ರುದ್ರಭೂಮಿ ಜಾಗ ವ್ಯಕ್ತಿಯೊಬ್ಬರ ಹೆಸರಿಗೆ ಖಾತೆಯಾಯ್ತು, ಶವಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಡುವಂತಾಯ್ತು!

| Updated By: ಸಾಧು ಶ್ರೀನಾಥ್​

Updated on: Dec 23, 2022 | 2:53 PM

chamarajanagar: ಅನೇಕ ವರ್ಷಗಳಿಂದ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಈಗಲೂ ಸಹಾ ಇಲ್ಲೇ ಮಾಡುತ್ತೇವೆ ಎಂದು ಪಟ್ಟು ಹಿಡಿದ್ರು. ಈ ವೇಳೆ ಗ್ರಾಮಸ್ಥರು ಮತ್ತು ಜಮೀನು ಮಾಲೀಕರ ನಡುವೆ ಗಲಾಟೆ ನಡೆಯಿತು.

ರುದ್ರಭೂಮಿ ಜಾಗ ವ್ಯಕ್ತಿಯೊಬ್ಬರ ಹೆಸರಿಗೆ ಖಾತೆಯಾಯ್ತು, ಶವಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಡುವಂತಾಯ್ತು!
ಚಾಮರಾಜನಗರ: ಶವಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಡುವಂತಾಯ್ತು!
Follow us on

ಅದು ಮೂರು ಸಮುದಾಯದವರು ಅನ್ಯೋನ್ಯತೆಯಿಂದ ಬದುಕುತ್ತಿರುವ ಗ್ರಾಮ. ಆದ್ರೆ ಈಗ ಅಂತ್ಯಸಂಸ್ಕಾರ ಜಾಗದ ವಿಚಾರವಾಗಿ ರಣಾಂಗಣವಾಗಿ ಮಾರ್ಪಟ್ಟಿದೆ. ಇಷ್ಟು ದಿವಸ ರುದ್ರಭೂಮಿ (burial ground) ಆಗಿದ್ದ ಜಾಗ ಈಗ ವ್ಯಕ್ತಿಯೊಬ್ಬರ ಹೆಸರಿಗೆ ಖಾತೆ ಆಗಿದ್ದು, ಮೃತರ ಅಂತ್ಯಕ್ರಿಯೆಗೆ ಭೂಮಾಲೀಕರು (land dispute) ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಪರಸ್ಪರ ಹೊಡೆದಾಟದ ಹಂತಕ್ಕೆ ಪರಿಸ್ಥಿತಿ ತಲುಪಿತು. ಮರಣ ಹೊಂದಿದ ವೃದ್ದೆಯ ಶವದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಹೊಡೆದಾಟ (fight)… ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಲು ಬಿಡಲ್ಲ ಎಂದು ಗಲಾಟೆ ಮಾಡಿದ ಒಂದು ಗುಂಪು. ಇದೆಲ್ಲಾ ಕಂಡಬಂದದ್ದು ಚಾಮರಾಜನಗರ (chamarajanagar) ತಾಲೂಕಿನ ನಂಜೇದೇವನಪುರ ಗ್ರಾಮದಲ್ಲಿ. ಹೌದು ಗ್ರಾಮದ ಸಿದ್ದಮ್ಮ ಎಂಬ ವೃದ್ದೆ ಬುಧವಾರ ಮರಣ ಹೊಂದಿದ್ದರು. ಆಕೆಯ ಶವವನ್ನು ಇಂದು ಅಂತ್ಯಸಂಸ್ಕಾರ ಮಾಡುವ ವೇಳೆ ಎರಡು ಗುಂಪಿನ ನಡುವೆ ಗಲಾಟೆ ನಡೆಯಿತು.

ಯಾಕಂದ್ರೆ ಅಂತ್ಯಸಂಸ್ಕಾರ ಮಾಡಲು ಬಂದ ಜಾಗ ನಮ್ಮದು ಎಂದು ಗ್ರಾಮದ ಮಲ್ಲೇಗೌಡ ಮತ್ತು ಕುಟುಂಬದವರು ಜಗಳ ಮಾಡಿದ್ರು. ಈ ವೇಳೆ ಗ್ರಾಮಸ್ಥರು ಇದು ಸರ್ಕಾರಿ ಗೋಮಾಳದ ಜಾಗ. ಆದ್ರೆ ಮಲ್ಲೇಗೌಡ ಈ ಜಾಗವನ್ನು ಅಕ್ರಮವಾಗಿ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ರು.

ಅನೇಕ ವರ್ಷಗಳಿಂದ ಇದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಈಗಲೂ ಸಹಾ ಇಲ್ಲೇ ಮಾಡುತ್ತೇವೆ ಎಂದು ಪಟ್ಟು ಹಿಡಿದ್ರು. ಈ ವೇಳೆ ಗ್ರಾಮಸ್ಥರು ಮತ್ತು ಜಮೀನು ಮಾಲೀಕರ ನಡುವೆ ಗಲಾಟೆ ನಡೆಯಿತು. ಕೊನೆಗೂ ಅದೇ ಜಾಗದಲ್ಲಿ ಗ್ರಾಮಸ್ಥರು ಅಂತ್ಯಸಂಸ್ಕಾರ ಮಾಡಿದ್ರು.

ಇನ್ನು ಈ ಜಾಗ ನಮಗೆ ಸೇರಿದ್ದು ಎಂದು ಮಲ್ಲೇಗೌಡ ಕುಟುಂಬಸ್ಥರು ಹೇಳುತ್ತಾರೆ. ಜಮೀನು ನಮಗೆ ಸೇರಿದ್ದು ಎಂದು ನ್ಯಾಯಾಲಯವೇ ಇಂಜೆಕ್ಷನ್ ಆರ್ಡರ್ ನೀಡಿದೆ. ಹಾಗಿದ್ರೂ ಸಹ ಗ್ರಾಮಸ್ಥರು ಅಕ್ರಮವಾಗಿ ನಮ್ಮ ಜಮೀನಿಗೆ ನುಗ್ಗಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ರು. ಅಲ್ಲದೇ ಪೊಲೀಸರ ಎದುರಲ್ಲೇ ನಮ್ಮ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಇದು ನಮ್ಮದೇ ಜಾಗ -ನಮಗೆ ನ್ಯಾಯ ಬೇಕು ಎಂದು ಮಲ್ಲೇಗೌಡನ ಕುಟುಂಬಸ್ಥರು ಹೇಳುತ್ತಾರೆ.

ಸದ್ಯ ವಿವಾದಿತ ಜಾಗದಲ್ಲೇ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಒಟ್ಟಾರೆ ಶಾಂತಿಯುತವಾಗಿ ನಡೆಯಬೇಕಾಗಿದ್ದ ಅಂತ್ಯಕ್ರಿಯೆ ವಿವಾದದ ಗೂಡಾಗಿದ್ದು ಮಾತ್ರ ವಿಪರ್ಯಾಸ.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:51 pm, Fri, 23 December 22