ಚಾಮರಾಜನಗರದಲ್ಲಿ ಮತ್ತೆ ಆಕ್ಟೀವ್ ಆಯ್ತಾ ನಟೋರಿಯಸ್ ಕೇರಳಿಯನ್ ಗ್ಯಾಂಗ್?; ಕೆಜಿಗಟ್ಟಲೆ ಚಿನ್ನ ದರೋಡೆ
ಚಾಮರಾಜನಗರದ ಬಂಡೀಪುರದಲ್ಲಿ ನ. 20ರಂದು ಆಭರಣ ತಯಾರಕ ವಿನು ಅವರ ಕಾರನ್ನು ಅಡ್ಡಗಟ್ಟಿ, 1.3 ಕೆಜಿಗೂ ಹೆಚ್ಚು ಚಿನ್ನ ದರೋಡೆ ಮಾಡಲಾಗಿದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿ ಕಾರನ್ನು ತಡೆದು ಚಿನ್ನದೊಂದಿಗೆ ಆರೋಪಿಗಳು ಪರಾರಿಯಾಗಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೇರಳದ ಗ್ಯಾಂಗ್ವೊಂದು ಪೂರ್ವನಿಯೋಜಿತ ಕೃತ್ಯ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಚಾಮರಾಜನಗರ, ನವೆಂಬರ್ 23: ಗಡಿಜಿಲ್ಲೆ ಚಾಮರಾಜನಗರದಲ್ಲಿ (Chamarajnagar) ಆಭರಣ ತಯಾರಕನ ಕಾರು ಅಡ್ಡಗಟ್ಟಿ ಕೆಜಿಗಟ್ಟಲೆ ಚಿನ್ನ ದರೋಡೆ (Gold Theft) ಮಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಸಮೀಪ ನ. 20 ರಂದು ನಡೆದಿದ್ದು, ಶನಿವಾರ ದೂರು ದಾಖಲಾಗಿದೆ. ಪ್ರಕರಣವನ್ನು ಗಮನಿಸಿದರೆ ನಟೋರಿಯಸ್ ಕೇರಳಿಯನ್ ಗ್ಯಾಂಗ್ ಮತ್ತೊಮ್ಮೆ ತಮ್ಮ ಕೈಚಳಕ ತೋರಿರುವ ಶಂಕೆ ವ್ಯಕ್ತವಾಗಿದೆ.
ಕಾರಿನ ಸಮೇತ 1.3ಕೆಜಿ ಚಿನ್ನ ಕಳುವು
ನವೆಂಬರ್ 20ರ ರಾತ್ರಿ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ದರೋಡೆಯೇ ನಡೆದಿದ್ದು, ದರೋಡೆಗೆ ಒಳಗಾದ ಆಭರಣ ತಯಾರಕ ಕೇರಳ ರಾಜ್ಯದ ಕ್ಯಾಲಿಕೇಟ್ ನಿವಾಸಿ ವಿನು, ಎರಡು ದಿನಗಳ ಬಳಿಕ ಗುಂಡ್ಲುಪೇಟೆ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಕಾರು ಚಾಲಕ ಸಮೀರ್ ಹಾಗೂ ವಿನು, ಮಂಡ್ಯದ ರಾಜೇಶ್ ಜ್ಯುವೆಲರ್ಸ್ ಎಂಬಾತನಿಂದ ಆಭರಣ ತಯಾರಿಕೆಗಾಗಿ 800 ಗ್ರಾಂ 24 ಕ್ಯಾರೆಟ್ ಚಿನ್ನದ ಗಟ್ಟಿ ಹಾಗೂ 518 ಗ್ರಾಂ 22 ಕ್ಯಾರೆಟ್ ಚಿನ್ನವನ್ನು ಖರೀದಿಸಿ ಬಂಡೀಪುರದ ಮೂಲೆಹೊಳೆ ಮೂಲಕ ತೆರಳುತ್ತಿದ್ದರು. ಇದೇ ಸಮಯದಲ್ಲಿ ಎರಡು ಇನ್ನೋವಾ ಹಾಗೂ ಒಂದು ಇಟಿಯೋಸ್ ವಾಹನದಲ್ಲಿ ಬಂದ ದರೋಡೆಕೋರರು, ಮೊಬೈಲ್ ನೆಟ್ವರ್ಕ್ ಸಿಗದ ಸ್ಥಳದಲ್ಲಿ ಕಾರನ್ನು ಅಡ್ಡಗಟ್ಟಿ ಕಾರು ಸಮೇತ ಚಿನ್ನವನ್ನು ಅಪಹರಿಸಿದ್ದಾರೆ.
ಪೂರ್ವನಿಯೋಜಿತ ಸಂಚೆಂದು ಪೋಲೀಸರ ಶಂಕೆ
ಮೈಸೂರಿನ ವಿರಾಜಪೇಟೆಯ ರಸ್ತೆಯ ಜನನಿಬಿಡ ರಸ್ತೆಯಲ್ಲಿ ಆಭರಣ ತಯಾರಕನ ಕಾರು ನಿಲ್ಲಿಸಿ ಚಿನ್ನ ಕದ್ದೊಯ್ದ ಕದೀಮರು ಪರಾರಿಯಾಗಿದ್ದು, ಒಟ್ಟೂ 10-12 ಮಂದಿ ಸೇರಿ ಈ ಕೃತ್ಯವೆಸಗಿದ್ದಾರೆಂದು ವಿನು ತಿಳಿಸಿದ್ದಾರೆ. ಚಿನ್ನವನ್ನು ತರುವಾಗ ಕಾರು ಚಾಲಕ ಸಮೀರ್ ಹಾಗೂ ವಿನು ಮಾತ್ರ ಇದ್ದರು ಎಂದು ತಿಳಿದು ಬಂದಿದ್ದು, ದೂರು ದಾಖಲಾಗುತ್ತಿದ್ದಂತೆ ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಮೂಲೆಹೊಳೆ ಚೆಕ್ ಪೋಸ್ಟ್ ಗೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ Bengaluru: ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನಾಪ್ ಕೇಸ್; ಪೊಲೀಸಪ್ಪ ಸೇರಿ 8 ಮಂದಿ ಅರೆಸ್ಟ್
ಗುಂಡ್ಲುಪೇಟೆ ಠಾಣೆಯಲ್ಲಿ ದರೋಡೆಯ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದು, ಆಭರಣ ತಯಾರಕ ವಿನು ಸಲ್ಲಿಸಿದ ಚಿನ್ನದ ಕೆಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಚಿನ್ನ ಪಡೆಯುವ ಹಾಗೂ ಚಿನ್ನ ಸಾಗಾಟದ ಎಲ್ಲಾ ಮಾರ್ಗದ ಮಾಹಿತಿಯನ್ನು ಪಡೆದು ಪೂರ್ವನಿಯೋಜಿತವಾಗಿ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಈ ಹಿಂದಿನ ದರೋಡೆ ಪ್ರಕರಣ ಗಮನಿಸಿದರೆ ಕೇರಳದ ದರೋಡೆ ಗ್ಯಾಂಗ್ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಡಾ.ಬಿ.ಟಿ.ಕವಿತಾ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Sun, 23 November 25



