ನಾಡಗೀತೆಗೆ ಸಂಗೀತ ಸಂಯೋಜನೆ ವಿವಾದ: ಹಾಡಿನ ಮೂಲಕ ಹೈಕೋರ್ಟ್​ಗೆ ವಿವರಣೆ ನೀಡಿದ ಕಿಕ್ಕೇರಿ ಕೃಷ್ಣಮೂರ್ತಿ

ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿ ಸಂಯೋಜನೆಗೆ ಪರ-ವಿರೋಧಗಳು ವ್ಯಕ್ತವಾಗಿವೆ. ಸಂಗೀತ ಸಂಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಇಂದು ಕರ್ನಾಟಕ ಹೈಕೋರ್ಟ್​​ ವಿಚಾರಣೆ ನಡೆಸಿತು.

ನಾಡಗೀತೆಗೆ ಸಂಗೀತ ಸಂಯೋಜನೆ ವಿವಾದ: ಹಾಡಿನ ಮೂಲಕ ಹೈಕೋರ್ಟ್​ಗೆ ವಿವರಣೆ ನೀಡಿದ ಕಿಕ್ಕೇರಿ ಕೃಷ್ಣಮೂರ್ತಿ
ಹೈಕೋರ್ಟ್​ನಲ್ಲಿ ವಿವಿಧ ಧಾಟಿಗಳಲ್ಲಿ ನಾಡಗೀತೆ ಹಾಡಿದ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ
Updated By: Rakesh Nayak Manchi

Updated on: Jul 13, 2023 | 9:21 PM

ಬೆಂಗಳೂರು: ಯಾವುದೇ ಪ್ರಕರಣ ಆಗಲಿ ಹೈಕೋರ್ಟ್​ನಲ್ಲಿ (Karnataka High Court) ವಿಚಾರಣೆ ನಡೆಸುವಾಗ ವಕೀಲರು ಮಾತಿನಲ್ಲೇ ವಾದ ಮಂಡನೆ ಮಾಡುತ್ತಾರೆ. ಆದರೆ ಇಂದು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ (Karnataka Anthem) ಸಂಬಂಧಿಸಿದಂತೆ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಪೀಠದ ಮುಂದೆ ವಿವಿಧ ಧಾಟಿಗಳಲ್ಲಿ ಹಾಡಿ ವಿವರಣೆ ನೀಡಲಾಯಿತು.

ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರ ಧಾಟಿ ಬಳಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇಡೀ ಹಾಡಿಗೆ ಸಿ.ಅಶ್ವತ್ಥ್‌ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರವು ಇದಕ್ಕೆ ಆದೇಶ ಹೊರಡಿಸಿದೆ. ಅವರು ಒಂದು ಪಲ್ಲವಿ, ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜನೆ ಮಾಡಿದ್ದಾರೆ. ಹೀಗಾಗಿ ಸರ್ಕಾರದ ಆದೇಶ ರದ್ದುಗೊಳಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Karnataka High Court : ಕಳಂಕಿತ ಅಧಿಕಾರಿಯನ್ನು ಮಾಹಿತಿ ಆಯುಕ್ತರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್​​

ನ್ಯಾ.ಕೃಷ್ಣ ಎಸ್ ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಈ ವೇಳೆ ವಿವಿಧ ರಾಗ ಸಂಯೋಜನೆ ಮೂಲಕ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಖುದ್ದಾಗಿ ಹಾಡಿ ವಿವರಣೆ ನೀಡಿದರು. ಹಾಡಿನ ಮೂಲಕ ಧಾಟಿ ಗಮನಿಸಿದ ಪೀಠವು, ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Thu, 13 July 23