ಅದಿರು ಸಾಗಣೆಯ ದುಷ್ಪರಿಣಾಮ: ವಿಚಿತ್ರ ಪರಿಸ್ಥಿತಿಯಲ್ಲಿ ಚಿತ್ರದುರ್ಗ ತಾಲೂಕಿನ ಗ್ರಾಮಸ್ಥರು, ಲಾರಿ ಮಾಲೀಕರು! ಪರಿಹಾರವೇನು?

ಚಿತ್ರದುರ್ಗ ತಾಲೂಕಿನ ಬಹುತೇಕ ಗ್ರಾಮಗಳ ಜನರು ಅದಿರು ಧೂಳಿನಿಂದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜಮೀನುಗಳಲ್ಲಿನ ಬೆಳೆಗಳೂ ಹಾಳಾಗುತ್ತಿವೆ. ಜನರ ಬದುಕು ಬರ್ಬಾದಾಗಿ ಹೋಗಿದೆ ಅಂತಾರೆ. ಈ ಮಧ್ಯೆ ಅದೇ ಗ್ರಾಮಗಳಲ್ಲಿ ಅನೇಕ ಜನರು ತಾವೂ ಅದಿರು ಸಾಗಣೆ ಮಾಡಿಯಾದ್ರೂ ಬದುಕು ಕಟ್ಟಿಕೊಳುತ್ತೇವೆ. 52 ಲಾರಿ ಕೊಂಡಿದ್ದೇವೆ. ಅದಿರು ಸಾಗಣೆಗೆ ಅವಕಾಶ ಕೊಡಿ ಎನ್ನುತ್ತಿದ್ದಾರೆ. ಆದ್ರೆ, ಗಣಿ ಕಂಪನಿಗಳವರು ಸ್ಥಳೀಯರು ಲಾರಿಗಳಿಗೆ ಅವಕಾಶ ನೀಡುತ್ತಿಲ್ಲ. ಇದಕ್ಕೆ ಪರಿಹಾರವೇನು?

ಅದಿರು ಸಾಗಣೆಯ ದುಷ್ಪರಿಣಾಮ: ವಿಚಿತ್ರ ಪರಿಸ್ಥಿತಿಯಲ್ಲಿ ಚಿತ್ರದುರ್ಗ ತಾಲೂಕಿನ ಗ್ರಾಮಸ್ಥರು, ಲಾರಿ ಮಾಲೀಕರು! ಪರಿಹಾರವೇನು?
ಅದಿರು ಸಾಗಣೆ: ವಿಚಿತ್ರ ಪರಿಸ್ಥಿತಿಯಲ್ಲಿ ಚಿತ್ರದುರ್ಗ ತಾಲೂಕಿನ ಗ್ರಾಮಸ್ಥರು
Edited By: ಸಾಧು ಶ್ರೀನಾಥ್​

Updated on: Mar 14, 2024 | 10:54 AM

ಅದಿರು ಗಣಿಗಾರಿಕೆ (Ore) ಎಂಬುದು ಪರಿಸರದ ಮೇಲೆ ಭಾರೀ ದುಷ್ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಗಣಿ ಲಾರಿಗಳ (Ore Transportation) ಓಡಾಟದ ಪರಿಣಾಮ ಜನ ಜೀವನಕ್ಕೂ ಸಂಕಟ ತಂದೊಡ್ಡಿದೆ. ಆದ್ರೂ, ಯಾರೊಬ್ಬರೂ ಹೇಳೋರಿಲ್ಲ, ಕೇಳೋರಿಲ್ಲ. ಈ ಕುರಿತು ವರದಿ ಇಲ್ಲಿದೆ ನೋಡಿ. ಗಣಿ ಲಾರಿಗಳ ಧೂಳಿನಿಂದ ಜಮೀನುಗಳಲ್ಲಿ ಬೆಳೆದ ಬೆಳೆ ಹಾಳು. ಪರಿಸರ ಪೂರ್ಣ ಧೂಳುಮಯ, ಎಲ್ನೋಡಿದ್ರೂ ಕೆಂಪೇ ಕೆಂಪು. ಜನಜೀವನ ಮತ್ತು ಆರೋಗ್ಯದ ಮೇಲೂ ಭಾರೀ ದುಷ್ಪರಿಣಾಮ ಬೀರಿದೆ ಎಂದು ಜನರ ಆಕ್ರೋಶ. ಹೌದು, ಕೋಟೆನಾಡು ಚಿತ್ರದುರ್ಗ (Chitradurga) ತಾಲೂಕಿನ ಭೀಮಸಮುದ್ರ ಗ್ರಾಮದ ಆಸುಪಾಸಿನಲ್ಲೇ ಪ್ರತಿಷ್ಠಿತ ಮೂರು ಅದಿರು ಗಣಿಗಳಿವೆ. ನಿತ್ಯ ನೂರಾರು ಅದಿರು ಸಾಗಣೆ ಲಾರಿಗಳು (Lorry Owners) ಓಡಾಡುತ್ತವೆ.

ಹೀಗಾಗಿ, ಭೀಮಸಮುದ್ರ, ಡಿ. ಮದಕರಿಪುರ ಸೇರಿದಂತೆ ಬಹುತೇಕ ಗ್ರಾಮಗಳ ಜನರು ಅದಿರು ಧೂಳಿನಿಂದ ಇಲ್ಲದ ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಜಮೀನುಗಳಲ್ಲಿನ ಬೆಳೆಗಳೂ ಸಂಪೂರ್ಣ ಕೆಂಪಾಗಿ ಹಾಳಾಗುತ್ತಲೇ ಇವೆ. ಈ ಭಾಗದ ಜನರ ಬದುಕೇ ಬರ್ಬಾದಾಗಿ ಹೋಗಿದೆ ಅಂತಾರೆ ಇವ್ರು.

Also Read: ಇಲ್ಲಿ ಸರಿ-ತಪ್ಪು ಯಾರದ್ದು!? ಕಾಲಿಂದ ಒದ್ದು ಅಂಬುಲೆನ್ಸ್ ಚಾಲಕನ ಮೇಲೆ ಬೆಂಗಳೂರು ದಂಪತಿ ಹಲ್ಲೆ‌! ಬಂಧನ, ಬಿಡುಗಡೆ

ಇನ್ನು ಭೀಮಸಮುದ್ರ, ಡಿ.ಮದಕರಿಪುರ ಮತ್ತು ಇತರೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಈ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೆ ಅನೇಕ ಗ್ರಾಮದ ಜನರು ಸಹ ಅದಿರು ಸಾಗಣೆ ಮಾಡಿಯಾದ್ರೂ ಬದುಕು ಕಟ್ಟಿಕೊಳ್ಳೋಣ ಎಂದು ಲಾರಿ ಕೊಂಡುಕೊಂಡಿದ್ದೇವೆ. ಸುಮಾರು 52ಕ್ಕೂ ಹೆಚ್ಚು ಕುಟುಂಬಸ್ಥರು ಲಾರಿ ಕೊಂಡಿದ್ದೇವೆ. ಆದ್ರೆ, ಗಣಿ ಕಂಪನಿಗಳವರು ಮಾತ್ರ ಸ್ಥಳೀಯರು ಲಾರಿಗಳಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ. ಅದಿರು ಸಾಗಣೆಗಾದರೂ ಅವಕಾಶ ನೀಡಿದರೆ ಬದುಕು ನಡೆಯುತ್ತದೆ.

ಒಟ್ಟಾರೆಯಾಗಿ ಕೋಟೆನಾಡಿನಲ್ಲಿ ಗಣಿಗಾರಿಕೆ ಪರಿಸರ, ಕೃಷಿ ಮತ್ತು ಜನಜೀವನಕ್ಕೆ ಕಂಟಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗಣಿ ಲಾರಿಗಳ ದುಷ್ಪರಿಣಾಮ ತಡೆಯಬೇಕು. ಅಂತೆಯೇ ಸ್ಥಳೀಯರಿಗೆ ಲಾರಿಗಳ ಮೂಲಕ ಅದಿರು ಸಾಗಣೆಗೆ ಅವಕಾಶ ಕಲ್ಪಿಸಬೇಕೆಂಬುದು ಗ್ರಾಮೀಣ ಜನರ ಆಗ್ರಹವಾಗಿದೆ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ, ಗಣಿ ಕಂಪನಿಗಳು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us