ಚಿತ್ರದುರ್ಗದಲ್ಲಿ ನೂತನ ವೃತ್ತಗಳು, ಹೊಸ ವಿಗ್ರಹಗಳ ಸ್ಥಾಪನೆ; ಕ್ಯಾರೆ ಎನ್ನದ ಜಿಲ್ಲಾಡಳಿತ

ಕೋಟೆನಾಡು ಚಿತ್ರದುರ್ಗ ನಗರದಲ್ಲಿ ನೂತನ ವೃತ್ತಗಳು, ಹೊಸ ವಿಗ್ರಹಗಳ ಸ್ಥಾಪನೆ ನಡೆಯುತ್ತಲೇ ಇದೆ. ಯಾವುದೇ ನಿಯಮ ಪಾಲಿಸದೆ ಹೊಸ ಸರ್ಕಲ್​ಗಳು ಹುಟ್ಟಿಕೊಳ್ಳುತ್ತಿವೆ. ಆದ್ರೂ, ನಗರಸಭೆ ಮತ್ತು ಜಿಲ್ಲಾಡಳಿತ ಮಾತ್ರ ಸೈಲೆಂಟಾಗಿದೆ. 

ಚಿತ್ರದುರ್ಗದಲ್ಲಿ ನೂತನ ವೃತ್ತಗಳು, ಹೊಸ ವಿಗ್ರಹಗಳ ಸ್ಥಾಪನೆ; ಕ್ಯಾರೆ ಎನ್ನದ ಜಿಲ್ಲಾಡಳಿತ
ಚಿತ್ರದುರ್ಗ
Edited By: ಕಿರಣ್ ಹನುಮಂತ್​ ಮಾದಾರ್

Updated on: Dec 10, 2023 | 8:18 PM

ಚಿತ್ರದುರ್ಗ, ಡಿ.10: ಕೋಟೆನಾಡು ಚಿತ್ರದುರ್ಗ(Chitradurga)ದಲ್ಲಿ ಪರವಾನಿಗೆ ಇಲ್ಲದೆ ರಾತೋರಾತ್ರಿ ಶ್ರೀಕೃಷ್ಣ ವೃತ್ತ ರಚನೆ, ಕೃಷ್ಣ ವಿಗ್ರಹ(Statue)ಸ್ಥಾಪನೆಯಾಗುತ್ತಿದೆ. ಆದರೆ, ನಗರಸಭೆ ಮತ್ತು ಜಿಲ್ಲಾಡಳಿತ ಜಾಣ ಮೌನ ವಹಿಸಿದೆ. ಕೆಲ ತಿಂಗಳ ಹಿಂದಷ್ಟೇ ಮಾಳಪ್ಪನಹಟ್ಟಿ ಬಳಿ ರಾತೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಿ ಹೊಸ ವೃತ್ತ ರಚನೆ ಮಾಡಲಾಗಿತ್ತು. ಇದೀಗ ಹೊಳಲ್ಕೆರೆ ರಸ್ತೆಯಲ್ಲಿ ಶ್ರೀಕೃಷ್ಣ ವಿಗ್ರಹ ಸ್ಥಾಪಿಸಿ, ಶ್ರೀಕೃಷ್ಣ ವೃತ್ತ ಸ್ಥಾಪನೆ ಆಗಿದೆ. ಆದ್ರೆ, ನೂತನ ವಿಗ್ರಹ ಸ್ಥಾಪನೆಗೆ ಅನುಮತಿ ಪಡೆಯಬೇಕೆಂಬ ನಿಯಮವಿದ್ದರೂ ಸಹ ಅಧಿಕಾರಿಗಳು ಸೈಲೆಂಟಾಗಿದ್ದಾರೆ.

ಇನ್ನು ವಿಗ್ರಹ ಸ್ಥಾಪಿಸಿದ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಶ್ನಿಸುತ್ತಾರಾದರು, ಬಳಿಕ ಯಾವುದೇ ಕ್ರಮ ಮಾತ್ರ ಕೈಗೊಂಡಿಲ್ಲ. ಈ ಕುರಿತು ಯಾದವ ಸಮುದಾಯದ ಮುಖಂಡರಾದ ಉಗ್ರೇಶ್ ಮಾತನಾಡಿ ‘ ಚಿತ್ರದುರ್ಗದಲ್ಲಿ ಎಲ್ಲಾ ಸಮುದಾಯದವರು ಸಾಂಸ್ಕೃತಿಕ ನಾಯಕರ ವಿಗ್ರಹ ಸ್ಥಾಪಿಸಿ ವೃತ್ತ ರಚಿಸಿದ್ದಾರೆ. ಅಂತೆಯೇ ಯಾದವ ಸಮುದಾಯ ಹೆಚ್ಚಾಗಿರುವ ದುರ್ಗದಲ್ಲೇ ಶ್ರೀಕೃಷ್ಣ ವೃತ್ತ, ಪುಥ್ಥಳಿ ಇಲ್ಲದ ಕಾರಣ ಶ್ರೀಕೃಷ್ಣ ವಿಗ್ರಹ ಸ್ಥಾಪಿಸಿ ವೃತ್ತ ಸ್ಥಾಪಿಸಿದ್ದೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ:ಹಾಸನದಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ; ಸಿದ್ದರಾಮಯ್ಯ ನೋಡಲು ಓಡಿ ಬಂದ ಅಭಿಮಾನಿಗಳು

ರಾತೋರಾತ್ರಿ ಶ್ರೀಕೃಷ್ಣ ವಿಗ್ರಹ ಸ್ಥಾಪನೆ ಆಗಿದ್ದು, ಶ್ರೀಕೃಷ್ಣ ಯಾದವ ಮಠದ ಕೃಷ್ಣ ಯಾದವಾನಂದ ಶ್ರೀ ಪೂಜೆ
ಸಲ್ಲಿಸಿ ಚಾಲನೆ ನೀಡಿದ್ದಾರೆ. ಇಷ್ಟೇಲ್ಲಾ ಆದರೂ ನಗರಸಭೆ ಮತ್ತು ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಸೈಲೆಂಟಾಗಿದೆ. ಘಟನೆ ಕುರಿತು ಯಾದವ ಮುಖಂಡರನ್ನು ಕೇಳಿದ್ರೆ, ‘ಈ ಹಿಂದೆ ಬಿ.ಕಾಂತರಾಜ್ ನಗರಸಭೆ ಅದ್ಯಕ್ಷರಾಗಿದ್ದ ವೇಳೆಯೇ ನಾವು ಪರವಾನಿಗೆ ಕೇಳಿದ್ದೆವು. ಏಳೆಂಟು ವರ್ಷದ ಹಿಂದೆಯೇ ನಮಗೆ ಪರವಾನಿಗೆ ನೀಡಲಾಗಿತ್ತು. ಹೀಗಾಗಿ, ಶ್ರೀಕೃಷ್ಣ ವೃತ್ತ ರಚಿಸಿ ಶ್ರೀಕೃಷ್ಣ ಪ್ರತಿಮೆ ಸ್ಥಾಪಿಸಿದ್ದೇವೆ. ಜಿಲ್ಲಾಡಳಿತ ಮತ್ತು ಸರ್ಕಾರ ಸಹಕರಿಸಿಬೇಕು ಎನ್ನುತ್ತಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ರಾತೋರಾತ್ರಿ ಹೊಸ ವೃತ್ತಗಳು, ಹೊಸ ವಿಗ್ರಹಗಳು ಸ್ಥಾಪನೆ ಆಗುತ್ತಿವೆ.
ಆದ್ರೆ, ನಗರಸಭೆ ಮತ್ತು ಜಿಲ್ಲಾಡಳಿತ ಮಾತ್ರ ಸೈಲೆಂಟಾಗಿದೆ. ಹೀಗಾಗಿ, ಮುಂದೊಂದು ದಿನ ಹೊಸ ವೃತ್ತ, ಹೊಸ ಪುಥ್ಥಳಿ ನಿರ್ಮಾಣದ ವಿಚಾರದಲ್ಲೇ ವಿವಾದ ಹುಟ್ಟಿದರೂ ಆಶ್ಚರ್ಯವಿಲ್ಲ. ಹೀಗಾಗಿ, ಜಿಲ್ಲಾಡಳಿತ ನಿಯಮಾನುಸಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us