ಏ.9 ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಕಾರ್ಯಕ್ರಮದ ವಿವರ, ಹೆದ್ದಾರಿ ಬಂದ್; ಇಲ್ಲಿದೆ ವಿವರ ​

|

Updated on: Apr 08, 2023 | 8:03 AM

ನಾಳೆ(ಏ.9) ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದು, ಬಂಡೀಪುರ, ಮುದುಮಲೈ ಅರಣ್ಯಪ್ರದೇಶ, ಬಳಿಕ ಮೈಸೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮದ ವಿವರ ಹೀಗಿದೆ.

ಏ.9 ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ: ಕಾರ್ಯಕ್ರಮದ ವಿವರ, ಹೆದ್ದಾರಿ ಬಂದ್; ಇಲ್ಲಿದೆ ವಿವರ ​
ಪ್ರಧಾನಿ ನರೇಂದ್ರ ಮೋದಿ
Follow us on

ಚಾಮರಾಜನಗರ: ಬಂಡೀಪುರ ಅರಣ್ಯವನ್ನ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು (Bandipur National Park) ಘೋಷಿಸಿ 50 ವರ್ಷಗಳು ಸಂದ ಹಿನ್ನಲೆ ನಾಳೆ (ಏ.9) ಪ್ರಧಾನಿ ನರೇಂದ್ರ ಮೋದಿ(Narendra Modi) ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಲಿದ್ದಾರೆ. ಹೌದು ಇಂದು(ಏ.8)  ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಬಳಿಕ ವಿಮಾನ‌ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ಱಡಿಸನ್​​​​​​​ ಬ್ಲೂ ಹೋಟೆಲ್​ಗೆ ತೆರಳಲಿದ್ದಾರೆ. ಇಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್​ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಂಡೀಪುರಕ್ಕೆ ತೆರಳಲಿದ್ದಾರೆ.

ಬಂಡೀಪುರದಲ್ಲಿ ಸಫಾರಿ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ

ಬಂಡೀಪುರದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಅದೇ ಸ್ಥಳದಲ್ಲಿ ಅಂಚೆ ಲಕೋಟಿ ಬಿಡುಗಡೆ ಗೊಳಿಸಿ ಬಳಿಕ ಬಂಡೀಪುರದ ಕಾಡಿನಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಸಫಾರಿ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಡೀಪುರದ ಎಲ್ಲಾ ಅರಣ್ಯ ಸಿಬ್ಬಂದಿಗಳಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಆರ್. ಟಿ. ಪಿ.ಸಿ.ಆರ್. ತಪಾಸಣೆ ನಡೆಸಲಾಗಿದೆ. ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ನಡೆಸಿ ನಂತರ ಮುದುಮಲೈ ಅರಣ್ಯಪ್ರದೇಶಕ್ಕೆ ಭೇಟಿ‌ ನೀಡಲಿದ್ದು, ಅಲ್ಲಿಯ ತೆಪ್ಪಕಾಡು ಆನೆಕ್ಯಾಂಪ್‌ನಲ್ಲಿ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಸನ್ಮಾನ ಮಾಡಲಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಮುಂದಿನ ವಾರ ಸುಮಾರು 71,000 ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವ ಸಾಧ್ಯತೆ

ದೇಶದ 12 ಹುಲಿಯೋಜನೆ ನಿರ್ದೇಶಕರ ಜೊತೆ ಪ್ರಧಾನಿ ಸಂವಾದ; ರಾಷ್ಟೀಯ ಹೆದ್ದಾರಿ ಬಂದ್​

ಹೌದು ನಂತರ ದೇಶದ 12 ಹುಲಿಯೋಜನೆ ನಿರ್ದೇಶಕರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ‌. ಈ ಹಿನ್ನೆಲೆ ಬಂಡೀಪುರ ಹಾಗೂ ಮಧುಮಲೈ ಮಾರ್ಗವಾಗಿ ಸಂಚರಿಸುವ ಎಲ್ಲ ವಾಹನಗಳ ತಪಾಸಣೆಯೂ ಸಹ ನಡೆಯುತ್ತಿದೆ. ಅದರಂತೆ ಇಂದು ಸಂಜೆ 4 ಗಂಟೆಯಿಂದ ನಾಳೆ ಮಧ್ಯಾಹ್ನ 12 ರವರಗೆ ಬಂಡೀಪುರ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ 181 ಹಾಗೂ ಕೇರಳ ರಾಜ್ಯಕ್ಕೆ ಸಂಪರ್ಕ ಕಲಿಸುವ ರಾಷ್ಟೀಯ ಹೆದ್ದಾರಿ 766 ಅನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.

ಪೋಲಿಸ್​ ಬೀಗಿಭದ್ರತೆ

ಮೋದಿ ಆಗಮನ ಹಿನ್ನಲೆ ಬಂಡೀಪುರದಲ್ಲಿ ಸಕಲ ಸಿದ್ದತೆ, ಭದ್ರತಾ ಕಾರ್ಯಗಳು ನಡೆಯುತ್ತಿವೆ. ಮತ್ತೊಂದೆಡೆ ಮೂರು ದಿನದ ಮೊದಲೇ ಎಸ್.ಪಿ.ಜಿ ಹಾಗೂ ಪೊಲೀಸ್ ತಂಡಗಳು ಬಂಡೀಪುರದ ಸುತ್ತ ಮುತ್ತ ಸರ್ಪಗಾವಲು ರೂಪಿಸಿದ್ದಾರೆ. ಅಲ್ಲದೇ ಇಂದು ಬೆಳಿಗ್ಗೆಯಿಂದಲೇ ಸೇನಾ ಹೆಲಿಕ್ಯಾಪ್ಟರ್ ಪರೀಕ್ಷಾರ್ಥ ಹಾರಾಟ ನಡೆಸಿ, ಬಂಡೀಪುರ ಹೊರ ವಲಯದ ಮೇಲುಕಾಮನ ಹಳ್ಳಿಯ ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ನಲ್ಲಿ ಪರೀಕ್ಷಾರ್ಥವಾಗಿ ಹೆಲಿಕ್ಯಾಪ್ಟರ್ ಸಹ ಲಾಂಡ್ ಮಾಡಲಾಯಿತು.

ಇದನ್ನೂ ಓದಿ:ಬೆಳಗಾವಿ-ಮಹಾರಾಷ್ಟ್ರ ಗಡಿ ವಿವಾದ: ಯಾಕೆ ಪ್ರಧಾನಿ ಮೋದಿ, ಅಮಿತ್ ಶಾ ಸಮಸ್ಯೆ ಬಗೆಹರಿಸುತ್ತಿಲ್ಲ? ಕಾಂಗ್ರೆಸ್ ಪ್ರಶ್ನೆ

ರಸ್ತೆ ಮೂಲಕ ಮೈಸೂರು ವಿಶ್ವ ವಿದ್ಯಾಲಯಕ್ಕೆ ಮೋದಿ ಆಗಮನ

ಹುಣಸೂರು ರಸ್ತೆ ಮೂಲಕ ನಾಳೆ ಬೆಳಗ್ಗೆ 10.30ಕ್ಕೆ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯಕ್ಕೆ ಆಗಮಿಸಿ ಕೆಎಸ್​ಒಯು ಘಟಿಕೋತ್ಸವ ಭವನದಲ್ಲಿ ಹುಲಿ ಸಂರಕ್ಷಣಾ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12.05ಕ್ಕೆ ಕೆಎಸ್​ಒಯುನಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ಹೆಲಿಪ್ಯಾಡ್​ಗೆ ತಲುಪಿ, ಬಳಿಕ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.35ಕ್ಕೆ ದೆಹಲಿಗೆ ವಾಪಸ್​ ಆಗಲಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:02 am, Sat, 8 April 23