ಊಟದಲ್ಲಿ ರುಚಿ ಇಲ್ಲ ಎಂದು ಸೋಂಕಿತರಿಂದ ಗಲಾಟೆ; ಒಬ್ಬೊಬ್ಬರಿಗೊಂದು ಅಡುಗೆ ಬಡಿಸಲು ಹೆಣಗಾಡುತ್ತಿರುವ ಕೊವಿಡ್ ಕೇರ್ ಸೆಂಟರ್ ಅಡುಗೆಯವರು
ಕೊವಿಡ್ ಕೇರ್ ಸೆಂಟರ್ನಲ್ಲಿರುವ ಸೋಂಕಿತರು ಆ ಅಡುಗೆ ಚೆನ್ನಾಗಿಲ್ಲ, ಈ ಅಡುಗೆ ನಮಗೆ ಮಾಡಿ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಅಡುಗೆ ಮಾಡಲು ಇಲ್ಲಿನ ಅಡುಗೆ ಭಟ್ಟರು ಹೆಣಗಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಕೊರೊನಾ ಎರಡನೇ ಅಲೆ ತೀವ್ರಾಗುತ್ತಿದ್ದಂತೆ ಸೋಂಕಿತರಿಗೆ ಬೆಡ್ ಇಲ್ಲ, ಆಕ್ಸಿಜನ್ ವ್ಯವಸ್ಥೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಕೂಗು ಕೇಳಿಬಂದಿತ್ತು. ಆದರೆ ಈಗ ಊಟದಲ್ಲಿ ರುಚಿ ಇಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಸಾಮಾನ್ಯವಾಗಿ ಕೊರೊನಾ ಸೋಂಕಿಗೆ ಒಳಗಾದವರ ಮೊದಲ ಲಕ್ಷಣವೇ ನಾಲಗೆಯ ರುಚಿ ಕೆಡುವುದು. ಆದರೆ ಚಿಕ್ಕಬಳ್ಳಾಪುರದ ಸೋಂಕಿತರು ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಕೊವಿಡ್ ಕೇರ್ ಸೆಂಟರ್ನಲ್ಲಿರುವ ಸೋಂಕಿತರು ಆ ಅಡುಗೆ ಚೆನ್ನಾಗಿಲ್ಲ, ಈ ಅಡುಗೆ ನಮಗೆ ಮಾಡಿ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ ಅಡುಗೆ ಮಾಡಲು ಇಲ್ಲಿನ ಅಡುಗೆ ಭಟ್ಟರು ಹೆಣಗಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರದ ರೇಣುಮಾಕಲಹಳ್ಳಿ ಗ್ರಾಮದ ಬಳಿ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕೊವಿಡ್ ಸೆಂಟರ್ನಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಕೆಲವರಿಗೆ ಊಟ ಕೊಟ್ಟರೆ ಸಪ್ಪೆ ಸೆದೆ ಇದ್ದಾಂಗ ಇದೆ ಎನ್ನುತ್ತಿದ್ದಾರೆ. ಇದರಿಂದ ಅಡುಗೆ ಭಟ್ಟರು ರುಚಿ ರುಚಿಯಾಗಿ ಅಡುಗೆ ಮಾಡಿದ್ದರು ಈ ರೀತಿಯ ಮಾತು ಕೇಳಿ ಬರುತ್ತಿದೆ ಎಂದು ಬೇಸರಗೊಂಡು ಮೇಲಾಧಿಕಾರಿಗೆ ದೂರು ನೀಡಿದ್ದಾರೆ. ನಂತರ ಜಿಲ್ಲಾ ಸರ್ಜನ್ ರುದ್ರಮೂರ್ತಿ ಈ ಗೊಂದಲಕ್ಕೆ ಉತ್ತರ ನೀಡಿದ್ದು, ಕೊರೊನಾ ಸೋಂಕು ಇರುವವರಲ್ಲಿ ಇದು ಸಹಜ ಅವರಿಗೆ ವಾಸನೆ ಮತ್ತು ನಾಲಿಗೆಯ ರುಚಿ ಕೆಟ್ಟಿರುತ್ತದೆ ಎಂದು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದ ಬಳಿ ಇರುವ ಆದಿಚುಂಚನಗಿರಿಯ ಕೊವಿಡ್ ಕೇರ್ ಸೆಂಟರ್ ನಲ್ಲಿ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 50 ಜನ ಕೊರೊನಾ ಸೋಂಕಿತರು ಇಲ್ಲಿ ಇದ್ದು, ಅವರಿಗೆ ಪ್ರತಿದಿನ ರುಚಿ ರುಚಿಯಾಗಿ ಊಟ ತಿಂಡಿ ಬಡಿಸಲಾಗುತ್ತಿದೆ. ಆದರೆ ಎಲ್ಲರಿಗೂ ಸರಿ ಹೊಂದುವ ಹಾಗೆ ರುಚಿ ರುಚಿಯಾಗಿ ಅಡುಗೆ ಮಾಡಿದರೂ, ಕೆಲವರಿಗೆ ಉಪ್ಪು, ಹುಳಿ ಕಾರ ಸಾಕಾಗುತ್ತಿಲ್ಲ ಎಂದು ಅಡುಗೆ ಭಟ್ಟರಾದ ಸುರೇಶ ಹೇಳಿದ್ದಾರೆ.
ಒಟ್ಟಾರೆಯಾಗಿ ಕೊವಿಡ್ ಸೆಂಟರ್ನಲ್ಲಿ ಇರುವ ರೋಗಿಗಳದ್ದು, ಒಬ್ಬರದು ಒಂದೊಂದು ರುಚಿಯಾಗಿದ್ದು, ಎಲ್ಲರಿಗೂ ಅವರವರ ರುಚಿಗೆ ತಕ್ಕಂತೆ ಊಟ ಸಿದ್ಧ ಮಾಡಿ ಬಡಿಸುವುದು ಕೊವಿಡ್ ಕೇರ್ ಸೆಂಟರ್ನಲ್ಲಿ ಇರುವ ಅಡುಗೆ ಭಟ್ಟರಿಗೆ ದೊಡ್ಡ ತಲೆ ನೋವಾಗಿದೆ ಎನ್ನುವುದು ಮಾತ್ರ ನಿಜ.
ಇದನ್ನೂ ಓದಿ:
ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುವ ಕೊರೊನಾ ಸೋಂಕಿತರು ರೆಮ್ಡೆಸಿವಿರ್ ಪಡೆಯಲೇಬಾರದು: ಏಮ್ಸ್ ವೈದ್ಯರ ಸಲಹೆ