ಮುರುಘಾ ಮಠದ ಹಣಕಾಸು ದುರುಪಯೋಗ: ವಂಚನೆ ಆರೋಪದಿಂದ ಎಸ್.ಕೆ.ಬಸವರಾಜನ್ ಖುಲಾಸೆ
ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ. ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರಿಯಾಗಿದ್ದ ವೇಳೆ ಬಸವರಾಜ್ ಅವರು ಹಣಕಾಸು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು. ಇದೀಗ ಕೋರ್ಟ್ ಬಸವರಾಜ್ ಅವರನ್ನು ವಂಚನೆ ಆರೋಪ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

ಬೆಂಗಳೂರು/ಚಿತ್ರದುರ್ಗ, (ಜುಲೈ 24): ಚಿತ್ರದುರ್ಗ ಮುರುಘರಾಜೇಂದ್ರ ಮಠದ ಹಣಕಾಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚನೆ ಆರೋಪದಿಂದ ಎಸ್.ಕೆ.ಬಸವರಾಜನ್ ಖುಲಾಸೆಗೊಂಡಿದ್ದಾರೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಇಂದು (ಜುಲೈ 24) ಎಸ್. ಕೆ.ಬಸವರಾಜನ್ ಅವರನ್ನು ವಂಚನೆ ಆರೋಪದಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಮುರಘಾ ಮಠದ SJM ಕೋ-ಆಪರೇಟಿವ್ ಸುಸೈಟಿ ಹಣದಿಂದ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಆರೋಪಿ ಬಸವರಾಜನ್ ವಿರುದ್ಧ ದೂರು ನೀಡಲಾಗಿತ್ತು. ಮಠದ ಪರವಾಗಿ ವಿಜಯಕುಮಾರ್ ಎನ್ನುವರು 2013ರ ಆಗಷ್ಟ್ 16ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಈ ಪ್ರಕರಣವನ್ನು ಕೋರ್ಟ್ ವಜಾ ಮಾಡಿದೆ. ಇದರಿಂದ ಮುರುಘರಾಜೇಂದ್ರ ಮಠದ ಹಣಕಾಸು ದುರುಪಯೋಗ, ವಂಚನೆ ಆರೋಪದಿಂದ ಎಸ್.ಕೆ.ಬಸವರಾಜನ್ ಅವರು ಖುಲಾಸೆಗೊಂಡಿದ್ದಾರೆ.
ಮಾಜಿ ಶಾಸಕರಾಗಿರುವ ಬಸವರಾಜನ್ ಅವರು ಮುರುಘಾ ಮಠದ ಮಾಜಿ ಆಡಳಿತಾಧಿಕಾರಿಯಾಗಿದ್ದರು. 2008ರಲ್ಲಿ ಇವರು ಒಮ್ಮೆ ಜೆಡಿಎಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರ 2018ರಲ್ಲಿ ಇವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಬಳಿಕ ಈಗ 2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಇವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಹೈಕಮಾಂಡ್ ಟಿಕೆಟ್ ನೀಡಿರಲಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Wed, 24 July 24



