ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ

 ನಗರದ ಮುಖ್ಯ ರಸ್ತೆಯ ಕಾಮಗಾರಿ ಹಿನ್ನೆಲೆಯಲ್ಲಿ ಕಾರ್, ಬೈಕ್ ಸೇರಿದಂತೆ ಅನೇಕ ಸವಾರರು ಒಳ ರಸ್ತೆಗಳ ಮೂಲಕ ಸಂಚರಿಸುತ್ತಿದ್ದಾರೆ. ಪರಿಣಾಮ ಕಿರಿದಾದ ರಸ್ತೆಗಳಲ್ಲಿ ವಾಹನ ಸಂಚಾರ‌ ಹೆಚ್ಚಿದ್ದು ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ವಾಹನ ದಟ್ಟಣೆ, ಹಾರ್ನ್ ಕಿರಿಕಿರಿ, ವಾಹನಗಳ ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗಿದೆ.

ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ
ರಸ್ತೆ ಕಾಮಗಾರಿ ನಡೆಯುತ್ತಿರುವ ದೃಶ್ಯ
Edited By: ಆಯೇಷಾ ಬಾನು

Updated on: Dec 28, 2020 | 6:26 AM

ಚಿತ್ರದುರ್ಗ: ನಗರದ ಮುಖ್ಯರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದಿದೆ. ಆದರೆ, ಚಳ್ಳಕೆರೆ ಗೇಟ್​ನಿಂದ ಪ್ರವಾಸಿ ಮಂದಿರದವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ಮಾತ್ರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ ಹೊಳಲ್ಕೆರೆ ರಸ್ತೆ, ಜೆಎಂಐಟಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸೇರಿದಂತೆ ನಗರದ ಇತರೆ ರಸ್ತೆಗಳ ಕಾಮಗಾರಿಯೂ ಏಕಕಾಲಕ್ಕೆ ನಡೆಯುತ್ತಿದ್ದು, ಯಾವ ರಸ್ತೆಗಳು ಸಹ ಪೂರ್ಣಗೊಂಡಿಲ್ಲ.

ಆಮೆಗತಿಯಲ್ಲಿ ಸಾಗಿದ ರಸ್ತೆ ನಿರ್ಮಾಣ ಕಾಮಗಾರಿ ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದು, ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ಸವಾರರು ಯಮಯಾತನೆ‌‌ ಅನುಭವಿಸುತ್ತಿದ್ದಾರೆ. ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಷ್ಟೇ ಅಲ್ಲದೆ ಇಲ್ಲಿ ಸಂಚರಿಸುವ ವಾಹನಗಳು ಸಹ ಹಾಳಾಗುತ್ತಿವೆ. ನಗರದ ಮಂದಿ ಈ ಕುರಿತು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಧೂಳಿನಿಂದ ಕೊರೊನಾ ಗೊಂದಲ!
ಈ ರಸ್ತೆ ಕಾಮಗಾರಿಯಿಂದಾಗಿ ಚಿತ್ರದುರ್ಗ ನಗರ ಪೂರ್ಣ ಧೂಳುಮಯವಾಗಿದೆ. ಇದರ ಪರಿಣಾಮವಾಗಿ ಜನರಲ್ಲಿ ಗಂಟಲು ನೋವು, ಉಸಿರಾಟದ ತೊಂದರೆ, ಕಣ್ಣು ನೋವು, ಅಸ್ತಮಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಕೆಲವರಿಗೆ ಧೂಳಿನ ದುಷ್ಪರಿಣಾಮದ ಲಕ್ಷಣಗಳು ಮತ್ತು ಕೊರೊನಾ ಲಕ್ಷಣಗಳಿಂದಾಗಿ ಗೊಂದಲ ಸೃಷ್ಟಿಯಾಗಿದ್ದು, ಧೂಳಿನ ಕಾರಣದಿಂದ ಗಂಟಲು ನೋವು, ಉಸಿರಾಟ ತೊಂದರೆ ಆಗಿದೆ ಎಂದು ತಿಳಿಯುವಂತಿಲ್ಲ ಇನ್ನು ಕೊರೊನಾ ಆವರಿಸಿದ್ದವರು ಧೂಳಿನ ಕಾರಣ ಇರಬಹುದು ಎಂದು ಸುಮ್ಮನಿರುವಂತಿಲ್ಲ. ಹೀಗೆ ದುರ್ಗದ ಧೂಳು ಜನರನ್ನು ಗೊಂದಲಕ್ಕೆ ಸಿಲುಕಿಸಿದ್ದು ಜನರಲ್ಲಿ‌ ಆತಂಕ ಉಂಟಾಗಿದೆ.

ಧೂಳುಮಯವಾಗಿರುವ ರಸ್ತೆಗಳು

ಬೀದಿಬದಿ ವ್ಯಾಪಾರಿಗಳಿಗೆ ಸಂಕಷ್ಟ
ರಸ್ತೆ ಕಾಮಗಾರಿ ವಿಳಂಬವಾಗಿರುವುದರಿಂದ ಬೀದಿಬದಿ ವ್ಯಾಪಾರಿಗಳು ಕಂಗಾಲಾಗಿದ್ದು, ಕೊರೊನಾ ಸಂಕಷ್ಟದಿಂದ‌ ಚೇತರಿಸಿಕೊಳ್ಳುವ ಮುನ್ನವೇ ರಸ್ತೆ ಕಾಮಗಾರಿ ಹೊಡೆತದಿಂದ ತತ್ತರಿಸಿದ್ದಾರೆ. ಗೂಡಂಗಡಿಗಳು, ಸಣ್ಣ ಹೋಟೆಲ್‌ ವ್ಯಾಪಾರಸ್ಥರು, ಪಾನಿ ಪೂರಿ, ಎಗ್ ರೈಸ್ ಅಂಗಡಿ ವ್ಯಾಪಾರಿಗಳು ವ್ಯಾಪಾರ ಮಾಡಲಾಗದೆ ನಷ್ಟ ಅನುಭವಿಸುವಂತಾಗಿದೆ. ದೊಡ್ಡ ಅಂಗಡಿಗಳ ಮಾಲೀಕರು ಸಹ ರಸ್ತೆ ಕಾಮಗಾರಿ ವಿಳಂಬದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಬಡಾವಣೆಗಳ ಜನರಿಗೂ ಕಿರಿಕಿರಿ
ನಗರದ ಮುಖ್ಯ ರಸ್ತೆಯ ಕಾಮಗಾರಿ ಹಿನ್ನೆಲೆಯಲ್ಲಿ ಕಾರ್, ಬೈಕ್ ಸೇರಿದಂತೆ ಅನೇಕ ಸವಾರರು ಒಳ ರಸ್ತೆಗಳ ಮೂಲಕ ಸಂಚರಿಸುತ್ತಿದ್ದಾರೆ. ಕಿರಿದಾದ ರಸ್ತೆಗಳಲ್ಲಿ ವಾಹನ ಸಂಚಾರ‌ ಹೆಚ್ಚಿದ್ದು ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ವಾಹನ ದಟ್ಟಣೆ, ಹಾರ್ನ್ ಕಿರಿಕಿರಿ, ವಾಹನಗಳ ಹೊಗೆಯಿಂದ ಪರಿಸರ ಮಾಲಿನ್ಯ ಉಂಟಾಗಿದ್ದು, ನಗರದ ಜನ ತೊಂದರೆ ಅನುಭವಿಸುತ್ತಿದ್ದು, ರಸ್ತೆ ಬಳಿ ಇರುವ ಮನೆ ಹೊರಗೆ ಮಕ್ಕಳು, ಮಹಿಳೆಯರು, ವೃದ್ಧರು ಕೂರದಮತಹ ದುಸ್ಥಿತಿ‌ ನಿರ್ಮಾಣವಾಗಿದೆ.

ರಸ್ತೆ ಸಂಚಾರಕ್ಕೆ ತೊಂದರೆ

ಮುಖ್ಯರಸ್ತೆ ಕಾಮಗಾರಿ 2 ವರ್ಷ ಕಳೆದರೂ ಪೂರ್ಣಗೊಳ್ಳದೆ ಇರುವುದು ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ವಿಳಂಬ ಮತ್ತು ಕಳಪೆ ಕಾಮಗಾರಿಯಿಂದ ಜನ ತತ್ತರಿಸಿದ್ದಾರೆ. ಈ ಬಗ್ಗೆ ಈಗಾಗಲೇ ನಾವು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದು, ಇದೇ ರೀತಿ ಆಮೆಗತಿಯ ಕೆಲಸ ನಡೆದರೆ ಪ್ರತಿಭಟನೆ ಉಗ್ರ ಸ್ವರೂಪ‌ ಪಡೆಯಲಿದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ, ಜಿಲ್ಲಾದ್ಯಕ್ಷ, ಶಿವಕುಮಾರ್ ಹೇಳಿದ್ದಾರೆ.

ಮುಗಿಯದ ರಸ್ತೆ ಕಾಮಗಾರಿ

ಚಿತ್ರದುರ್ಗದಲ್ಲಿ ಮುಖ್ಯರಸ್ತೆ ಸೇರಿದಂತೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಅಭಿವೃದ್ಧಿ ವೇಳೆ ಕೆಲ ಅಡಚಣೆಗಳು ಆಗುವುದು ಸಹಜ. ರಸ್ತೆ ಅಗಲೀಕರಣ ವೇಳೆ ಕೆಲವರು ಕೋರ್ಟ್ ಮೊರೆ ಹೋಗಿರುವ ಕಾರಣ ಕಾಮಗಾರಿ ವಿಳಂಬವಾಗಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದ್ದಾರೆ.

ರಸ್ತೆ ನಿರ್ಮಾಣ ವಿರೋಧಿಸಿದ ಮಹಿಳೆಯರ ಮೇಲೆ JCB ಯಿಂದ ಮಣ್ಣು ಸುರಿಯುವ ಯತ್ನ, ಎಲ್ಲಿ?

Published On - 6:25 am, Mon, 28 December 20

preethi shettigar
Follow Us