ಮುರುಘಾ ಶ್ರೀ ವಿರುದ್ಧ ಜಾರ್ಜ್​ಶೀಟ್ ಸಲ್ಲಿಸಿದ ಪೊಲೀಸರು: 12 ಮತ್ತು 14 ವರ್ಷದ ಸಂತ್ರಸ್ತೆಯರ ಹೇಳಿಕೆ ಇಲ್ಲಿದೆ

| Updated By: Rakesh Nayak Manchi

Updated on: Feb 13, 2023 | 5:29 PM

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ದಾಖಲಾದ 2ನೇ ಫೋಕ್ಸೋ ಪ್ರಕರಣ ಸಂಬಂಧ ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಪೊಲೀಸರು 761 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಎ ಮತ್ತು ಬಿ ಎರಡು ಭಾಗವಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಮುರುಘಾ ಶ್ರೀ ವಿರುದ್ಧ ಜಾರ್ಜ್​ಶೀಟ್ ಸಲ್ಲಿಸಿದ ಪೊಲೀಸರು: 12 ಮತ್ತು 14 ವರ್ಷದ ಸಂತ್ರಸ್ತೆಯರ ಹೇಳಿಕೆ ಇಲ್ಲಿದೆ
ಮುರುಘಾ ಶ್ರೀ
Follow us on

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ (Murugha Mutt Shivamurthy Sharanara) ವಿರುದ್ಧ ದಾಖಲಾದ 2ನೇ ಫೋಕ್ಸೋ ಪ್ರಕರಣ (POCSO Case) ಸಂಬಂಧ ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಪೊಲೀಸರು 761 ಪುಟಗಳ ಚಾರ್ಜ್ ಶೀಟ್ (Charge Sheet) ಸಲ್ಲಿಸಿದ್ದಾರೆ. ಎ ಮತ್ತು ಬಿ ಎರಡು ಭಾಗವಾಗಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಮಾತ್ರವಲ್ಲದೆ, 12 ಮತ್ತು 14 ವರ್ಷದ ಸಂತ್ರಸ್ತ ಬಾಲಕಿಯರ ಹೇಳಿಕೆಯನ್ನು ಸಿಆರ್​ಪಿಸಿ 161 ಅಡಿ ದಾಖಲಿಸಿಕೊಳ್ಳಲಾಗಿದೆ. ಟಿವಿ ನೋಡುತ್ತ ರೂಮಿನಲ್ಲಿ ಕುಳಿತಾಗ ಮುರುಘಾಶ್ರೀ ರೇಪ್ ಮಾಡಿದರು ಎಂದು 12 ವರ್ಷದ ಬಾಲಕಿ ಹೇಳಿಕೆ ನೀಡಿದ್ದು, ಸ್ವಾಮೀಜಿ ನೀಡಿದ ಚಾಕ್ಲೇಟ್ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆ, ಎಚ್ಚರವಾದಾಗ ಸುಸ್ತು, ಕಾಲು ತೊಡೆ ಭಾಗ ನೋವಿತ್ತು ಎಂದು 14 ವರ್ಷದ ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ಮಠದ ಹಾಸ್ಟೆಲ್‌ನಲ್ಲಿದ್ದ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ದೃಢಪಟ್ಟಿದ್ದು, ಮಕ್ಕಳು ಮತ್ತು ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಹಾಸ್ಟೆಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ಕೊಠಡಿಗೆ ಕರೆಸಿಕೊಂಡು ಮತ್ತು ಭರಿಸುವ ಚಾಕ್ಲೆಟ್ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸದ್ಯ ಪೊಲೀಸರು, ಕಲಂ 376(C), 376(2)(n), 376(AB), 376(3), r/w 34, ಐಪಿಸಿ ಮತ್ತು u/s 5(L), 6,7 POCSO Act -2012 ಮತ್ತು sec : 3(f), ಧಾರ್ಮಿಕ‌ ಕೇಂದ್ರ ದುರ್ಬಳಕೆ 1988 ಮತ್ತು sec 77 Juvenile Justice Act 2015, ಸಂತ್ರಸ್ತರು ಸಿಆರ್​ಪಿಸಿ 161, 164 ಅಡಿ ನೀಡಿದ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಮುರುಘಾ ಶ್ರೀ ವಿರುದ್ಧ ದಾಖಲಾದ ಒಂದನೇ ಪೋಕ್ಸೋ ಪ್ರಕರಣದ ಜಾಮೀನು ಅರ್ಜಿ ವಜಾ

ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಕಲಂ 173 (8) ಸಿಆರ್​ಪಿಸಿ ಅಡಿಯಲ್ಲಿ ತನಿಖೆ ಮುಂದುವರೆದಿದೆ ಎಂದು ಮಾಹಿತಿ ಲಭ್ಯವಾಗಿದೆ. ದೂರಿನಲ್ಲಿ ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಲಾಗಿದ್ದು, ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ದೃಢಪಟ್ಟಿಲ್ಲ. ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್ ಕೌಂಟರ್ ಬ್ಲಾಸ್ಟ್ ಕೇಸ್ ಎಂದು ಕಂಡು ಬರುತ್ತದೆ. ಬಾಕಿ ತನಿಖೆ ಪೂರ್ಣಗೊಳಿಸಿ ಅಂತಿಮ ಚಾರ್ಜ್ ಶೀಟ್ ಸಲ್ಲಿಕೆ ಮಡಲು ಪೊಲೀಸರು ಸಜ್ಜಾಗುತ್ತಿದ್ದಾರೆ.

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣ ಅಕ್ಟೋಬರ್ 13ರಂದು ದಾಖಲಾಗಿತ್ತು. ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ, ಎ3 ಮಠದ ಉತ್ತರಾಧಿಕಾರಿ (ಬಸವಾದಿತ್ಯ 17), ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ‌ ಗಂಗಾಧರ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆಗಿತ್ತು. ಬಳಿಕ ಮಠದ ಅಡುಗೆ ಸಹಾಯಕಿ, ಮಠದ ಹಾಸ್ಟೆಲ್ ನಲ್ಲಿದ್ದ ತನ್ನ ಇಬ್ಬರು ಮಕ್ಕಳು, ಮತ್ತಿಬ್ಬರು ಮಕ್ಕಳು ಸೇರಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದರು.

ಟಿವಿ ನೋಡುತ್ತ ರೂಮಿನಲ್ಲಿ ಕುಳಿತಾಗ ಮುರುಘಾಶ್ರೀ ರೇಪ್ ಮಾಡಿದರು

ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣ ಸಂಬಂಧ 12 ವರ್ಷದ ಬಾಲಕಿಯ ಹೇಳಿಕೆಯನ್ನು ಸಿಆರ್​​ಪಿಸಿ 161 ಅಡಿ ದಾಖಲಿಸಿಕೊಳ್ಳಲಾಗಿದೆ. “ಒಬ್ಬರು ತಪ್ಪು ಮಾಡಿದರೆ ವಾರ್ಡನ್ ರಶ್ಮಿ ಎಲ್ಲರಿಗೂ ಹೊಡೆಯುತ್ತಿದ್ದರು. ಇಬ್ಬರಿಗೆ ಮುರುಘಾಶ್ರೀ ಬಳಿ ಹೋಗಲು ರಶ್ಮಿ ಸೂಚಿಸುತ್ತಿದ್ದರು. ನಾವು ಎಲ್ಲರೂ ಮುರುಘಾಶ್ರೀಗೆ ಅಪ್ಪಾಜಿ ಎನ್ನುತ್ತಿದ್ದೆವು. ಸಂಜೆ ವೇಳೆ ಕೆಲ ಅನಾಥ ಪುಟ್ಟ ಮಕ್ಕಳೊಂದಿಗೆ ಮುರುಘಾಶ್ರೀ ರೂಮಿಗೆ ಹೋಗಿದ್ದೆ. ಟಿವಿ ನೋಡುತ್ತ ರೂಮಿನಲ್ಲಿ ಕುಳಿತಾಗ ಮುರುಘಾಶ್ರೀ ರೇಪ್ ಮಾಡಿದರು. ಪುಟ್ಟ ಪಾಪು ರೂಮಿನಲ್ಲೇ ಆಟ ಆಡುತ್ತಿತ್ತು. ಒಂದು ದಿನ ಬಿಟ್ಟು ನಡೆದ ವಿಚಾರ ಅಮ್ಮನಿಗೆ ಹೇಳಿದೆನು. ನಾನು ಒಂದು ಸಲ ಮಾತ್ರ ಮುರುಘಾಶ್ರೀ ರೂಮಿಗೆ ಹೋಗಿದ್ದೇನೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹಿನ್ನಲೆ ಹಾಸ್ಟೆಲ್ ಬಂದ್ ಮಾಡಲಾಯಿತು. ಬಳಿಕ ಪ್ರವಾಸಕ್ಕೆ ಹೋಗೋಣ ಎಂದು ಅಮ್ಮ ಕಾರ್‌ನಲ್ಲಿ ಮೈಸೂರಿಗೆ ಕರೆತಂದರು” ಎಂದು ಹೇಳಿಕೆ ದಾಖಲಿಸಲಾಗಿದೆ.

ಪ್ರತಿ ಭಾನುವಾರ‌ ನಾನು ಮುರುಘಾಶ್ರೀ ರೂಮ್‌ಗೆ ಹೋಗಬೇಕಿತ್ತು

14ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯನ್ನು ಸಿಆರ್​ಪಿಸಿ 161 ಅಡಿ ದಾಖಲಿಸಿಕೊಳ್ಳಲಾಗಿದೆ. “ವಾರ್ಡನ್ ರಶ್ಮಿ ಮುರುಘಾಶ್ರೀ ಬಳಿ ಹೋಗಲು ಟೈಂ ಟೇಬಲ್ ಹಾಕಿದ್ದರು. ಪ್ರತಿದಿನ ಹಾಸ್ಟೆಲ್‌ನ ಇಬ್ಬರು ಮಕ್ಕಳು ಮುರುಘಾಶ್ರೀ ಬಳಿ ಹೋಗಬೇಕಿತ್ತು. ದತ್ತು ಕೇಂದ್ರದ ಮಕ್ಕಳನ್ನೂ ಕರೆದುಕೊಂಡು ಹೋಗಬೇಕಿತ್ತು. ಲಾಕ್ ಡೌನ್ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುವುದು ಮುರುಘಾಶ್ರೀಗೆ ರೂಢಿ ಆಗಿತ್ತು. ಮೊದಲ ಭಾನುವಾರ ಮುರುಘಾಶ್ರೀ ಬಳಿಗೆ ಹೋದಾಗ ಚಾಕ್ಲೇಟ್ ನೀಡಿದ್ದರು. ಮದ್ಯಾಹ್ನದವರೆಗೆ ಮುರುಘಾಶ್ರೀ ರೂಮ್​ನಲ್ಲಿದ್ದು ಬಂದಿದ್ದೆನು” ಎಂದು ಹೇಳಿಕೆ ದಾಖಲಿಸಲಾಗಿದೆ.

“ಪ್ರತಿ ಭಾನುವಾರ‌ ನಾನು ಮುರುಘಾಶ್ರೀ ರೂಮ್‌ಗೆ ಹೋಗಬೇಕಿತ್ತು. ಸ್ವಾಮೀಜಿ ನೀಡಿದ ಚಾಕ್ಲೇಟ್​​ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆನು. ಎಚ್ಚರವಾದಾಗ ಸುಸ್ತು, ಕಾಲು ತೊಡೆ ಭಾಗ ನೋವಿತ್ತು. ಮತ್ತೊಂದು ಭಾನುವಾರ ಹೋದಾಗ ಮತ್ತೆ ಚಾಕ್ಲೇಟ್ ನೀಡಿದರು. ಎಚ್ಚರವಾದಾಗ ಮುರುಘಾಶ್ರೀ ಏನೋ ಮಾಡಿದ್ದಾರೆ ಎಂದು ತಿಳಿಯಿತು. ಟೈಂ ಟೇಬಲ್ ಬದಲಾದ ಕಾರಣ ಸೋಮವಾರ ಹೋಗಬೇಕಾಯಿತು. ಕುರ್ಚಿ ಮೇಲೆ ಕುಳಿತಿದ್ದ ಮುರುಘಾಶ್ರೀ ಮೇಲೆ ಕುಡಿಸಿಕೊಂಡರು. ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದರು. ಮುರುಘಾಶ್ರೀ ರೂಮಿನಲ್ಲಿ 2 ಸಲ ಮಲಗಿದ್ದಾಗ ಬಳಸಿಕೊಂಡಿದ್ದಾರೆ ಅನ್ನಿಸುತ್ತಿದೆ. ಮುರುಘಾಶ್ರೀ ರೂಮ್​ಗೆ ಹೋಗಿ ಬಂದಾಗಿಂದ ಸರಿಯಾಗಿ ಪಿರಿಯಡ್ಸ್ ಆಗುತ್ತಿಲ್ಲ. ವಾರ್ಡನ್ ರಶ್ಮಿ ಟೈಂ ಟೇಬಲ್​ನಂತೆ ಹೋಗದಿದ್ದರೆ ಹೊಡೆಯುತ್ತಿದ್ದರು” ಎಂದು ಹೇಳಿಕೆ ದಾಖಲಿಸಲಾಗಿದೆ.

ಮಠದ ಅಡುಗೆ ಸಹಾಯಕಿ,‌ ದೂರುದಾರ ಮಹಿಳೆ ಹೇಳಿಕೆ ದಾಖಲು

2ನೇ ಫೋಕ್ಸೋ ಪ್ರಕರಣ ಸಂಬಂಧ ಮಠದ ಅಡುಗೆ ಸಹಾಯಕಿ,‌ ದೂರುದಾರ ಮಹಿಳೆ ಹೇಳಿಕೆ ದಾಖಲಿಸಲಾಗಿದೆ. “ವಾರ್ಡನ್ ರಶ್ಮಿ ಹಾಸ್ಟೆಲ್ ಮಕ್ಕಳನ್ನು ಮುರುಘಾಶ್ರೀ ರೂಮ್​ಗೆ ಕಳಿಸುತ್ತಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳು ಸೇರಿ ಹಾಸ್ಟೆಲ್‌ನ ಇತರೆ ಮಕ್ಕಳ ಮೇಲೆ ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮನೆಗಳಲ್ಲಿ ಕಷ್ಟ ಇರುತ್ತದೆ,‌ ಇಲ್ಲಿ ಇರಬೇಕೆಂದರೆ ಮುರುಘಾಶ್ರೀ ರೂಮ್​ಗೆ ಹೋಗಬೇಕಾಗುತ್ತದೆ ಹೀಗೆಂದು ಹಾಸ್ಟೆಲ್ ಮಕ್ಕಳು ನನಗೆ ಹೇಳುತ್ತಿದ್ದರು. ಯಾರ ಬಳಿಯೂ ಬಾಯಿ ಬಿಡದಂತೆ ರಶ್ಮಿ ಪ್ರಮಾಣ ಮಾಡಿಸುತ್ತಿದ್ದರಂತೆ. ರಶ್ಮಿ ಸೂಚನೆಯಂತೆ ಹೋಗದಿದ್ದರೆ ಶಿಕ್ಷೆ ವಿಧಿಸುತ್ತಿದ್ದರು. ಮಗಳು ರಾತ್ರಿ ಹೊತ್ತು ಊಟಕ್ಕೆ ಬರುತ್ತಿರಲಿಲ್ಲ, ಸುಸ್ತಾಗುತ್ತದೆ ಎಂದು ಆಗಾಗ ಹೇಳುತ್ತಿದ್ದಳು, ಆಸ್ಪತ್ರೆಗೆ ಹೋದರೆ ಏನೋ ಕೇಳುತ್ತಾರೆಂದು ಬಾಳೆಹಣ್ಣು ನೀಡುತ್ತಿದ್ದೆನು” ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಷಡ್ಯಂತರ ಪ್ರಕರಣ; ತನಿಖೆ ವರ್ಗಾವಣೆ ಬಗ್ಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಎ1 ಶಿವಮೂರ್ತಿ ಮುರುಘಾಶ್ರೀ ಹೇಳಿಕೆ ದಾಖಲು

2ನೇ ಪೋಕ್ಸೋ ಪ್ರಕರಣ ಸಂಬಂಧ ಎ1 ಶಿವಮೂರ್ತಿ ಶರಣರ ಹೇಳಿಕೆ ದಾಖಲಿಸಲಾಗಿದೆ. “ದೂರುದಾರ ಅಡುಗೆ ಸಹಾಯಕಿ‌ ಮತ್ತು ಮಕ್ಕಳ ಬಗ್ಗೆ ಮಾಹಿತಿ ಇಲ್ಲ. ಖಾಸಗಿ ಕೊಠಡಿಗೆ ಮಕ್ಕಳು ಹೆಚ್ಚಾಗಿ ಬರುತ್ತಿರಲಿಲ್ಲ. ದರ್ಬಾರ್ ಹಾಲ್, ಶಿರಸಂಗಿ ಸಭಾಂಗಣಕ್ಕೆ ಬರುತ್ತಿದ್ದರು, ನಾನಿಲ್ಲದ ವೇಳೆ ನನ್ನ ಕೋಣೆಗೆ ಹೋಗಿದ್ದರೆ ನನಗೆ ತಿಳಿದಿಲ್ಲ, ನಾನು ಮಠದಲ್ಲಿದ್ದಾಗ ಖಾಸಗಿ‌ ಕೊಠಡಿಗೆ ಬೀಗ ಹಾಕುತ್ತಿರಲಿಲ್ಲ, ನನ್ನ ಕೊಠಡಿಗೆ ಹೆಣ್ಣು ಮಕ್ಕಳು ಬರಲು ಟೈಂ ಟೇಬಲ್ ಹಾಕಿರಲಿಲ್ಲ, ಸಂತ್ರಸ್ತ ಬಾಲಕಿಯರು ಯಾವತ್ತೂ ನನ್ನ ಕೊಠಡಿಗೆ ಬಂದಿಲ್ಲ, ದರ್ಬಾರ್ ಹಾಲ್​ನಲ್ಲಿ ಟ್ಯೂಷನ್ ನಡೆಸುತ್ತಿದ್ದೆ, ಮಕ್ಕಳಿಗೆ ಪ್ರಸಾದದ ರೂಪದಲ್ಲಿ ಹಣ್ಣು, ಡ್ರೈಫ್ರೂಟ್ಸ್ ನೀಡುತ್ತಿದ್ದೆ, ವಿದೇಶಕ್ಕೆ ಹೋದಾಗ ನಾನು ಚಾಕೋಲೇಟ್ ತರುತ್ತಿದ್ದೆ, ಮಕ್ಕಳಿಗೆ ಮಾತ್ರ ಅಲ್ಲ,‌ ಮಠದಲ್ಲಿದ್ದ ಎಲ್ಲರಿಗೂ ಕೊಡುತ್ತಿದ್ದೆ, ಚಾಕೊಲೇಟ್​ಗಳಲ್ಲಿ ಮತ್ತು ಬರಿಸುವ ಅಂಶ ಇರುವುದಿಲ್ಲ, ನಾನು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿಲ್ಲ” ಎಂದು ಹೇಳಿಕೆ ದಾಖಲಿಸಿದ್ದಾರೆ.

ಮುರುಘಾಶ್ರೀ ಖಾಸಗಿ ಕೊಠಡಿಗೆ ಮಕ್ಕಳನ್ನು ಕಳಿಸಿಲ್ಲ

ಪ್ರಕರಣದಲ್ಲಿ 2ನೇ ಆರೋಪಿ ಸ್ಥಾಪನದಲ್ಲಿರುವ ಹಾಸ್ಟೆಲ್ ವಾರ್ಡನ್ ರಶ್ಮಿ ಹೇಳಿಕೆ ದಾಖಲಿಸಲಾಗಿದೆ. “6 ವರ್ಷಗಳಿಂದ ಮಠದ ಹಾಸ್ಟೆಲ್‌ ವಾರ್ಡನ್ ಆಗಿದ್ದೇನೆ, ಮುರುಘಾಶ್ರೀ ಕೊಠಡಿಗೆ ಮಕ್ಕಳನ್ನು ಕಳಿಸಲು ಟೈಂ ಟೇಬಲ್ ಮಾಡಿಲ್ಲ, ಮುರುಘಾಶ್ರೀ ಖಾಸಗಿ ಕೊಠಡಿಗೆ ಮಕ್ಕಳನ್ನು ಕಳಿಸಿಲ್ಲ, ಸ್ವಾಮೀಜಿ ಖಾಸಗಿ ಕೊಠಡಿ ನೋಡಿಲ್ಲ. ಮಕ್ಕಳನ್ನು ನಾನು ಹೊಡೆದಿಲ್ಲ, ತಪ್ಪು ಮಾಡಿದಾಗ ಬುದ್ಧಿವಾದ ಹೇಳಿದ್ದೇನೆ. ತಪ್ಪು ಮಾಡಿದಾಗ ಎರಡೇಟು ಹೊಡೆದಿದ್ದೇನೆ. ನಾನು ಮಕ್ಕಳಿಗೆ ಹೊಡೆಯುವ ಸ್ಕೇಲ್ ನನ್ನ ರೂಮಿನಲ್ಲಿದೆ. ದೂರುದಾರ ಅಡುಗೆ ಸಹಾಯಕಿ, ಇಬ್ಬರು ಮಕ್ಕಳು ನನಗೆ ಗೊತ್ತು, ಸಂತ್ರಸ್ತ ಮಕ್ಕಳು ಸುಳ್ಳು ಆರೋಪ ಮಾಡಿದ್ದಾರೆ. ಮಠದ ಹಾಲ್​ನಲ್ಲಿ ಭಕ್ತಾದಿಗಳು ಮತ್ತು ಮಕ್ಕಳಿಗೆ ಹಣ್ಣು, ಡ್ರೈ ಫ್ರೂಟ್ಸ್ ನೀಡುತ್ತಿದ್ದರು. ಸ್ವಾಮೀಜಿ ನೀಡುವ ಹಣ್ಣಿನಲ್ಲಿ ಮತ್ತು ಬರುವ ಔಷಧಿ ಇರುತ್ತಿತ್ತು ಎಂಬುದರ ಬಗ್ಗೆ ಗೊತ್ತಿಲ್ಲ.” ಎಂದು ಹೇಳಿಕೆ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ