ಚಿಕ್ಕಮಗಳೂರು: 15 ದಿನಗಳಿಂದ ಚಾರ್ಮಾಡಿ ಘಾಟ್​ನಲ್ಲಿ ಕಾಡಾನೆ ಹಾವಳಿ; ಅನಾಹುತವಾಗುವ ಮೊದಲೇ ಆನೆ ಸ್ಥಳಾಂತರಕ್ಕೆ ಜನರ ಮನವಿ

ಅದು ಬದುಕಿನ ದಾರಿ, ಓದಿನ ಮಾರ್ಗ, ಜೀವ ಉಳಿಸೋ ಸಂಜೀವಿನಿಯ ಹೆದ್ದಾರಿ. ಆ ರಸ್ತೆ ಉಳಿಸಿರುವ ಜೀವಗಳಿಗೆ ಲೆಕ್ಕವೇ ಇಲ್ಲ. ನಿಸರ್ಗ ಮಾತೆಯ ಸೊಬಗನ್ನ ಸವಿಯೋಕೆಂದು ಪ್ರಕೃತಿಯೇ ಮಾಡಿರೋ ಆ ಮಾರ್ಗ ಪ್ರಯಾಣವೇ ರಣರೋಚಕ. ಆದ್ರೆ, ಆ ಮಾರ್ಗಕ್ಕೂ ಈಗ ಸಂಚಕಾರ ಬಂದೊದಗಿದೆ. ಅಂತಹ ಅನಿವಾರ್ಯತೆಯ ಮಾರ್ಗದಲ್ಲೀಗ ಸಾವಿನ ಸುಳಿವು ಎದ್ದು ಕಾಣುತ್ತಿದೆ. ಆದರೂ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾದ್ರೆ, ಸಂಜೀವಿನಿಯ ಮಾರ್ಗದಲ್ಲೇನು ಜೀವಕ್ಕೆ ಸಂಚಕಾರ ಅಂತೀರಾ? ಈ ಸ್ಟೋರಿ ನೋಡಿ.

ಚಿಕ್ಕಮಗಳೂರು: 15 ದಿನಗಳಿಂದ ಚಾರ್ಮಾಡಿ ಘಾಟ್​ನಲ್ಲಿ ಕಾಡಾನೆ ಹಾವಳಿ; ಅನಾಹುತವಾಗುವ ಮೊದಲೇ ಆನೆ ಸ್ಥಳಾಂತರಕ್ಕೆ ಜನರ ಮನವಿ
ಚಿಕ್ಕಮಗಳೂರು
ಕಿರಣ್ ಹನುಮಂತ್​ ಮಾದಾರ್

Updated on: May 23, 2023 | 12:47 PM

ಚಿಕ್ಕಮಗಳೂರು: ರಾಜ ಗಾಂಭೀರ್ಯದಿಂದ ಫೋಸ್ ಕೊಡುತ್ತಿರುವ ಗಜರಾಜ. ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂದೇ ರೋಡು ಎನ್ನುವ ಹಾಗೇ ವಾಕ್ ಮಾಡುತ್ತಿರುವ ಆನೆ(Elephant). ಮರೆಯಲ್ಲಿ ನಿಂತು ಕಳ್ಳನಂತೆ ನೋಡ್ತಿರೋ ಆನೆ. ರಸ್ತೆ ಬದಿಯ ಕಟ್ಟೆ ದಾಟಿ ಮತ್ತೊಂದೆಡೆಗೆ ಸಾಗ್ತಿರುವ ಒಂಟಿಸಲಗ. ಹೇಳೋಕೆ ಒಂದೋ ಎರಡೋ. ಕಳೆದ 15 ದಿನಗಳಿಂದ ಚಿಕ್ಕಮಗಳೂರು(Chikkamagaluru)ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಕಾಡಾನೆ ಹಾವಾಳಿ ಮೀತಿಮೀರಿದೆ. 22 ಕಿ.ಮೀ ವ್ಯಾಪ್ತಿಯ ಚಾರ್ಮಾಡಿಯಲ್ಲಿ ಒಂದೇ ಆನೆ ಇದೆಯೋ ಅಥವಾ ಅದಕ್ಕಿಂತ ಹೆಚ್ಚು ಇದ್ದಾವೋ ಗೊತ್ತಿಲ್ಲ. ಈ ಮಾರ್ಗದಲ್ಲಿ ಓಡಾಡುವ ಜನ ನಿತ್ಯ ಒಂದೊಂದು ಜಾಗದಲ್ಲಿ ಆನೆ ಕಂಡು ಆತಂಕಕ್ಕೀಡಾಗಿದ್ದಾರೆ.

ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತೆ. ಎರಡ್ಮೂರು ದಿನದ ಹಿಂದೆ ರಸ್ತೆ ಮಧ್ಯೆ ನಿಂತಿದ್ದ ಆನೆ ಕಂಡು ಸರ್ಕಾರಿ ಬಸ್ ಅರ್ಧ ಗಂಟೆ ನಿಂತಲ್ಲೇ ನಿಂತಿತ್ತು. ಬೈಕ್-ಕಾರು ಸವಾರರು ಕೂಡ ನಿಂತಲ್ಲೇ ನಿಂತಿದ್ದರು. ಗಾಡಿ ರಿವರ್ಸ್ ತೆಗೆದು ಹೋಗೋದಕ್ಕೂ ಸಾಧ್ಯವಿಲ್ಲ. ಏಕೆಂದರೆ ಈ ಹಾವು ಬಳುಕಿನ ಮೈಕಟ್ಟಿನ ತರಹ ರಸ್ತೆಯಿರುವ ಕಾರಣ, ಹಾಗಾಗಿ, ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ನಾಳೆ ಮತ್ತೊಂದು ಅನಾಹುತವಾದ ಬಳಿಕ ಪರಿಹಾರವೆಂದು ಎಚ್ಚೆತ್ತುಕೊಳ್ಳುವ ಬದಲು ಆನೆಯನ್ನೇ ಸ್ಥಳಾಂತರ ಮಾಡೋದು ಒಳ್ಳೆಯದು ಎಂದು ಜನರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:Viral Video: ಆನೆ ಜತೆಗೆ ಫುಟ್​ಬಾಲ್​ ಆಡುತ್ತಿದ್ದ ಬಾಲಕಿ ಆನೆ ಹಾಲು ಕುಡಿಯಲು ಮುಂದಾಗಿದ್ದೇಕೆ? ಇಲ್ಲಿದೆ ವೈರಲ್​ ವಿಡಿಯೋ

ಚಾರ್ಮಾಡಿ ಘಾಟಿಯ ಈ ರಸ್ತೆ ಕೇವಲ ರಸ್ತೆಯಾಗಿಲ್ಲ. ಜೀವ ಉಳಿಸುವ ಸಂಜೀವಿನಿ ಕೂಡ. ರಾಜ್ಯದ ಮೂಲೆ-ಮೂಲೆಗಳಿಂದ ನಿತ್ಯ ನೂರಾರು ರೋಗಿಗಳು ಇದೇ ಮಾರ್ಗದಲ್ಲಿ ಮಂಗಳೂರು ಮಣಿಪಾಲ್ ಆಸ್ಪತ್ರೆಗಳಿಗೆ ಹೋಗುತ್ತಾರೆ. ಶಾಲಾ ಕಾಲೇಜಿಗೆ ಓಡಾಡುವ ಮಕ್ಕಳು, ಮಂಗಳೂರಿಗೆ ಹಣ್ಣು ತರಕಾರಿ ಕೊಂಡೊಯ್ಯುವ ನೂರಾರು ವಾಹನಗಳು, ದಿನಕ್ಕೆ ಸುಮಾರು 2000 ಸಾವಿರಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತವೆ. ಬದುಕಿನ ಅನಿವಾರ್ಯತೆಗೆ ಮಧ್ಯರಾತ್ರಿಯೂ ಇಲ್ಲಿ ಹಲವು ವಾಹನಗಳು ಓಡಾಡುತ್ತವೆ. ಕಿರಿದಾದ ದಾರಿಯ ಜೊತೆಗೆ ಘಾಟ್​ ಸೆಕ್ಷನ್. ಟರ್ನ್ ಮಾಡಿಕೊಂಡು ವಾಪಸ್ ಬರೋದು ಕಷ್ಟಸಾಧ್ಯ. ಆನೆ ದಾಳಿಗೆ ಮುಂದಾದರೆ ತಪ್ಪಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಅದೃಷ್ಟವಶಾತ್ ಈವರೆಗೂ ಅಂತಹ ಯಾವುದೇ ಅಹಾಹುತ ಸಂಭವಿಸಿಲ್ಲ. ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಆನೆಯ ಸ್ಥಳಾಂತರಕ್ಕೆ ಸ್ಥಳಿಯರು ಆಗ್ರಹಿಸಿದ್ದಾರೆ.

ಒಟ್ಟಾರೆ, ಆನೆಯನ್ನ ಕಣ್ಣಾರೆ ಕಂಡರೂ ಜನಸಾಮಾನ್ಯರು ಅಗತ್ಯ ಹಾಗೂ ಅನಿವಾರ್ಯತೆಯಿಂದ ಇಂದಿಗೂ ಇದೇ ಮಾರ್ಗವನ್ನ ಅವಲಂಭಿಸಿದ್ದಾರೆ. ಅದೇ ಮೂಡಿಗೆರೆಯಲ್ಲಿ ಆರೇ ತಿಂಗಳಲ್ಲಿ ನಾಲ್ಕೈದು ಜನ ಪ್ರಾಣ ಕಳೆದುಕೊಂಡಿರೋ ಬ್ಲಾಕ್ ಮಾರ್ಕ್ ಕೂಡ ಮೂಡಿಗೆರೆಗೆ ಇದೆ. ನಾಳೆ ಇನ್ನೊಂದು ಅನಾಹುತವಾದ ಬಳಿಕ ಸರ್ಕಾರ ಪರಿಹಾರ ನೀಡೋದು, ಅಧಿಕಾರಿಗಳು ಕ್ರಮ ಕೈಗೊಳ್ತಿವಿ ಅನ್ನೋ ಬದಲು ಸಂಬಂಧಪಟ್ಟವರು ಈಗಲೇ ಸೂಕ್ತ ಕ್ರಮ ಕೈಗೊಂಡರೆ ಮುಂದಾಗುವ ಅನಾಹುತವನ್ನ ತಪ್ಪಿಸಿದಂತಾಗುತ್ತೆ. ಇನ್ನು ಈ ಕುರಿತು ಅಧಿಕಾರಿಗಳು ಏನ್ ಮಾಡ್ತಾರೋ ಕಾದು ನೋಡಬೇಕಿದೆ.

ವರದಿ: ಅಶ್ವಿತ್ ಟಿವಿ9 ಚಿಕ್ಕಮಗಳೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us