
ಮಂಗಳೂರು, ಆಗಸ್ಟ್ 30: ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಅನನ್ಯಾ ಭಟ್ (Ananya Bhat) ನಾಪತ್ತೆ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ಅನನ್ಯಾ ಭಟ್ ಮಿಸ್ಸಿಂಗ್ ಪ್ರಕರಣ ಕಾಲ್ಪನಿಕ ಸೃಷ್ಟಿ ಎಂದು ಸುಜಾತಾ ಭಟ್ (Sujatha Bhat) ಒಪ್ಪಿಕೊಂಡಿದ್ದಾರೆ. ಜೊತೆಗೆ ವಾಸಂತಿ ಇನ್ನೂ ಜೀವಂತ ಇದ್ದಾರೆ ಎಂದು ಸುಜಾತಾ ಭಟ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಗೆ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಆ ಮೂಲಕ ವಾಸಂತಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.
ಚಿನ್ನಯ್ಯ ಜೊತೆ ಸುಜಾತ ಭಟ್ರನ್ನೂ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಮಾಡಿದ್ದಾರೆ. ಫೋಟೋ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸುಜಾತ ಭಟ್, ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿಯದ್ದೇ ಫೋಟೋ ಎಂದು ಬಾಂಬ್ ಸಿಡಿಸಿದ್ದಾರೆ.
ಇದಕ್ಕೂ ಮೊದಲ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವಾಸಂತಿ ಶವ ಸಿಕ್ಕಿದೆ ಅಂತಿದ್ದಾರೆ. ಆದರೆ ಅದು ವಾಸಂತಿಯ ಶವ ಅಲ್ಲ, ಕೊಳೆತ ಶವ ವಾಸಂತಿಯದ್ದು ಎಂದು ಹೇಗೆ ನಂಬಿದಿರಿ ಎಂದು ತನಿಖಾಧಿಕಾರಿಗಳಿಗೆ ಮರುಪ್ರಶ್ನೆ ಮಾಡಿದ್ದಾರೆ. ಸದ್ಯ ಸುಜಾತಾ ಭಟ್ ನೀಡಿರುವ ಮಾಹಿತಿ ಆಧಾರದಲ್ಲಿ ಎಸ್ಐಟಿಯಿಂದ ತನಿಖೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಸುಳ್ಳಿನ ಕಂತೆ ಕಟ್ಟಿದ್ದ ಸುಜಾತ ಭಟ್ ಎಸ್ಐಟಿ ಎದುರು ಸತ್ಯ ಬಾಯ್ಬಿಟ್ಟಿದ್ದೇ ರೋಚಕ!
ಇನ್ನು ಇತ್ತೀಚೆಗೆ ಎಂ.ವಿಜಯ್ ಎನ್ನುವವರು ಸುಜಾತಾ ಭಟ್ ತೋರಿಸಿದ್ದು ಅನನ್ಯಾ ಫೋಟೋ ಅಲ್ಲ, ಅದು ನನ್ನ ಸಹೋದರಿ ವಾಸಂತಿ ಫೋಟೋ ಎಂದು ಹೇಳಿದ್ದರು. ನಿಗೂಢವಾಗಿ ಸಾವನ್ನಪ್ಪಿರುವುದಾಗಿಯೂ ಅವರು ಹೇಳಿದ್ದರು. ಆದರೆ ಇದೀಗ ಸುಜಾತಾ ಭಟ್, ವಾಸಂತಿ ಇನ್ನೂ ಜೀವಂತ ಇದ್ದಾರೆ ಎಂದಿದ್ದಾರೆ. ಆ ಮೂಲಕ ಕುತೂಹಲ ಇದೀಗ ಹೆಚ್ಚಿದೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣ ಕಾಲ್ಪನಿಕ ಸೃಷ್ಟಿ ಎಂದು ಎಸ್ಐಟಿ ತನಿಖಾಧಿಕಾರಿ ಗುಣಪಾಲ ಜೆ ಎದುರು ಸುಜಾತಾ ಭಟ್ ತಪ್ಪೊಪ್ಪಿಕೊಂಡಿದ್ದಾರೆ. ಅನನ್ಯಾ ಭಟ್ ನಾಪತ್ತೆ ಕತೆಕಟ್ಟಿದ್ದು, ನಾನು ಹೇಳಿದ ಕಥೆ ಶೇಕಡಾ 80% ರಷ್ಟು ಸುಳ್ಳು, ಎಲ್ಲಾ ಕಾಲ್ಪನಿಕ ಪಾತ್ರಗಳು. ಆದರೆ ಭೂ ವಿವಾದ ಇರುವುದು ಸತ್ಯ ಎಂದಿದ್ದಾರೆ.
ಇದನ್ನೂ ಓದಿ: ಅನನ್ಯಾ ಭಟ್ ನಾಪತ್ತೆ ದೂರು ಹಿಂಪಡೆಯುವೆ: ತಪ್ಪಾಯ್ತು ಬಿಟ್ಟುಬಿಡಿ ಸರ್, ಸುಜಾತಾ ಭಟ್ ಕಣ್ಣೀರಧಾರೆ
ಅರವಿಂದ ವಿಮಲಾ ಕೂಡ ಕಾಲ್ಪನಿಕ ಸೃಷ್ಠಿ ಎಂದಿರುವ ಸುಜಾತಾ ಭಟ್, ತನ್ನನ್ನು ಒತ್ತಾಯ ಪೂರ್ವಕವಾಗಿ ಈ ಕಥೆ ಹೇಳಿಸಲಾಗಿದೆ. ಷಡ್ಯಂತ್ರ, ಪಿತೂರಿಯಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ. ಭೂ ವಿವಾದ ಮತ್ತೆ ಕೆದಕಿ ಭೂಮಿ ಸಿಕ್ಕರೆ ಅದರಲ್ಲಿ ಪಾಲು ಪಡೆಯಲು ಕೆಲವರು ಯತ್ನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ದೃಷ್ಟಿಯಿಂದ ಕೆಲವು ಪೂರಕ ದಾಖಲೆಗಳನ್ನು ಸುಜಾತಾ ಭಟ್ ಒದಗಿಸಿದ್ದಾರೆ. 50ಕ್ಕೂ ಹೆಚ್ಚು ಪುಟಗಳ ವರದಿಯನ್ನು ತನಿಖಾಧಿಕಾರಿಗಳು ಸಿದ್ಧಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:12 pm, Sat, 30 August 25