ಚಿಕ್ಕಮಗಳೂರು: 59 ನೇ ವಯಸ್ಸಿನಲ್ಲಿ 34ರ ಮಹಿಳೆಯನ್ನು ಮೂರನೇ ಮದುವೆಯಾದ ಆರ್.ಎಫ್.ಓ, ಠಾಣೆ​ ಮೆಟ್ಟಿಲೇರಿದ ಹೆಂಡತಿಯರು

ಆತ ಅರಣ್ಯ ಇಲಾಖೆಯಲ್ಲಿ ಆರ್.ಎಫ್.ಓ. ವಯಸ್ಸು 59 ವರ್ಷ 10 ತಿಂಗಳು. ಇನ್ನೇನು 2 ತಿಂಗಳಲ್ಲಿ ನಿವೃತ್ತಿಯಾಗಲಿರುವ ಮುದಕ ಅಂದರೂ ತಪ್ಪಿಲ್ಲ. ಮೊದಲ ಹೆಂಡತಿ ಮಕ್ಕಳಿಗೆ ವಧು ಹುಡುಕಬೇಕಾದ ಈತ 34 ವಯಸ್ಸಿನ ಹುಡುಗಿಯ ಕೈಹಿಡಿದಿದ್ದಾನೆ. ಈ ಮೂಲಕ 59 ವರ್ಷಗಳಲ್ಲಿ 3 ಮದುವೆಯಾಗಿದ್ದಾನೆ. ಈ ಆರ್.ಎಫ್.ಓ. ಕಥೆ ಇಲ್ಲಿದೆ ನೋಡಿ.

ಚಿಕ್ಕಮಗಳೂರು: ಒಂದೆಡೆ ಗಂಡನ ಫೋಟೋ ಇಟ್ಟುಕೊಂಡು ಕಣ್ಣೀರು ಹಾಕುತ್ತಿರುವ ಮಹಿಳೆ. ಮತ್ತೊಂದೆಡೆ ಮೊದಲ ಹೆಂಡತಿ ಇರುವಾಗಲೇ ಸೆಕೆಂಡ್ ಮ್ಯಾರೇಜ್ ಆಗಿ ಸ್ಮೈಲಿಂಗ್ ಫೇಸ್‍ನಲ್ಲಿ ಮಿಂಚುತ್ತಿರುವ 59 ವರ್ಷದ ಆರ್.ಎಫ್.ಓ(R.F.O) ಇದೀಗ ಎರಡು ಹೆಂಡತಿಯರು ಇದ್ದರೂ ಕೂಡ  34ರ ಹುಡುಗಿಯ ಜೊತೆ ಮದುವೆಯಾಗಿ ಹುಟ್ಟುಹಬ್ಬ ಆಚರಿಸಿ ಕೆನ್ನೆಗೆ ಕೆನ್ನೆ ಇಟ್ಟು ಕೇಕ್ ತಿನ್ನಿಸುತ್ತಿದ್ದಾನೆ. ನ್ಯಾಯ ಕೇಳಿದ ಮೊದಲ ಹೆಂಡತಿಗೆ ನಿಂಗೇನು ಕಮ್ಮಿ ಮಾಡಿ ಬಂದಿದ್ದೇನೆ ಎಂದು ಆವಾಜ್ ಹಾಕುತ್ತಿದ್ದು, ಮೂರು ಹೆಣ್ಣುಮಕ್ಕಳ ಬಾಳಲ್ಲಿ ಕಣ್ಣಾಮುಚ್ಚಾಲೇ ಆಟವಾಡುತ್ತಿರುವ ಈ ಇತನ ಹೆಸರು ಮರೀಗೌಡ. ಹೌದು ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಇದೀಗ ಆರ್.ಎಫ್.ಓ. ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಅಧಿಕಾರಿ ಒಂದೇ ಮದುವೆ ಆಗಬೇಕು ಎಂಬ ಕಾನೂನು ಇದ್ದರೂ, ಇತ ಮೂರು ಮದುವೆಯಾಗಿದ್ದಾರೆ. ಇತನ ಮೊದಲನೇ ಹೆಂಡತಿಗೆ ಮೂರು ಮಕ್ಕಳು, ಎರಡನೇ ಹೆಂಡತಿಗೆ ಎರಡು ಮಕ್ಕಳು ಇದ್ದು ಒಟ್ಟು 5 ಮಕ್ಕಳನ್ನ ಕರುಣಿಸಿದ್ದಾರೆ. ಇದೀಗ 34ರ ಹುಡುಗಿಯ ಜೊತೆ ಮೂರನೇ ಬಾರಿ ಹಸೆಮಣೆ ಏರಿ 59ರ ಹರೆಯದಲ್ಲಿ ಹನಿಮೂನ್‍ಗೆ ಹೊರಟಿದ್ದಾರೆ ಎಂದು ಮೊದಲ ಪತ್ನಿ ಆರೋಪಿಸಿದ್ದಾಳೆ.

ಹೌದು ಈ ಮರೀಸ್ವಾಮಿ ಮೂಲತಃ ಕನಕಪುರ ತಾಲೂಕಿನ ಹೊಸಕಬ್ಬಳ ಗ್ರಾಮದವರು. ಮೊದಲ ಪತ್ನಿ ಪ್ಯಾರಿಜಾನ್ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಸೆಕೆಂಡ್ ವೈಫ್ ತೀರ್ಥ ತುಮಕೂರಿನ ಎಸಲೂರು ಗ್ರಾಮದವರು. ಇನ್ನು ಥರ್ಡ್ ವೈಫ್ ಜ್ಯೋತಿ ಮಂಗಳೂರಿನವರು. ಎರಡನೇ ಮದುವೆ ಬಗ್ಗೆ ಮೊದಲ ಹೆಂಡ್ತಿಗೆ ಗೊತ್ತಾದಾಗ 15 ಲಕ್ಷ ಕೊಟ್ಟು ಎರಡನೇ ಹೆಂಡತಿಗೆ ಸೈಲೆಂಟ್ ಮಾಡಿದ್ರಂತೆ. ಈ ವಿಷಯ ಕೋರ್ಟ್ ಮೆಟ್ಟಿಲೇರಿ. ನ್ಯಾಯಾಲಯದಲ್ಲೂ ಮೊದಲ ಹೆಂಡತಿ ಜೊತೆ ಇರ್ತೀನಿ ಎಂದ ಸ್ವಲ್ಪ ದಿನದಲ್ಲೇ ಮಂಗಳೂರಿನ ಜ್ಯೋತಿ ಜೊತೆ ಮೂರನೇ ಮ್ಯಾರೇಜ್ ಆಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ವಾಸವಿದ್ದಾರೆ. ಇದೀಗ ಈ ಅರಣ್ಯ ಅಧಿಕಾರಿಯ ಕಣ್ಣಾಮುಚ್ಚಾಲೆ ಆಟಕ್ಕೆ ಮೂರು ಹೆಣ್ಣು ಮಕ್ಕಳು ಕಣ್ಣೀರಿಡುವಂತಾಗಿದೆ. ಪ್ರಕರಣ ಸಂಬಂಧ ಗೋಣಿಬೀಡು ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಮಹಿಳೆಯರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂಓದಿ:ಚಿಕ್ಕಮಗಳೂರು: ಮೂಲಸೌಕರ್ಯ ಆಗ್ರಹಿಸಿ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ

37 ವರ್ಷದ ಹಿಂದೆ ಪ್ರೀತಿಯೇ ದೊಡ್ದದು ಎಂದು ಧರ್ಮ ಮೀರಿ ಮನೆಯವರನ್ನ ಎದುರುಹಾಕಿಕೊಂಡು ಮದ್ವೆಯಾದ ಮುಸ್ಲಿಂ ಮಹಿಳೆ ಇಂದು ಕಣ್ಣೀರಿಡುತ್ತಿದ್ದಾಳೆ. ಇತನ ಬಗ್ಗೆ ತಿಳಿದ ಮೇಲೆ ಮಕ್ಕಳ ಜೊತೆ ಕನಕಪುರದಲ್ಲಿ ವಾಸವಿದ್ದಾರೆ. ಈಕೆಗೆ ಮೂರು ಜನ ಮಕ್ಕಳಾದ ಮೇಲೆ ಆಕೆ ಮೇಲೆ ವ್ಯಾಮೋಹ ಕಡಿಮೆಯಾಗಿ ಅವಳನ್ನ ಬಿಟ್ಟು, ಒಬ್ಬರಾದ ಮೇಲೆ ಒಬ್ಬರಂತೆ ಮೂರು ಮದುವೆಯಾಗಿದ್ದಾರೆ ಎಂದು ಮೊದಲ ಪತ್ನಿ ಪ್ಯಾರಿಜಾನ್ ಆರೋಪಿಸಿದ್ದಾಳೆ. ಈಗ ವಿಷಯ ಮೊದಲ ಹೆಂಡತಿಗೆ ಗೊತ್ತಾಗಿ ಮೂರನೇ ಹೆಂಡತಿ ಮನೆಗೂ ಬಂದು ರಂಪ ಮಾಡಿದ್ದಾಳೆ.

ಒಟ್ಟಾರೆ ಮೊದಲ ಇಬ್ಬರು ಹೆಂಡತಿಯರು ಬದುಕಿರುವಾಗಲೇ ಮೂರನೇ ಮದ್ವೆ ಆದ ಈ ಭೂಪನಿಗೆ ಕಾನೂನಿನ ಯಾವ ಭಯವೂ ಇಲ್ಲ ಅನ್ನಿಸುತ್ತದೆ. ನಾನು ಮಾಡಿದ್ದೇ ಸರಿ ಎಂದು ಮಹಿಳೆಯರ ಬಾಳಲ್ಲಿ ಜಂಪಿಂಗ್ ಮಾಡುತ್ತಿರುವ ಇತನಿಗೆ ಕಾನೂನೇ ವಿಲನ್ ಆಗಬೇಕಿದೆ. ಸದ್ಯ ಮೋಸ ಹೋದ ಪತ್ನಿಯರು ಮಕ್ಕಳ ಭವಿಷ್ಯ ನೆನೆದು ಕಣ್ಣೀರಿಡುತ್ತಿದ್ದಾರೆ. ಈ ಮೋಸಗಾರನ ಪ್ರಣಯದಾಟಕ್ಕೆ ಶಿಕ್ಷೆಯಾಗುತ್ತಾ, ಕಾನೂನು ಏನ್ ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವರದಿ: ಅಶ್ವಿತ್ ಮಾವಿನಗುಣಿ ಟಿವಿ9 ಚಿಕ್ಕಮಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:14 am, Sat, 25 March 23

Loading...
Unable to load recommendations.
Follow Us