ಕಾಂಗ್ರೆಸ್‌ ಮುಖಂಡನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌: ಕೊಲೆಯಾದವನ ವಿರುದ್ಧವೇ ದಾಖಲಾಯ್ತು ಎಫ್‌ಐಆರ್‌!

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ ಪ್ರಕರಣಕ್ಕೆ ಈಗ ಟ್ವಿಸ್ಟ್ ದೊರೆತಿದೆ. ಆರಂಭದಲ್ಲಿ ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿ ಬಂಧನವಾಗಿತ್ತು. ಆದರೆ ಈಗ ಕೊಲೆ ಆಗಿರುವವನ ಮೇಲೆಯೇ ಹಲ್ಲೆ ಕೇಸ್‌ ದಾಖಲಾಗಿದೆ! ಅದ್ಯಾಕೆ? ಇಲ್ಲಿದೆ ಮಾಹಿತಿ.

ಕಾಂಗ್ರೆಸ್‌ ಮುಖಂಡನ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌: ಕೊಲೆಯಾದವನ ವಿರುದ್ಧವೇ ದಾಖಲಾಯ್ತು ಎಫ್‌ಐಆರ್‌!
ಡಿಸೆಂಬರ್‌ 5 ರ ರಾತ್ರಿ ಹತ್ಯೆಯಾಗಿದ್ದ ಗಣೇಶ್ ಗೌಡ
Updated By: Ganapathi Sharma

Updated on: Dec 09, 2025 | 7:25 AM

ಚಿಕ್ಕಮಗಳೂರು, ಡಿಸೆಂಬರ್ 9: ಡಿಸೆಂಬರ್‌ 5 ರ ರಾತ್ರಿ ಚಿಕ್ಕಮಗಳೂರಿನ (Chikkamagaluru) ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನೆತ್ತರು ಹರಿದಿತ್ತು. ದತ್ತಜಯಂತಿಗೆ ಅಳವಡಿಸಿದ್ದ ಬ್ಯಾನರ್‌ ತೆರವು ವೇಳೆ ಕಾಂಗ್ರೆಸ್‌ ಮುಖಂಡ ಗಣೇಶ್‌ ಗೌಡ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಗಲಾಟೆ ಆಗಿತ್ತು. ಇದೇ ಗಲಾಟೆಯಲ್ಲಿ ಗಣೇಶ್‌ಗೌಡನನ್ನು ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಬಜರಂಗದಳದ ಕಾರ್ಯಕರ್ತ ಸಂಜಯ್‌, ನಾಗಭೂಷಣ್‌ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲಾಗಿದೆ. ಅಷ್ಟೇ ಅಲ್ಲ ಇಬ್ಬರನ್ನು ಬಂಧಿಸಲಾಗಿದೆ. ಆದರೆ ಇದೀಗ ಆರೋಪಿಗಳು ಮೃತ ಗಣೇಶ್‌ಗೌಡನ ಮೇಲೆಯೇ ಪ್ರತ್ಯಾರೋಪ ಮಾಡಿದ್ದಾರೆ.

8 ಜನರೊಂದಿಗೆ ಬಂದು ಹಲ್ಲೆ ಮಾಡಿದ್ದ ಗಣೇಶ್: ಬಜರಂಗದಳ ಕಾರ್ಯಕರ್ತರ ಆರೋಪ

ಡಿಸೆಂಬರ್ 5 ರ ರಾತ್ರಿ ಸಖರಾಯಪಟ್ಟಣದ ಮಠದ ಗುತ್ತಿ ರಸ್ತೆಯಲ್ಲಿ ಬಜರಂಗದಳ ಕಾರ್ಯಕರ್ತರು ಹಾಗೂ ಗಣೇಶ್‌ಗೌಡ ಟೀಂ ನಡುವೆ ಗ್ಯಾಂಗ್‌ವಾರ್ ಆಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಬ್ಯಾನರ್, ಫ್ಲೆಕ್ಸ್ ತೆರುವ ಮಾಡುವಾಗ, ‘‘ಇವರದ್ದು ಜಾಸ್ತಿಯಾಯ್ತು’’ ಎಂದು ಗಣೇಶ್‌ ಗೌಡ ಗಲಾಟೆ ಮಾಡಿದ್ದ ಎನ್ನಲಾಗಿದೆ.

ಬಜರಂಗದಳ ಕಾರ್ಯಕರ್ತರ ಆರೋಪ ಏನು?

ಟ್ರಾಕ್ಟರ್‌ನಲ್ಲಿ ಬಂದ ನಾನು ಗಲಾಟೆ ವಿಷಯವಾಗಿ ಗಣೇಶ್‌ಗೆ ಪ್ರಶ್ನೆ ಮಾಡಿದ್ದೆ ಎಂದು ಸಂಜಯ್‌ ಹೇಳಿದ್ದಾನೆ. ಇದರಿಂದ ಗಣೇಶ್ ಮತ್ತು ನಮ್ಮ ನಡುವೆ ‌ಜಗಳವಾಯಿತು . ಬಳಿಕ ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ ಸಂದೀಪ್ ಜೊತೆ ಗಣೇಶ್ 8 ಕ್ಕೂ ಅಧಿಕ ಯುವಕರೊಂದಿಗೆ ಬಂದು ಮಚ್ಚಿನಿಂದ ಹಲ್ಲೆ ಮಾಡಿದ್ದ ಎಂದು ನಾಗಭೂಷಣ್ ಹಾಗೂ ಸಂಜಯ್ ‌ಆರೋಪಿಸಿದ್ದಾರೆ. ಇವರ ದೂರು ಆಧರಿಸಿ ಮೃತ ‌ಗಣೇಶ್‌ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಾದ ಸಂದೀಪ್, ಅಪ್ಪು, ಚಂದು,ಅಭಿ, ಬಿಂದು, ರೋಷನ್‌ ಸೇರಿದಂತೆ 8 ಜನರ ಮೇಲೆ ಎಫ್​ಐಆರ್ ದಾಖಲಾಗಿದೆ.

ಡಿಸೆಂಬರ್ 5ರ ರಾತ್ರಿ ಸಖರಾಯಪಟ್ಟಣದಲ್ಲಿ ನಡೆದಿದ್ದೇನು?

ಸಖರಾಯಪಟ್ಟಣದಲ್ಲಿ ಡಿಸೆಂಬರ್ 5ರ ರಾತ್ರಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ಕೊಲೆಯೊಂದಿಗೆ ಅಂತ್ಯವಾಗಿತ್ತು. ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡರನ್ನು ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಗಲಾಟೆಯಲ್ಲಿ ಆರೋಪಿ ಸಂಜಯ್ ತಲೆಗೂ ಗಂಭೀರ ಗಾಯವಾಗಿತ್ತು. ನಂತರ ಬಜರಂಗದಳದ ಕಾರ್ಯಕರ್ತ ಸಂಜಯ್‌, ನಾಗಭೂಷಣ್‌ ಸೇರಿದಂತೆ ಹಲವರನ್ನು ಬಂಧಿಸಿದ್ದ ಪೊಲೀಸರು, ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಗಲಾಟೆ, ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ