ಮುಸ್ಲಿಂ ಗೂಂಡಾಗಳಿಂದ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ: ಹೇಡಿಗಳ ರೀತಿ ಕೊಲೆ ಮಾಡಿ ಓಡಿ ಹೋಗಿದ್ದಾರೆ -ಕೆ.ಎಸ್.ಈಶ್ವರಪ್ಪ

ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಕೊಲೆ ಮಾಡಿಲ್ಲ ಅಂದರೆ ಹಿಂದೂ ಸಮಾಜ ದುರ್ಬಲ ಅಂತ ಅಲ್ಲ. ನಿರಪರಾಧಿ ಹುಡುಗರ ಕೊಲೆಯನ್ನು ಇಡೀ ರಾಜ್ಯ, ದೇಶ ಗಮನಿಸುತ್ತಿದೆ.

ಮುಸ್ಲಿಂ ಗೂಂಡಾಗಳಿಂದ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ: ಹೇಡಿಗಳ ರೀತಿ ಕೊಲೆ ಮಾಡಿ ಓಡಿ ಹೋಗಿದ್ದಾರೆ -ಕೆ.ಎಸ್.ಈಶ್ವರಪ್ಪ
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
Edited By:

Updated on: Jul 28, 2022 | 4:53 PM

ಚಿತ್ರದುರ್ಗ: ಮುಸ್ಲಿಂ ಗೂಂಡಾಗಳಿಂದ ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಅವರು ಮಾನಸಿಕ ಸ್ಥಿತಿಯನ್ನು ಬದಲಾವಣೆ ಮಾಡಿಕೊಂಡಿಲ್ಲ. ಒಬ್ಬನೇ ಇದ್ದಾಗ ಹತ್ಯೆಗೈದು ಹೇಡಿಗಳ ರೀತಿ ಓಡಿ ಹೋಗಿದ್ದಾರೆ ಎಂದು ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪ(KS Eshwarappa) ಆಕ್ರೋಶ ಹೊರ ಹಾಕಿದ್ದಾರೆ.

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಚಿತ್ರದುರ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಇದೇ ರೀತಿ ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ನಡೆದಿತ್ತು. ಮುಸ್ಲಿಂ ಸಮುದಾಯದ ಹಿರಿಯರು ಗುಂಡಾಗಳಿಗೆ ತಿಳಿಹೇಳಬೇಕು. ಇಡೀ ರಾಜ್ಯದ ಶಾಂತಿ, ಸುವ್ಯವಸ್ಥೆ ಹಾಳು ಮಾಡ್ತಿದ್ದಾರೆ. ಬೆಳಗ್ಗೆ ಬಿಜೆಪಿ ರಾಜ್ಯದ್ಯಕ್ಷ ನಳೀನ್ ಕುಮಾರ್ ಕಟೀಲ್ ಬೇಟಿ‌ ಮಾಡಿದ್ದೇನೆ. ಶಾಂತಿಪ್ರಿಯ ಕರ್ನಾಟಕ ರಾಜ್ಯದಲ್ಲಿ ಕಗ್ಗೊಲೆ ನಡೆದಿದೆ. ಸೂಕ್ತ ಕ್ರಮದ ಬಗ್ಗೆ ಹಿರಿಯರಿಂದ ಚಿಂತನೆ ನಡೆಯುತ್ತಿದೆ. ಕೊಲೆ ಮಾಡದಂತೆ ಯಾವ ರೀತಿ ಭಯ ಇರಿಸಬೇಕೆಂಬ ಚಿಂತನೆ ನಡೆದಿದೆ.

ಕೊಲೆಗೆ ಕೊಲೆಯೇ ಉತ್ತರ ಅಲ್ಲ, ಕೊಲೆ ಮಾಡಿಲ್ಲ ಅಂದರೆ ಹಿಂದೂ ಸಮಾಜ ದುರ್ಬಲ ಅಂತ ಅಲ್ಲ. ನಿರಪರಾಧಿ ಹುಡುಗರ ಕೊಲೆಯನ್ನು ಇಡೀ ರಾಜ್ಯ, ದೇಶ ಗಮನಿಸುತ್ತಿದೆ. ರಾಜ್ಯದ ಸಿಎಂ, ಪ್ರಧಾನಿ ಮೋದಿ, ಅಮಿತ್ ಶಾ ಅವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದೇ ಕೊಲೆ ಕೊನೆ ಆಗಬೇಕು, ರಾಜ್ಯದಲ್ಲಿ ಮತ್ತೊಂದು ಕೊಲೆ ಆಗಬಾರದು. ತುರ್ತಾಗಿ ಕಠಿಣ ಕಾನೂನು ರಚನೆ ಆಗಬೇಕು. ಕೊಲೆಗಾರರು ಯಾರೆಂದು ಪತ್ತೆ ಹಚ್ಚಬೇಕು. ಕೊಲೆ ಹಿಂದೆ ಯಾವ ರಾಷ್ಟ್ರದ್ರೋಹಿ ಸಂಘಟನೆ ಇದೆ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.

‘ಪ್ರವೀಣ್ ಹಂತಕರನ್ನ ಎನ್​ಕೌಂಟರ್ ಮಾಡಿ’
ಇನ್ನು ಪ್ರವೀಣ್ ನೆಟ್ಟಾರು ಹಂತಕರನ್ನ ಎನ್​ಕೌಂಟರ್​ ಮಾಡುವಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಪಿಎಫ್​ಐ, ಎಸ್​ಡಿಪಿಐ ಸಂಘಟನೆಗಳನ್ನ ಬ್ಯಾನ್​ ಮಾಡಬೇಕು. ಆಗಸ್ಟ್​ 5 ರಂದು ರಾಜ್ಯ ಮಟ್ಟದಲ್ಲಿ ಹೋರಾಟ ಮಾಡ್ತೇವೆ ಅಂತಾ ಎಚ್ಚರಿಕೆ ಕೂಡ ಕೊಟ್ರು. ಜೊತೆಗೆ , ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನೀವು ಅಧಿಕಾರದಲ್ಲಿರೋಕೆ ನಾಲಾಯಕ್ ಅಂತಾ ಕೆಂಡವಾದ್ರು.

Published On - 4:53 pm, Thu, 28 July 22

Follow Us