
ಚಿಕ್ಕಮಗಳೂರು, ಸೆಪ್ಟೆಂಬರ್ 30: ಅಕ್ರಮ ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ (TD Rajegowda) ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಮಂಗಳವಾರ ದಾಳಿ ನಡೆಸಿದ್ದಾರೆ. ಹಾಸನ ಲೋಕಾಯುಕ್ತ ಎಸ್ಪಿ ಸ್ನೇಹಾ ಅವರ ನೇತೃತ್ವದಲ್ಲಿ ಲೋಕಾಯುಕ್ತ ತಂಡವು ಬೆಂಗಳೂರಿನ ಹೊಸಮನೆ, ಚಿಕ್ಕಮಗಳೂರಿನ (Chikkamagalur) ಬಸಾಪುರ ಹಾಗೂ ಹಲಸೂರು ತೋಟದ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಶಾಸಕ ಟಿ.ಡಿ. ರಾಜೇಗೌಡ, ಪತ್ನಿ ಪುಷ್ಪಾ ಹಾಗೂ ವಿದೇಶದಲ್ಲಿರುವ ಪುತ್ರನ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಮೂವರ ವಿರುದ್ಧವೂ ವಿಚಾರಣೆ, ತನಿಖೆ ಪ್ರಕ್ರಿಯೆ ಮುಂದುವರೆದಿದೆ.
ನಾಲ್ಕು ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳು ಮನೆ, ಕಚೇರಿ ಹಾಗೂ ತೋಟದಲ್ಲಿ ನಿಖರ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ಮುಂದುವರೆದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.
ಬಾಳೆಹೊನ್ನೂರು ಸಮೀಪ ಹಲಸೂರಲ್ಲಿ ಶಾಸಕ ರಾಜೇಗೌಡ 266 ಎಕರೆ ತೋಟ ಖರೀದಿ ಮಾಡಿದ್ದರು. ಉದ್ಯಮಿ, ದಿವಂಗತ ಸಿದ್ಧಾರ್ಥ್ಗೆ ಸೇರಿದ್ದ ತೋಟ ಖರೀದಿಸಿದ್ದರು. ಈ ವಹಿವಾಟಿನ ಸಂಬಂಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿತ್ತು. ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಎಂಬವರು ದೂರು ನೀಡಿದ್ದರು.
ಶಾಸಕರು ಚುನಾವಣೆ ವೇಳೆ ಆಸ್ತಿಪಾಸ್ತಿಗೆ ಸಂಬಂಧಿಸಿ ಸಲ್ಲಿಸಿರುವ ದಾಖಲೆಗಳಿಗೂ ಭೂಮಿ ಖರೀದಿ ವಹಿವಾಟಿಗೂ ತಾಳೆಯಾಗುತ್ತಿಲ್ಲ. ಶಾಸಕರ ವಾರ್ಷಿಕ ಆದಾಯವೇ 38 ಲಕ್ಷ ರೂಪಾಯಿ ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದು, ಇದು ನಿಜವಾದರೆ ನೂರಾರು ಕೋಟಿ ರೂ. ಬೆಲೆಬಾಳುವ ಭೂಮಿ ಖರೀದಿ ಹೇಗೆ ಸಾಧ್ಯ ಎಂದು ದಿನೇಶ್ ಪ್ರಶ್ನಿಸಿದ್ದರು.
ಇದನ್ನೂ ಓದಿ: ವಿರೇಂದ್ರ ಪಪ್ಪಿ, ನಂಜೇಗೌಡ, ವಿನಯ್ ಕುಲಕರ್ಣಿ ಬೆನ್ನಲ್ಲೇ ಮತ್ತೋರ್ವ ಕಾಂಗ್ರೆಸ್ ಎಂಎಲ್ಎಗೆ ಸಂಕಷ್ಟ
ಬೆಲೆ ಬಾಳುವ ಭೂಮಿಯನ್ನು ಕಡಿಮೆ ಬೆಲೆಗೆ ಅಕ್ರಮವಾಗಿ ಖರೀದಿಸಿದ ಆರೋಪ ಸಂಬಂಧ ರಾಜೇಗೌಡ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಎರಡು ವಾರಗಳ ಹಿಂದೆ ಆದೇಶ ನೀಡಿತ್ತು. ಅದರಂತೆ, ಎಫ್ಐಆರ್ ದಾಖಲಿಸಲಾಗಿತ್ತು.
Published On - 12:41 pm, Tue, 30 September 25