ಈಗ ದಾಳಿಂಬೆಗೆ ಬಂದಿದೆ ಚಿನ್ನದ ಬೆಲೆ; ರೈತನ ತೋಟಕ್ಕೆ ನುಗ್ಗಿ 5 ಲಕ್ಷ ರೂ ಮೌಲ್ಯದ ದಾಳಿಂಬೆ ಹಣ್ಣುಗಳ ಕಳ್ಳತನ ಮಾಡಿದರು!

| Updated By: ಸಾಧು ಶ್ರೀನಾಥ್​

Updated on: Sep 16, 2023 | 3:07 PM

ದಾಳಿಂಬೆಗೆ ಚಿನ್ನದ ಬೆಲೆ ಇರುವ ಕಾರಣ ಚಿಕ್ಕಬಳ್ಳಾಪುರ ತಾಲ್ಲೂಕಿನ ವಿವಿಧಡೆ ಕಳ್ಳತನ ನಡೆದಿವೆ. ರೈತರು ಪೊಲೀಸ್ ಠಾಣೆಗೆ ದೂರು ನೀಡಿದರೆ, ತೋಟಕ್ಕೆ ನೀವೇ ಕಾವಲು ಕಾಯಿರಿ ಎಂದು ಪೊಲೀಸರು ಉಚಿತ ಸಲಹೆ ನೀಡಿದ್ದಾರಂತೆ. ಆದರೂ ಪಟ್ಟುಬಿಡದ ಅಜ್ಜವಾರದ ರೈತ ಚನ್ನಕೇಶವ ಚಿಕ್ಕಬಳ್ಳಾಪುರ ಗ್ರಾ. ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ.

ಈಗ ದಾಳಿಂಬೆಗೆ ಬಂದಿದೆ ಚಿನ್ನದ ಬೆಲೆ; ರೈತನ ತೋಟಕ್ಕೆ ನುಗ್ಗಿ 5 ಲಕ್ಷ ರೂ ಮೌಲ್ಯದ ದಾಳಿಂಬೆ ಹಣ್ಣುಗಳ ಕಳ್ಳತನ ಮಾಡಿದರು!
ರೈತನ ತೋಟಕ್ಕೆ ನುಗ್ಗಿ 5 ಲಕ್ಷ ರೂ ಮೌಲ್ಯದ ದಾಳಿಂಬೆ ಹಣ್ಣುಗಳ ಕಳ್ಳತನ
Follow us on

ಉತ್ತಮ ಗುಣಮಟ್ಟದ ಒಂದು ಕೆ.ಜಿ. ದಾಳಿಂಬೆಗೆ (pomegranate) 200 ರೂಪಾಯಿಯಷ್ಟು ಚಿನ್ನದ ಬೆಲೆಯಿದೆ. ಇದರಿಂದ ಕಳ್ಳರ ಕಣ್ಣು ರೈತರ ದಾಳಿಂಬೆ ತೋಟಗಳ ಮೇಲೆ ಬಿದ್ದಿದೆ. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ ವರ್ಷವಿಡೀ ಬೆಳೆದಿದ್ದ ದಾಳಿಂಬೆಯನ್ನು ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡುವುದರ ಮೂಲಕ ರೈತನನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಈ ಕುರಿತು ಒಂದು ವರದಿ. ಕಳೆದ ಒಂದು ತಿಂಗಳ ಹಿಂದೆ ಟೊಮೆಟೋಗೆ ಚಿನ್ನದ ಬೆಲೆ ಬಂದಿತ್ತು. ಆಗ ಕಳ್ಳರು (thief) ಟೊಮೆಟೋ ಕದಿಯುತ್ತಿದ್ದರು. ಈಗ ಟೊಮೆಟೋ ನಂತರ ರೈತರು (farmer) ಬೆಳೆದ ದಾಳಿಂಬೆಗೆ ಚಿನ್ನದ ಬೆಲೆ ಬಂದಿದೆ. ಕೆಜಿ ದಾಳಿಂಬೆಗೆ 200 ರೂಪಾಯಿ ಬೆಲೆ ಇದೆ. ಇನ್ನು ಚಿಕ್ಕಬಳ್ಳಾಪುರ (chikkaballapur) ತಾಲ್ಲೂಕಿನ ಅಜ್ಜವಾರ ಗ್ರಾಮದ ರೈತ ಚನ್ನಕೇಶವ 3 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಗುಣಮಟ್ಟದ ದಾಳಿಂಬೆ ಬೆಳೆದಿದ್ದಾನೆ.

ಇನ್ನೇನು ದಾಳಿಂಬೆ ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸಬೇಕಿತ್ತು, ಅಷ್ಟರಲ್ಲಿ ಕಳ್ಳರ ದುಷ್ಟ ಕಣ್ಣು ರೈತನ ದಾಳಿಂಬೆ ಮೇಲೆ ಬಿದ್ದಿದೆ. ರಾತ್ರೋರಾತ್ರಿ ತೋಟಕ್ಕೆ ನುಗ್ಗಿ 5-6 ಟನ್‌ಗಳಷ್ಟು ದಾಳಿಂಬೆ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈಗಾಗಲೇ ರೈತರ ದಾಳಿಂಬೆ ತೋಟಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ರೈತ ಚನ್ನಕೇಶವ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ತೋಟದ ಸುತ್ತಲೂ ವಿದ್ಯುತ್ ತಂತಿ ಬೇಲಿ ಹಾಕಿಸಿದ್ದಾರೆ. ಜೊತೆಗೆ ತೋಟದ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲಿಟ್ಟಿದ್ದಾನೆ. ಅಲ್ಲಿಗೂ ಕರೆಂಟ್ ಇಲ್ಲದ ಸಮಯ ನೋಡಿಕೊಂಡು ಕಳ್ಳರು ತೋಟಕ್ಕೆ ನುಗ್ಗಿ ಕಟಾವಿಗೆ ಬಂದಿದ್ದ ದಾಳಿಂಬೆಯನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ! ಈ ರೀತಿಯಾದರೆ ರೈತರು ಬದುಕುವುದ್ಯಾಗೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ ರೈತ ರಾಜಣ್ಣ.

ಇನ್ನು ದಾಳಿಂಬೆಗೆ ಚಿನ್ನದ ಬೆಲೆ ಇರುವ ಕಾರಣ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ, ನಂದಿ ಕ್ರಾಸ್, ಚದಲಪುರ, ಪಟ್ರೇನಹಳ್ಳಿ, ನಾಯನಹಳ್ಳಿ ಸೇರಿದಂತೆ ತಾಲ್ಲೂಕಿನ ವಿವಿಧಡೆ ಕಳ್ಳತನಗಳು ನಡೆದಿವೆ. ರೈತರು ಪೊಲೀಸ್ ಠಾಣೆಗೆ ದೂರು ನೀಡಿದರೆ, ತೋಟಕ್ಕೆ ನೀವೇ ಕಾವಲು ಕಾಯಿರಿ ಎಂದು ಪೊಲೀಸರು ಉಚಿತ ಸಲಹೆ ನೀಡಿದ್ದಾರಂತೆ. ಆದರೂ ಪಟ್ಟುಬಿಡದ ಅಜ್ಜವಾರದ ರೈತ ಚನ್ನಕೇಶವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:04 pm, Sat, 16 September 23