‘ಪಾಕಿಸ್ತಾನ ಹೋಲಿಕೆ’ ಹೇಳಿಕೆ: ಸುಪ್ರೀಂ ವರದಿ ಕೇಳಿದ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ

ವಿಚಾರಣೆ ವೇಳೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಕ್ಕೆ ಗುರಿಯಾಗಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ತಮ್ಮ ಹೇಳಿಕೆಗಾಗಿ ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವರದಿ ಕೋರಿದ ಬೆನ್ನಲ್ಲೇ ಅವರು ಹೇಳಿಕೆಗಾಗಿ ವಿಷಾದಿಸಿದ್ದಾರೆ.

‘ಪಾಕಿಸ್ತಾನ ಹೋಲಿಕೆ’ ಹೇಳಿಕೆ: ಸುಪ್ರೀಂ ವರದಿ ಕೇಳಿದ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ
ಪಾಕಿಸ್ತಾನ ಹೋಲಿಕೆ: ವಿಷಾದ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ
Follow us
|

Updated on: Sep 21, 2024 | 7:01 PM

ಬೆಂಗಳೂರು, ಸೆಪ್ಟೆಂಬರ್ 21: ಕೋರ್ಟ್ ಕಲಾಪದ ವೇಳೆ ನೀಡಿರುವ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದರೆ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕರ್ನಾಟಕ ನ್ಯಾಯಮೂರ್ತಿ ವಿ ಶ್ರೀಶಾನಂದ ಶನಿವಾರ ಹೇಳಿದ್ದಾರೆ. ಹೈಕೋರ್ಟಿನ 23ನೇ ವಿಚಾರಣಾ ಹಾಲ್​​ನಲ್ಲಿ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಇತರ ವಕೀಲರ ಎದುರು ಅವರು ತಮ್ಮ ಹೇಳಿಕೆಗಳಿಗೆ ವಿವರಣೆ ನೀಡಿದರು.

ಶ್ರೀಶಾನಂದ ತಮ್ಮ ಆಕ್ಷೇಪಾರ್ಹ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ ವೇಳೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್, ಖಜಾಂಚಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.

ಶ್ರೀಶಾನಂದ ಅವರು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ಕೈಗೆತ್ತಿಕೊಂಡಿತ್ತು. ಜತೆಗೆ, ಆರೋಪ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್​​​ರಿಂದ ವರದಿ ಕೇಳಿತ್ತು. ಇದರ ಬೆನ್ನಲ್ಲೇ ಶ್ರೀಶಾನಂದ ತಮ್ಮ ಆಕ್ಷೇಪಾರ್ಹ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಏನು ಹೇಳಿದ್ದರು ಶ್ರೀಶಾನಂದ?

ಕಲಾಸಿಪಾಳ್ಯದ ಸುತ್ತಮುತ್ತ ನಡೆಯುವ ಬಡ್ಡಿ ದಂಧೆಯ ಬಗ್ಗೆ ವಿಚಾರಣೆ ವೇಳೆ, ‘‘ಮೈಸೂರು ರಸ್ತೆ ಮೇಲ್ಸೇತುವೆ ಬಳಿ ಹೋಗಿ ನೋಡಿ, ಪ್ರತಿ ಆಟೊ ರಿಕ್ಷಾದಲ್ಲಿ 10 ಮಂದಿ ಇರುತ್ತಾರೆ. ಅಲ್ಲಿ ಯಾವುದೂ ಅನ್ವಯವಾಗುವುದಿಲ್ಲ. ಯಾಕೆಂದರೆ ಕೆಆರ್​​ ಮಾರುಕಟ್ಟೆ ಮತ್ತು ಗೌರಿ ಪಾಳ್ಯ ವರೆಗೆ ಮೈಸೂರು ರೋಡ್ ಫ್ಲೈಓವರ್ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ. ನೀವು ಎಂಥವನೇ ಸ್ಟ್ರಿಕ್ಟ್ ಅಧಿಕಾರಿಗಳನ್ನು ಅಲ್ಲಿಗೆ ಹಾಕಿ, ಹಿಡಿದರೆ ನೋಡ್ತೀನಿ’’ ಎಂದು ಹೇಳಿದ್ದರು. ಇದರ ವಿಡಿಯೋ ವೈರಲ್ ಆಗಿತ್ತು.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ‘ಪಾಕಿಸ್ತಾನ ಹೋಲಿಕೆ’ ಆರೋಪ: ವರದಿ ಕೇಳಿದ ಸುಪ್ರೀಂ ಕೋರ್ಟ್

ಇಷ್ಟೇ ಅಲ್ಲದೆ, ‘ಸಂಜೆ 250 ಕೊಡು, ಇಲ್ಲಾಂದ್ರೆ ಶೆಡ್ಡಿಗ್ ಬಾ’ ಎಂದಿರುವುದು ಕೂಡ ವೈರಲ್ ಆಗಿತ್ತು. ಮಹಿಳಾ ವಕೀಲೆಯೊಬ್ಬರಿಗೆ, ಪ್ರತಿವಾದಿ ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂಬುದನ್ನು ಹೇಳುವಷ್ಟರ ಮಟ್ಟಿಗೆ ಅವರ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಎಂದು ವ್ಯಂಗ್ಯವಾಡಿದ್ದರು ಎನ್ನಲಾಗಿತ್ತು.

ನ್ಯಾಯಮೂರ್ತಿಗಳ ಹೇಳಿಕೆಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ