AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಹೆದ್ದಾರಿ ಮಧ್ಯೆ ಏಕಾಏಕಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ

ನಿನ್ನೆ ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬ ಆಚರಣೆ ಮಾಡಲಾಗುತ್ತಿದ್ದರೆ. ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ರಾತೋರಾತ್ರಿ ವೃತ್ತವೊಂದರಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಆಗಿದೆ. ಹೆದ್ದಾರಿ ಮದ್ಯೆ ಏಕಾಏಕಿ ಪ್ರತಿಮೆ ಸ್ಥಾಪನೆ ಮಾಡಿದ್ದು ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಚಿತ್ರದುರ್ಗ: ಹೆದ್ದಾರಿ ಮಧ್ಯೆ ಏಕಾಏಕಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ
ಚಿತ್ರದುರ್ಗ ಹೆದ್ದಾರಿ ಮಧ್ಯೆ ಏಕಾಎಕಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on:Feb 19, 2023 | 2:52 PM

Share

ಚಿತ್ರದುರ್ಗ: ಬೆಳಗಾಗುವುದರೊಳಗೆ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಪ್ರತ್ಯಕ್ಷ. ಹೆದ್ದಾರಿ ಮದ್ಯೆ ಪ್ರತಿಮೆ ಸ್ಥಾಪಿಸಿ ಘೋಷಣೆ ಕೂಗಿದ ಯುವಕರು. ಕೈಕಟ್ಟಿ ಕುಳಿತ ಜಿಲ್ಲಾಡಳಿತ, ಪೊಲೀಸ್ ಇಲಾಖೆ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಮಾಳಪ್ಪನಹಟ್ಟಿ ಗ್ರಾಮದ ಬಳಿ. ಹೌದು, ಮಾಳಪ್ಪನಹಟ್ಟಿ ಗ್ರಾಮದಲ್ಲಿ ಬಹುತೇಕ ಜನರು ಸಂಗೊಳ್ಳಿ ರಾಯಣ್ಣನ ಅನುಯಾಯಿಗಳೇ ಆಗಿದ್ದಾರೆ. ಸಂಗೊಳ್ಳಿ ರಾಯಣ್ಣ ಟ್ರಸ್ಟ್​ನ್ನು ಸಹ ಇಲ್ಲಿನ ಯುವಕರು ಕಟ್ಟಿಕೊಂಡಿದ್ದಾರೆ. ಹೀಗಾಗಿ ಗ್ರಾಮಕ್ಕೆ ಪ್ರವೇಶಿಸುವ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕೆಂಬುದು ಬಹು ದಿನದ ಕನಸಾಗಿತ್ತು. ಅದರಂತೆ ಗ್ರಾಮದ ಜನರೆಲ್ಲಾ ಸೇರಿ ಸುಮಾರು ಎಂಟೂವರೆ ಲಕ್ಷ ರೂ. ಖರ್ಚು ಮಾಡಿ 850 ಕೆಜಿ ತೂಕದ ಎಂಟೂ ಕಾಲು ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ. ಚನ್ನಯ್ಯ ಒಡೆಯರ್ ವೃತ್ತ ಎಂದೇ ಈ ವೃತ್ತಕ್ಕೆ ಕರೆಯುತ್ತಿದ್ದರು. ಆದ್ರೆ ಹಿಂದಿನಿಂದಲೂ ಸಂಗೊಳ್ಳಿ ರಾಯಣ್ಣನ ಭಾವಚಿತ್ರವಿರಿಸಿ ಪೂಜಿಸಲಾಗುತ್ತಿತ್ತು. ಇಂದು ಬೆಳಗಿನ ಜಾವ ಸಂಗೊಳ್ಳಿ ರಾಯಣ್ಣ ಪುಥ್ಥಳಿ ಸ್ಥಾಪಿಸಿದ್ದೇವೆ. ಯಾವುದೇ ಕಾರಣಕ್ಕೂ ಪ್ರತಿಮೆ ತೆರವುಗೊಳಿಸಲು ಬಿಡುವುದಿಲ್ಲ. ಯಾವುದೇ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಅಂತಾರೆ ಗ್ರಾಮದ ಜನರು.

ಇನ್ನು ಶಿವರಾತ್ರಿ ದಿನ ಬೆಳ್ಳಂಬೆಳಗ್ಗೆ ಕೋಟೆನಾಡಿನ ಮಾಳಪ್ಪನಹಟ್ಟಿ ಬಳಿಯ ಹೆದ್ದಾರಿ ನಡುವೆ ದೇಶಭಕ್ತ ಸ್ವತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತ್ಯಕ್ಷವಾಗಿದೆ. ಯಾವುದೇ ಅನುಮತಿ ಪಡೆಯದೇ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ನ ಯುವಕರು ಪ್ರತಿಮೆ ಸ್ಥಾಪಿಸಿದ್ದಾರೆ. ಹೀಗಾಗಿ ಬೆಳಗ್ಗೆಯಿಂದಲೇ ಅನೇಕ ಜನರು ಸ್ಥಳಕ್ಕೆ ಧಾವಿಸಿ ವೀಕ್ಷಿಸಿದರು. ಆದ್ರೆ ಜಿಲ್ಲಾಡಳಿತ ಮತ್ತು ಪೊಲೀಸರು ಮಾತ್ರ ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರನ್ನು ಕೇಳಿದ್ರೆ ಹಿಂದಿನಿಂದಲೂ ಗ್ರಾಮದ ಜನರಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವ ಕನಸಿತ್ತು. ಹೀಗಾಗಿ ಇಂದು (ಫೆ.18) ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪ್ರತಿಮೆ ಸ್ಥಾಪಿಸಿದ್ದಾರೆ. ಯಾರ ವಿರೋಧವೂ ಇಲ್ಲ. ಎಲ್ಲರ ಸಹಮತದೊಂದಿಗೆ ಪ್ರತಿಮೆ ಸ್ಥಾಪನೆ ಆಗಿದೆ. ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಸಹಕಾರ ನಿಡಬೇಕೆಂಬುದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ನನ್ನ ಮಗಳಿಗೆ ಆದ ನೋವು ಬೇರೆ ಯಾರಿಗೂ ಆಗಬಾರದು; ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆಯ ತಾಯಿಯ ಕಣ್ಣೀರು

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಮಾಳಪ್ಪನಹಟ್ಟಿ ಬಳಿ ಶಿವರಾತ್ರಿ ದಿನವೇ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಆಗಿದೆ. ಹೆದ್ದಾರಿ ಮದ್ಯೆ ಯಾವುದೇ ಪರವಾನಿಗೆ ಇಲ್ಲದೆ ಏಕಾಏಕಿ ಪ್ರತಿಮೆ ಸ್ಥಾಪನೆ ಆಗಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಯಾವು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:44 am, Sun, 19 February 23