ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆ, 3 ಬಂದೂಕುಗಳು ಪತ್ತೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ದಶಕಗಳ ಬಳಿಕ ನಕ್ಸಲ್ ಚಟುವಟಿಕೆ ಪುನರಾರಂಭವಾಗಿದೆ ಎಂಬ ಶಂಕೆಯಿಂದ ANF ಮತ್ತು ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ಕೊಪ್ಪ ತಾಲೂಕಿನಲ್ಲಿ ಮೂರು ಬಂದೂಕುಗಳು ಪತ್ತೆಯಾಗಿವೆ ಮತ್ತು ನಕ್ಸಲ್ ನಾಯಕಿ ಮುಂಗಾರು ಲತಾ ಭೇಟಿಯ ಸುಳಿವು ದೊರೆತಿದೆ.

ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆ, 3 ಬಂದೂಕುಗಳು ಪತ್ತೆ
ನಕ್ಸಲ್​ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ANF
Updated By: ವಿವೇಕ ಬಿರಾದಾರ

Updated on: Nov 12, 2024 | 11:23 AM

ಚಿಕ್ಕಮಗಳೂರು, ನವೆಂಬರ್​ 12: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamgaluru) ದಶಕದ ಬಳಿಕ ನಕ್ಸಲ್ (Naxal)​ ಚಟುವಟಿಕೆ ಆರಂಭವಾಗಿ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆ್ಯಂಟಿ ನಕ್ಸಲ್​ ಫೋರ್ಸ್​ (ANF) ಮತ್ತು ಪೊಲೀಸರು ತಪಾಸಣೆಗೆ ಇಳಿದಿದ್ದಾರೆ. ಈ ವೇಳೆ ಕೊಪ್ಪ ತಾಲೂಕಿನ ಕಡೆಗುಂಡಿ ಗ್ರಾಮದ ಸುಬ್ಬೆಗೌಡ ಎಂಬುವರ ಮನೆಯೊಂದರಲ್ಲಿ 3 ಬಂದೂಕು ಪತ್ತೆಯಾಗಿವೆ. ಈ ಮನೆಗೆ ನಕ್ಸಲ್ ನಾಯಕಿ ಮುಂಗಾರು ಲತಾ ಮತ್ತು ಆಕೆಯ ತಂಡ ಭೇಟಿ ನೀಡಿರುವ ಸುಳಿವು ಸಿಕ್ಕಿದೆ.

ಬಂದೂಕು ಸಿಕ್ಕಿರುವ ಸಂಬಂಧ ಜಯಪುರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್, ಸಿಐಟಿ ಎಡಿಜಿಪಿ ಪ್ರಣಬ್ ಮೊಹಂತಿ ಭೇಟಿ, ಪರಿಶೀಲನೆ ನಡೆಸಿದರು.

ಒತ್ತುವರಿ, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಕ್ಸಲರು ಕೊಪ್ಪ, ಶೃಂಗೇರಿ ತಾಲೂಕಿನಲ್ಲಿ ಸಭೆಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೆ ಇಬ್ಬರನ್ನು ವಶಕ್ಕೆ ಪಡೆದು ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ತೀವ್ರ ಕೂಂಬಿಂಗ್ ಕಾರ್ಯಚರಣೆ ನಡೆಯುತ್ತಿದೆ.

ಇದನ್ನೂ ಓದಿ: ಕೊಡಗು-ದಕ್ಷಿಣ ಕನ್ನಡ ಗಡಿಯಲ್ಲಿ ನಕ್ಸಲ್​ ಸದ್ದು; ಅಂಗಡಿಯಿಂದ ದಿನಸಿ ಖರೀದಿಸಿ ತೆರಳಿದ ಬಂದೂಕು ದಾರಿಗಳ ತಂಡ

ಉಡುಪಿ ಜಿಲ್ಲೆಯಲ್ಲೂ ಮತ್ತೆ ನಕ್ಸಲ್​ ಚಟುವಟಿಕೆ ಶಂಕೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಈದು ಗ್ರಾಮದಲ್ಲಿ ನಕ್ಸಲರ ಓಡಾಟದ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ನಕ್ಸಲ್​ ನಿಗ್ರಹ ಪಡೆ ಕಾರ್ಯಾಚರಣೆ ಮಾಡಿದ್ದರು. ಕೆಲವು ದಿನಗಳಿಂದ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಎಎನ್ಎಫ್ ಸಿಬ್ಬಂದಿ ಸ್ಥಳೀಯರನ್ನು ವಿಚಾಣೆ ಮಾಡಿದ್ದಾರೆ. ಆದರೆ ಸ್ಥಳೀಯರಿಂದ ಯಾವುದೇ ಮಾಹಿತಿ ದೊರೆತ್ತಿಲ್ಲ ಎಂಬುವುದು ಎಎನ್ಎಫ್ ಮೂಲಗಳು ತಿಳಿಸಿವೆ.

ನಕ್ಸಲರು ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳಲ್ಲಿ ನುಸುಳಿದ್ದಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಅರಣ್ಯ ಪ್ರದೇಶಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ. ಸದ್ಯ ಈದುವರೆಗೆ ನಕ್ಸಲ್​​ರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಎಎನ್​​ಎಫ್​​ ಅಧಿಕಾರಿಗಳು ಸ್ಥಳೀಯರಿಗೆ ಧೈರ್ಯ ಹೇಳಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ