ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಕೃಷಿಗೆ ಗಂಡಾಂತರ ತಂದಿಟ್ಟಿದೆ! ವಿವರ ಇಲ್ಲಿದೆ

ಜಮೀನುಗಳಲ್ಲಿ ತುಂಬಿರುವ ನೀರು...ನೀರು ತುಂಬಿರುವುದರಿಂದ ಹಾಳಾಗಿರುವ ಬೆಳೆಗಳು....ಈ ದೃಶ್ಯವೆಲ್ಲಾ ನಿಮಗೆ ಚಾಮರಾಜನಗರ ಜಿಲ್ಲೆಯಾದ್ಯಂತ ಸದ್ಯ ಕಾಮನ್ ಆಗ್ಬಿಟ್ಟಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಕೃಷಿಗೆ ಗಂಡಾಂತರ ತಂದಿಟ್ಟಿದೆ! ವಿವರ ಇಲ್ಲಿದೆ
ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಕೃಷಿಗೆ ಗಂಡಾಂತರ ತಂದಿಟ್ಟಿದೆ!
Edited By: ಸಾಧು ಶ್ರೀನಾಥ್​

Updated on: Dec 22, 2022 | 6:06 AM

ಚಾಮರಾಜನಗರ ಜಿಲ್ಲೆ ಅಂದ್ರೆ ಮೊದಲು ಕಣ್ಣಿಗೆ ಕಟ್ಟುವುದು ಬರದ ಜಿಲ್ಲೆ ಎಂದು. ಈ ಜಿಲ್ಲೆಯಲ್ಲಿ ನೀರಿನ ಬರ (Drought) ಹೆಚ್ಚಾಗಿಯೇ ಇತ್ತು. ಇಷ್ಟು ದಿನ ಮಳೆ ಬಾರದೇ ರೈತರು ಸಂಕಷ್ಟ ಅನುಭವಿಸುತ್ತಿದ್ರು. ಆದ್ರೆ ಈಗ ಹೆಚ್ಚು ಮಳೆಯಾಗಿರುವುದರಿಂದ (Chamarajanagar rain) ರೈತರು (agriculture) ಮತ್ತೊಂದು ರೀತಿಯ ಸಂಕಷ್ಟಕ್ಕೆ ಈಡಾಗಿದ್ದಾರೆ.‌ ಯಾಕಂತೀರಾ? ಈ ವರದಿ ಓದಿ.

ಜಮೀನುಗಳಲ್ಲಿ ತುಂಬಿರುವ ನೀರು…ನೀರು ತುಂಬಿರುವುದರಿಂದ ಹಾಳಾಗಿರುವ ಬೆಳೆಗಳು….ಈ ದೃಶ್ಯವೆಲ್ಲಾ ನಿಮಗೆ ಚಾಮರಾಜನಗರ ಜಿಲ್ಲೆಯಾದ್ಯಂತ ಸದ್ಯ ಕಾಮನ್ ಆಗ್ಬಿಟ್ಟಿದೆ. ಯಾಕಂದ್ರೆ ಈ ವರ್ಷ ಸುರಿದ ಭಾರಿ ಮಳೆಯಿಂದ ಚಾಮರಾಜನಗರ ಜಿಲ್ಲೆ ಹಲವೆಡೆ ಜಲಾವೃತವಾಗಿತ್ತು. ಅಷ್ಟೆ ಅಲ್ಲದೆ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿದೆ. ಬೆಟ್ಟಗುಡ್ಡಗಳಿಂದ ಈಗಲೂ ಸಹ ನೀರು ಹರಿಯುತ್ತಲೆ ಇದೆ.

ಈ‌ ಕಾರಣದಿಂದ ಕೆರೆ‌ಗಳು ಈಗಲೂ ತುಂಬಿದ ಸ್ಥಿತಿಯಲ್ಲೆ ಇವೆ. ಇದ್ರಿಂದ ಮಳೆ ನಿಂತು ಮೂರ್ನಾಲ್ಕು ತಿಂಗಳುಗಳೇ ಕಳೆದ್ರೂ ಅದರ ಪರಿಣಾಮ ಇನ್ನೂ ಸಹಾ ಕಡಿಮೆಯಾಗಿಲ್ಲ. ಇನ್ನೂ ಸಹಾ ಜಮೀನಿನಲ್ಲಿ ನೀರು‌ ನಿಂತಿವೆ. ಕೆಲವೆಡೆ ಜಮೀನು ಉಳುಮೆ ಮಾಡಲು ಹೋದ್ರೆ ನೀರು ಬರ್ತಿದೆ. ಹೀಗಾಗಿ ರೈತರು ಬೆಳೆ ಬೆಳೆಯಲಾಗದೆ ಪರಿತಪಿಸುತ್ತಿದ್ದಾರೆ.

ರೈತರು ಬೆಳೆದಿದ್ದ ಬೆಳೆಗಳೆಲ್ಲಾ ಜಮೀನಿನಲ್ಲಿ ನೀರು ನಿಂತಿರುವುದರಿಂದ ಬೆಳೆದ ಬೆಳೆಗಳು ಸಹ ಹಾಳಾಗಿವೆ. ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತರ ಪಾಡು ಹೇಳತೀರದಾಗಿದೆ. ಹೀಗಾಗಿ ರೈತರು ಸರ್ಕಾರಕ್ಕೆ ಮನವಿಯನ್ನು ಸಹಾ ಮಾಡಿದ್ದಾರೆ. ಮಳೆಯಿಂದ ಬೆಳೆಗಳೆಲ್ಲಾ ಹಾಳಾಗಿವೆ. ಈಗ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ನಮಗೆ ಜೀವನ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ನಮಗೆ ಸೂಕ್ತ ಪರಿಹಾರ ನೀಡಿ ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆ ಜಿಲ್ಲೆಯ ರೈತರು ಇಷ್ಟು ದಿನ ಮಳೆ ಇಲ್ಲದೇ ಸಂಕಷ್ಟ ಪಡುತ್ತಿದ್ರು. ಆದ್ರೆ ಇದೀಗ ಮಳೆ ಜಾಸ್ತಿ ಬಂದಿದ್ದರಿಂದ ಕಷ್ಟ ಪಡುತ್ತಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರೈತರ ನೆರವಿಗೆ ಧಾವಿಸಲಿ ಎಂಬುದೇ ನಮ್ಮ ಆಶಯ.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Web contact

TV9 Kannada

Read More
Follow Us