ಮಂಡ್ಯ: ಅಂಧಕಾರದಲ್ಲಿ ಮುಳುಗಿದ ಸರ್ಕಾರಿ ಶಾಲೆ, ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಕರೆಂಟ್ ಕಟ್ ಮಾಡಿದ ಕೆಇಬಿ ಇಲಾಖೆ

ಅಸಲಿಗೆ ವರ್ಷಕ್ಕೆ ಇಷ್ಟೆಂದು ಸರ್ಕಾರಿ ಶಾಲೆಗಳಿಗೆ ಅನುದಾನ ಬರುತ್ತೆ. ಬರೋ ಅಲ್ಪಸ್ವಲ್ಪ ಅನುದಾನದಲ್ಲಿ ದಿನಸಿ ಖರೀದಿಸಿ ಶಾಲೆಯ ಮೂಲಭೂತ ಸೌಕರ್ಯಗಳನ್ನ ಪೂರ್ಣ ಗೊಳಿಸಿದ ಬಳಿಕ ಉಳಿಯುವುದು ಬರಿ ಪುಡಿಗಾಸು. ಇದರಿಂದ ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಾಗ್ತಾಯಿಲ್ಲ.

ಮಂಡ್ಯ: ಅಂಧಕಾರದಲ್ಲಿ ಮುಳುಗಿದ ಸರ್ಕಾರಿ ಶಾಲೆ, ವಿದ್ಯುತ್ ಬಿಲ್ ಬಾಕಿ ಹಿನ್ನೆಲೆ ಕರೆಂಟ್ ಕಟ್ ಮಾಡಿದ ಕೆಇಬಿ ಇಲಾಖೆ
ಕೆಇಬಿ ಬಿಲ್ ಬಾಕಿ ಹಿನ್ನೆಲೆ ಶಿವಪುರ ಸರ್ಕಾರಿ ಶಾಲೆ ಕರೆಂಟ್ ಕಟ್ ಮಾಡಿದ ಇಲಾಖೆ
Edited By: ಸಾಧು ಶ್ರೀನಾಥ್​

Updated on: Feb 07, 2023 | 4:12 PM

ಅವ್ರೆಲ್ಲಾ ಬಡ ಹಾಗೂ ರೈತರ ಮಕ್ಕಳು. ಖಾಸಗಿ ಶಾಲೆಗೆ (School) ಲಕ್ಷಗಟ್ಟಲೆ ಡೊನೇಷನ್ ಕಟ್ಟುವ ಶಕ್ತಿಯಿಲ್ಲದವರು.. ಸರ್ಕಾರಿ ಶಾಲೆಯನ್ನೆ ನಂಬಿ ಶಿಕ್ಷಣ ಪಡೆಯುತ್ತಿದ್ದ ಬಡ ವಿದ್ಯಾರ್ಥಿಗಳು ಈಗ ವಿದ್ಯುತ್ ಇಲ್ಲದೆ ಅಂಧಕಾರದಲ್ಲಿ ಪಾಠ ಕೇಳುವಂತಾಗಿದೆ. ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಕತ್ತಲಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು (Students). ವಿದ್ಯುತ್ ಇಲ್ಲದೆ (Electricity) ಮೂಲೆ ಗುಂಪಾಗಿರುವ ಗಣಕಯಂತ್ರಗಳು.. ಈಗ್ಲೊ ಆಗ್ಲಾ ಬೀಳೊ ಪರಿಸ್ಥಿತಿಗೆ ತಲುಪಿರುವ ಕಟ್ಟಡ.. ಸರಿಯಾಗಿ ಕೂರಲು ಸ್ಥಳವಿಲ್ಲದೆ ಪರಿ ತಪ್ಪಿಸುತ್ತಿರೊ ಶಿಕ್ಷಕ ವೃಂದ.. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಂಡ್ಯ ಜಿಲ್ಲೆ (Mandya) ಮದ್ದೂರು (Maddur) ತಾಲೂಕಿನ ಶಿವಪುರದಲ್ಲಿ.

ಹೌದು ಸರ್ಕಾರಿ ಶಾಲೆಯ ಅಸಲಿ ಮುಖವೀಗ ಬಟಾಬಯಲಾಗಿದೆ. ಸರ್ಕಾರಿ ಶಾಲೆ ಉಳಿಸಬೇಕು ಬೆಳೆಸಬೇಕೆಂದು ಪುಂಖಾನುಪುಂಖವಾಗಿ ಮಾತನಾಡುವ ಶಿಕ್ಷಣ ಸಚಿವರು, ರಾಜ್ಯ ಸರ್ಕಾರ ಕೇವಲ ಬಾಯಿ ಮಾತಿಗಷ್ಟೆ ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸುತ್ತೇವೆ ಎಂದು ಹೇಳ್ತಾಯಿದ್ದಾರೆ, ಪ್ರಾಮಾಣಿಕವಾಗಿ ಅದನ್ನು ಅನುಷ್ಠಾನಕ್ಕೆ ತರಲು ಮುಂದಾಗಿಲ್ಲ.

ಅಸಲಿಗೆ ವರ್ಷಕ್ಕೆ ಇಷ್ಟೆಂದು ಸರ್ಕಾರಿ ಶಾಲೆಗಳಿಗೆ ಅನುದಾನ ಬರುತ್ತೆ. ಬರೋ ಅಲ್ಪಸ್ವಲ್ಪ ಅನುದಾನದಲ್ಲಿ ದಿನಸಿ ಖರೀದಿಸಿ ಶಾಲೆಯ ಮೂಲಭೂತ ಸೌಕರ್ಯಗಳನ್ನ ಪೂರ್ಣ ಗೊಳಿಸಿದ ಬಳಿಕ ಉಳಿಯುವುದು ಬರಿ ಪುಡಿಗಾಸು. ಇದರಿಂದ ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಾಗ್ತಾಯಿಲ್ಲ. ಈ ಹಿನ್ನೆಲೆ ಬಾಕಿ ಪಾವತಿ ಮಾಡದ ಸರ್ಕಾರಿ ಶಾಲೆಯ ಕನೆಕ್ಷನ್ ಅನ್ನು ಕೆ.ಇ.ಬಿ (Chamundeshwari KEB Office) ಕಿತ್ತೊಗೆದಿದೆ.

ಬರೋಬ್ಬರಿ 40 ಸಾವಿರ ವಿದ್ಯುತ್ ಬಿಲ್ ಬಾಕಿಯಿರುವ ಕಾರಣ ವಿದ್ಯುತ್ ಕಡಿತಗೊಳಿಸಲಾಗಿದೆ. ಕರೆಂಟ್ ಇಲ್ಲದೆ ಬಡ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ಹಿಂದೆ ಉಳಿಯುವಂತಾಗಿದೆ. ಬಡವರು, ರೈತರ ಮಕ್ಕಳೇ ವ್ಯಾಸಂಗ ಮಾಡ್ತಾಯಿರುವ ಈ ಸರ್ಕಾರಿ ಶಾಲೆಯ ಪರಿಸ್ಥಿತಿ ಹೀಗಾದ್ರೆ ಮಕ್ಕಳಿಗೆ ಶಿಕ್ಷಣ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗ್ತಾಯಿದೆ.

ಅದೇನೆ ಹೇಳಿ ಸರ್ಕಾರದ ನಡೆ ಬಡ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗಿರುವುದಂತೂ ಸುಳ್ಳಲ್ಲ. ಇನ್ಮುಂದೆಯಾದರೂ ಸಮರ್ಪಕ ಅನುದಾನ ನೀಡುವ ಮೂಲಕ ಸರ್ಕಾರಿ ಶಾಲೆಯನ್ನ ಉಳಿಸಿ ಬೆಳೆಸೋ ಕಾರ್ಯವನ್ನ ರಾಜ್ಯ ಸರ್ಕಾರ ಮಾಡ್ಬೇಕಿದೆ.

ವರದಿ: ಸೂರಜ್ ಪ್ರಸಾದ್ ಟಿವಿ9 ಮಂಡ್ಯ

Published On - 4:09 pm, Tue, 7 February 23

Loading...
Unable to load recommendations.
Follow Us