ನಂದಿ ಬೆಟ್ಟ, ಸ್ಕಂದಗಿರಿಧಾಮಕ್ಕೆ 4 ದಿನ ಪ್ರವಾಸಿಗರಿಗೆ ನಿರ್ಬಂಧ
ಜುಲೈ 2 ರಂದು ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ನಂದಿ ಬೆಟ್ಟ ಮತ್ತು ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸಭೆಯ ಭದ್ರತೆ ಮತ್ತು ವಾಹನ ದಟ್ಟಣೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅತಿಥಿಗೃಹಗಳ ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಲಾಗಿದೆ.

ಚಿಕ್ಕಬಳ್ಳಾಪುರ, ಜೂನ್ 28: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ನಂದಿ ಬೆಟ್ಟದಲ್ಲಿ (Nandi Hill) ಬುಧವಾರ (ಜುಲೈ 2) ರಂದು ರಾಜ್ಯ ಸಚಿವ ಸಂಪುಟ ಸಭೆ (Cabinet Meeting) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಜೂನ್ 30ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 3ರ ಮಧ್ಯಾಹ್ನ 2 ಗಂಟೆವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
2025ನೇ ಸಾಲಿನ 14ನೇ ಸಚಿವ ಸಂಪುಟ ಸಭೆಯು ಜುಲೈ 2 ರಂದು ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರುಗಳು ಸೇರಿದಂತೆ ಆಯಾ ಇಲಾಖೆಯ ಅಧಿಕಾರಿಗಳು ಭಾಗಿಯಾಗುತ್ತಾರೆ. ಹೀಗಾಗಿ, ಮುಂಜಾಗೃತಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಜೂನ್ 30ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 3ರ ಮಧ್ಯಾಹ್ನ 2 ಗಂಟೆವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ.
ಇನ್ನು, ನಂದಿ ಬೆಟ್ಟದ ಮೇಲೆ ಇರುವ ಅತಿಥಿಗೃಹಗಳ ಕಾರ್ಯಾಚರಣೆ ಕೂಡ ಬಂದ್ ಮಾಡಲಾಗಿದೆ. ನಂದಿ ಬೆಟ್ಟಕ್ಕೆ ಹೋಗಲು ಹಾಗೂ ಬರಲು ಒಂದೇ ರಸ್ತೆ ಇದ್ದು ವಾಹನ ದಟ್ಟಣೆ ಹೆಚ್ಚಾಗುತ್ತದೆ. ನಂದಿಬೆಟ್ಟದಲ್ಲಿ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಕಷ್ಟ ಸಾದ್ಯ, ಈ ಹಿನ್ನೆಲೆಯಲ್ಲಿ ಪೊಲೀಸರು ನಂದಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ, ನಿರ್ಬಂಧ ವಿಧಿಸಲಾಗಿದೆ. ಚಾರಣಿಗರ ಅಚ್ಚುಮೆಚ್ಚಿನ ತಾಣ ಸ್ಕಂದಗಿರಿಗೂ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ರೈತರಿಗೆ ಮುಟ್ಟಿದ ನಂದಿನಿ ಹಾಲಿನ ದರ ಏರಿಕೆ ಹಣ: ಚಿಕ್ಕಬಳ್ಳಾಪುರದಲ್ಲಿ ಹರಿದ ಹಾಲಿನಹೊಳೆ
ರಾಜ್ಯ ಸಚಿವ ಸಂಪುಟದ ಎಪೇಕ್ಟ್ನಿಂದ ಪ್ರಕೃತಿ ಪ್ರೀಯರು ಜೂನ್ 30ರಿಂದ ಜುಲೈ 3ರವರೆಗೂ ನಂದಿ ಬೆಟ್ಟ ಹಾಗೂ ಸ್ಕಂದಗಿರಿಧಾಮದತ್ತ ಮುಖ ಮಾಡದಿರುವುದು ಒಳಿತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:49 pm, Sat, 28 June 25








