
ಬೆಂಗಳೂರು, ನವೆಂಬರ್ 29: ಕರ್ನಾಟಕ ಕಾಂಗ್ರೆಸ್ನಲ್ಲಿ (Congress) ಉಂಟಾಗಿದ್ದ ಅಧಿಕಾರ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಶನಿವಾರ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದರು. ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಸಭೆ ನಡೆಯಿತು. ಆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಉಭಯ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಆದರೆ, ಗೊಂದಲ ತಿಳಿಗೊಳಿಸುವುದಕ್ಕೆಂದೇ ಕರೆದ ಈ ಪತ್ರಿಕಾಗೋಷ್ಠಿಯಲ್ಲಿ, ಮಾಧ್ಯಮ ಪ್ರತಿನಿಧಿಗಳ ಕೆಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡದೆ ಅನುಮಾನಗಳನ್ನು ಹಾಗೆಯೇ ಉಳಿಸಿಹೋಗಿದ್ದಾರೆ.
ಅಧಿಕಾರ ಹಂಚಿಕೆ ಕುರಿತ ಗೊಂದಲ ಸೃಷ್ಟಿಯಾಗಲು ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಅಲ್ಲದೆ, ತಮ್ಮ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಈ ಹಿಂದೆಯೂ ಯಾವುದೇ ಗೊಂದಲ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ ಎಂದರು. ಆದರೆ, ಅದಕ್ಕೂ ಮುನ್ನ ಅವರೇ, ಗೊಂದಲ ತಿಳಿಗೊಳಿಸುವುದಕ್ಕಾಗಿ ಹೈಕಮಾಂಡ್ ಸೂಚನೆ ಮೇರೆಗೆ ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿದೆವು. ಹೈಕಮಾಂಡ್ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ ಎಂದರು ಎಂಬುದು ಗಮನಾರ್ಹ!
ಆಧಿಕಾರ ಹಂಚಿಕೆ ಚರ್ಚೆಗಳ ನಡುವೆ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿಕೆ ಶಿವಕುಮಾರ್ ಎಕ್ಸ್ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದರ ನಂತರ ಸಿದ್ದರಾಮಯ್ಯ ಕೂಡ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ಜನತೆಗೆ ನಾವು ಕೊಟ್ಟ ಮಾತೇ ನಮಗೆ ಜಗತ್ತು ಎಂದು ಉಲ್ಲೇಖಿಸಿದ್ದರು. ಈ ವಿಚಾರವಾಗಿ ಪ್ರಶ್ನೆ ಕೇಳಲು ಮಾಧ್ಯಮ ಪ್ರತಿನಿಧಿಗಳು ಮುಂದಾದಾಗ, ನಾವು ಹೇಳಿದ್ದನ್ನು ಮೊದಲು ಕೇಳಿ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ. ಏನಿದ್ದರೂ ಹೈಕಮಾಂಡ್ ಹೇಳಿದಂತೆ ಮುಂದುವರಿಯುತ್ತೇವೆ ಎಂದರು.
ಎರಡೂವರೆ ವರ್ಷದ ನಂತರ ನಾಯಕತ್ವ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿತ್ತೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಸಷ್ಟವಾದ ಉತ್ತರ ನೀಡಿಲ್ಲ. ಏನಿದ್ದರೂ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿದರು. ಇದರೊಂದಿಗೆ, ಅಧಿಕಾರ ಹಂಚಿಕೆ ಚರ್ಚೆ ನಡೆದಿತ್ತೇ ಎಂಬುದು ಪ್ರಶ್ನೆಯಾಗಿಯೇ ಉಳಿಯಿತು.
ಈ ಮಧ್ಯೆ, ‘ಅಧಿಕಾರ ಹಂಚಿಕೆ ಗೊಂದಲ ಶುರುವಾಗಿದ್ದೇ ಸಿಎಂ ಹಾಗೂ ಡಿಸಿಎಂ ನಡುವೆ. ನಮಗೇನು ಸಂಬಂಧ ಇದರಲ್ಲಿ’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಸಿಎಂ ನೀಡಿದ ಉತ್ತರ ಕೂಡ, ಉಭಯ ನಾಯಕರ ಮಧ್ಯೆ ಗೊಂದಲ ಇದ್ದುದು ನಿಜ ಎಂಬಂತಿತ್ತು. ನಾನು ಮತ್ತು ಡಿಕೆ ಶಿವಕುಮಾರ್ ಸೆಟಲ್ಮೆಂಟ್ ಮಾಡಿಕೊಳ್ಳುವುದೇ ಪರಿಹಾರ ಅಲ್ವಾ? ಹೈಕಮಾಂಡ್ ಹೇಳಿದಂತೆ ಸೆಟಲ್ ಮಾಡಿಕೊಳ್ಳುವುದೇ ಒಂದು ಸೆಟಲ್ಮೆಂಟ್ ಎಂದರು. ಅಂದರೆ, ಆರಂಭದಲ್ಲಿ ಇಬ್ಬರ ನಡುವೆ ಗೊಂದಲವೇ ಇರಲಿಲ್ಲ ಎಂದ ಸಿಎಂ, ಈಗ ಸೆಟಲ್ಮೆಂಟ್ ಮಾಡಿಕೊಂಡಿದ್ದೇವೆ ಎಂದರು. ಇದು ಕೂಡ ಅನುಮಾನಕ್ಕೆ ಕಾರಣವಾಯಿತು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ
ಒಟ್ಟಿನಲ್ಲಿ, ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಇಬ್ಬರ ನಡುವಣ ಗೊಂದಲವನ್ನು ಸೆಟಲ್ ಮಾಡಿಕೊಂಡಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ್ತು 2028ರ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡುವ ಬಗ್ಗೆ ಚರ್ಚಿಸಿದ್ದೇವೆ. ಜತೆಗೆ, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಸಮರ್ಪಕವಾಗಿ ಕೌಂಟರ್ ಕೊಟ್ಟು ಮಣಿಸುವ ಬಗ್ಗೆ ಒಮ್ಮತಕ್ಕೆ ಬಂದಿದ್ದೇವೆ ಎಂದು ಉಭಯ ನಾಯಕರು ಸ್ಪಷ್ಟಪಡಿಸಿದರು.
Published On - 12:27 pm, Sat, 29 November 25