು ಪ್ರಮುಖ ನಗರಗಳ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಒಟ್ಟಾರೆ ಚನ್ನಪಟ್ಟಣ ಜನರ ಬಹುದಿನದ ಬೇಡಿಕೆ ಈಡೇರಿದ್ದು, ಸಾರ್ವಜನಿಕರ ಸಂಸತಕ್ಕೂ ಕಾರಣವಾಗಿದೆ.