AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಕದ್ದೊಯ್ಯುತ್ತಿದ್ದ ಹಸುವನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ರೈತರು, ವಿಡಿಯೋ ಇಲ್ಲಿದೆ

ಚಿತ್ರದುರ್ಗ ಜಿಲ್ಲೆಯ ಹೊಟ್ಟಪ್ಪನಹಳ್ಳಿಯಲ್ಲಿ ರೈತರೊಬ್ಬರು ಸಾಕಿದ ಹಸುವನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ವಿಚಾರ ತಿಳಿದ ಗೋಪನಹಳ್ಳಿ ಗ್ರಾಮದ ರೈತರು ಸಿನಿಮೀಯ ಶೈಲಿಯಲ್ಲಿ ಹಸುವನ್ನು ರಕ್ಷಿಸಿದ್ದಾರೆ. ರೈತರು ದಾಳಿ ನಡೆಸುತ್ತಿದ್ದಂತೆ ಚಾಲಕ ಲಗೇಜ್ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ವಾಹನ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಬಸವರಾಜ ಮುದನೂರ್, ಚಿತ್ರದುರ್ಗ
| Edited By: Rakesh Nayak Manchi|

Updated on:Dec 18, 2023 | 10:53 AM

Share

ಚಿತ್ರದುರ್ಗ, ಡಿ.18: ಲಗೇಜ್ ವಾಹನದಲ್ಲಿ ಸಾಗಿಸುತ್ತಿದ್ದ ಹಸುವನ್ನು ರೈತರು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಘಟನೆ ಜಿಲ್ಲೆಯ (Chitradurga) ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಬಳಿ ನಡೆದಿದೆ. ಹೊಟ್ಟಪ್ಪನಹಳ್ಳಿಯಲ್ಲಿ ರೈತ ನಾಗರಾಜ್ ಎಂಬುವರ ಹಸುವನ್ನು ರಾತ್ರಿ ವೇಳೆ ಕದ್ದು ಲಗೇಜ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು.

ಈ ವಿಚಾರ ತಿಳಿದ ಗೋಪನಹಳ್ಳಿ ರೈತರು ತಕ್ಷಣ ಎಚ್ಚೆತ್ತು ವಾಹನದಲ್ಲಿ ಹಿಂಬಾಲಿಸಿದ್ದಾರೆ. ಈ ವೇಳೆ ಮತ್ತೊಂದು ಕಾರಿನ ಚಾಲಕ ಹಸು ರಕ್ಷಣೆಗೆ ಸಾಥ್ ನೀಡಿದ್ದು, ಈ ವೇಳೆ ಆರೋಪಿಯು ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಇದರಿಂದಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೂ ನಿಲ್ಲಿಸದ ಗೂಡ್ಸ್ ಚಾಲಕ ವಾಹನ ಸಹಿತ ತಪ್ಪಿಸಲು ಯತ್ನಿಸಿದ್ದಾನೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಾಯಿ ದಾಳಿಗೆ 10 ವರ್ಷದ ಬಾಲಕ ಸಾವು

ಆದರೂ, ರೈತರು ಬೆನ್ನು ಬಿಡದ ಹಿನ್ನೆಲೆ ಲಗೇಜ್ ವಾಹನವನ್ನು ನಿಲ್ಲಿಸಿ ಆರೋಪಿ ಚಾಲಕ ಪರಾರಿಯಾಗಿದ್ದಾನೆ. ಜಾನುವಾರು ಕಳ್ಳರನ್ನು ಬಂಧಿಸುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಶನಿವಾರ ತಡರಾತ್ರಿ ರೈತರು ಕಳ್ಳರ ವಾಹನ ಚೇಸ್ ಮಾಡಿದ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಡ್ಯದಲ್ಲಿ ತಲೆ ಎತ್ತಿದ ಅಕ್ರಮ ಕಸಾಯಿಖಾನೆ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆಗಳು ತಲೆ ಎತ್ತಿವೆ. ತೂಬಿನಕೆರೆ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಅಕ್ರಮ ಶೆಡ್ ನಿರ್ಮಾಣ ಮಾಡಿ ಜಾನುವಾರುಗಳನ್ನು ಕೊಂದು ಅವುಗಳ ಮೂಳೆ, ಮಾಂಸ ಸಂಗ್ರಹ ಮಾಡಲಾಗುತ್ತಿದೆ. ಗುಜರಿ ವಸ್ತುಗಳ ಸಂಗ್ರಹದ ಹೆಸರಲ್ಲಿ ಗೋವುಗಳ ಮಾರಣಹೋಮ ನಡೆಸಲಾಗುತ್ತಿದೆ.

ಕೊಳೆತ ವಾಸನೆ ಹೆಚ್ಚಾಗ್ತಿದ್ದಂತೆ ಸ್ಥಳೀಯರಿಗೆ ಅನುಮಾನ ಉಂಟಾಗಿದ್ದು, ಭಜರಂಗದಳದ ಕಾರ್ಯಕರ್ತರು ಅಖಾಡಕ್ಕಿಳಿದು ಅಕ್ರಮ ಶೆಡ್ ಪತ್ತೆಹಚ್ಚಿದ್ದಾರೆ. ತೂಬಿನಕೆರೆ ಗ್ರಾಮದ ಲಿಂಗರಾಜು ಎಂಬುವರ ಜಮೀನನ್ನು ಮಂಡ್ಯದ ಮೂಲದ ವ್ಯಕ್ತಿ ಬಾಡಿಗೆ ಪಡೆದು ಶೆಡ್ ನಿರ್ಮಿಸಿ ಗೋವುಗಳ ಮೂಳೆ ಸಂಗ್ರಹ ಮಾಡುತ್ತಿದ್ದನು. ಈ ಮೂಳೆಗಳಿಂದ ಪೌಡರ್ ತಯಾರಿಸುತ್ತಿದ್ದ ಎನ್ನುವ ಆರೋಪ ಕೇಳಿಬಂದಿದ್ದು, ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 am, Mon, 18 December 23

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More