ಗಣರಾಜ್ಯೋತ್ಸವಕ್ಕೆ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ: ಮಂಗಳೂರಿನಲ್ಲಿ ಮೆರವಣಿಗೆ ನಡೆಸಿ ಪ್ರತಿಭಟಿಸಲು ಜನಾರ್ದನ ಪೂಜಾರಿ ಕರೆ

ಕೇಂದ್ರ ಸರ್ಕಾರದಿಂದ ಗಣರಾಜ್ಯೋತ್ಸವಕ್ಕೆ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿ ಗಣರಾಜ್ಯೋತ್ಸವ ದಿನದಂದೇ ಮಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ಕೊಡಲಾಗಿದೆ. ನಾರಾಯಣ ಗುರುಗಳ ಟ್ಯಾಬ್ಲೋ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ‌ನಡೆಸಲು ಕರೆ ನೀಡಲಾಗಿದೆ.

ಗಣರಾಜ್ಯೋತ್ಸವಕ್ಕೆ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ: ಮಂಗಳೂರಿನಲ್ಲಿ ಮೆರವಣಿಗೆ ನಡೆಸಿ ಪ್ರತಿಭಟಿಸಲು ಜನಾರ್ದನ ಪೂಜಾರಿ ಕರೆ
ಜನಾರ್ದನ ಪೂಜಾರಿ
Follow us
| Updated By: ganapathi bhat

Updated on:Jan 23, 2022 | 11:57 AM

ಮಂಗಳೂರು: ಕೇಂದ್ರ ಸರ್ಕಾರದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕಾರ ಹಿನ್ನೆಲೆ ಜನವರಿ 26 ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮಾಜಿ ಕೇಂದ್ರ ಸಚಿವ ಹಾಗೂ ಧಾರ್ಮಿಕ ಮುಖಂಡ ಜನಾರ್ದನ ಪೂಜಾರಿ ಕರೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ಗಣರಾಜ್ಯೋತ್ಸವಕ್ಕೆ (Republic Day parade) ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿ ಗಣರಾಜ್ಯೋತ್ಸವ ದಿನದಂದೇ ಮಂಗಳೂರಿನಲ್ಲಿ ಪ್ರತಿಭಟನೆಗೆ ಕರೆ ಕೊಡಲಾಗಿದೆ. ನಾರಾಯಣ ಗುರುಗಳ ಟ್ಯಾಬ್ಲೋ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ‌ನಡೆಸುವಂತೆ ತಿಳಿಸಲಾಗಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ನನಗೆ ನೋವು ಕೊಟ್ಟಿದೆ. ಆ ದಿನ ನನಗೆ ನಿದ್ದೆಯೂ ಬಂದಿಲ್ಲ. ಇಡೀ ರಾತ್ರಿ ‌ಕಣ್ಣೀರು ಹಾಕಿದ್ದೇನೆ. ನಾರಾಯಣ ಗುರುಗಳು ಯಾವ ಜಾತಿ, ಸಮುದಾಯ, ಧರ್ಮಕ್ಕೆ ಸೇರಿದವರಲ್ಲ. ಅವರು ಎಲ್ಲರಿಗೂ ಸೇರಿದ ಒಬ್ಬ ಮಹಾನ್ ವ್ಯಕ್ತಿ. ಈ ದುಷ್ಕೃತ್ಯ ಖಂಡನೆ ಮಾಡಿ ಜನವರಿ 26 ರಂದು ಗುರುಗಳ ಭಾವಚಿತ್ರ ಮೆರವಣಿಗೆ ನಡೆಸ್ತೇವೆ. ಮಂಗಳೂರಿನ ಕಂಕನಾಡಿ ಗರೋಡಿಯಿಂದ ಕುದ್ರೋಳಿ ದೇವಸ್ಥಾನದವರೆಗೆ ಮೆರವಣಿಗೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಎಲ್ಲಾ ಸಮಾಜದವರು ಸೇರಿ ಪ್ರತಿಭಟನೆ ನಡೆಸುತ್ತೇವೆ. ಜಾತಿ, ಮತ, ಧರ್ಮ ಲೆಕ್ಕಿಸದೆ ಎಲ್ಲರೂ ಭಾಗವಹಿಸುವಂತೆ ಪ್ರಾರ್ಥನೆ ಮಾಡ್ತೇನೆ. ಅದೇ ದಿನ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ನಾರಾಯಣ ಗುರುಗಳ ಭಾವಚಿತ್ರ‌ ಮೆರವಣಿಗೆ ಮಾಡುತ್ತೇವೆ. ಅಂದು ಸಂಜೆ ವೇಳೆ‌ ಕುದ್ರೋಳಿ ದೇವಸ್ಥಾನಕ್ಕೆ ನಾರಾಯಣ ಗುರುಗಳ ಮೆರವಣಿಗೆ ಬಂದು ಸೇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಗಣರಾಜ್ಯೋತ್ಸವ ಪರೇಡ್​​ಗೆ ಕೇರಳದ ಜಟಾಯುಪಾರ ಮತ್ತು ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶಿಸುವುದಕ್ಕಾಗಿ ಅನುಮೋದನೆ ನೀಡಲು ಕೇರಳ ಸಲ್ಲಿಸಿದ ಸ್ತಬ್ಧ ಚಿತ್ರವನ್ನು  ರಕ್ಷಣಾ ಸಚಿವಾಲಯ (Ministry of Defence) ತಿರಸ್ಕರಿಸಿದೆ. ಪ್ರವಾಸೋದ್ಯಮದ ಸಾಮರ್ಥ್ಯದ ಜೊತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನು ಸಾರುವ ಚಡಯಮಂಗಲಂ ಜಟಾಯುಪಾರ (Chadayamangalam Jatayupara) ಮಾದರಿಯನ್ನು ಕೇರಳ ಸಿದ್ಧಪಡಿಸಿದೆ. ಈ ಸ್ತಬ್ಧ ಚಿತ್ರದ ಮುಂದೆ ಶ್ರೀ ನಾರಾಯಣ ಗುರು ಪ್ರತಿಮೆಯನ್ನು ಇರಿಸಲು ರಾಜ್ಯವು ಉದ್ದೇಶಿಸಿತ್ತು.

ತೀರ್ಪುಗಾರರು ಆದಿ ಶಂಕರರನ್ನು ಕೇಳಿದ್ದರು, ಕೇರಳ ಗುರುದೇವನನ್ನು ಶಿಫಾರಸು ಮಾಡಿತ್ತು

ಜಟಾಯುಪಾರ ದ್ವಾರದ ಮಾದರಿಯ ಸ್ತಬ್ಧಚಿತ್ರದ ಮುಂಭಾಗದಲ್ಲಿ ಶ್ರೀನಾರಾಯಣ ಗುರು ಪ್ರತಿಮೆ  ಇರಿಸಿ ಸಿದ್ಧಪಡಿಸಲಾಗಿತ್ತು. ಆದರೆ ಶ್ರೀಶಂಕರಾಚಾರ್ಯರ ಪ್ರತಿಮೆಯನ್ನು ಮುಂಭಾಗದಲ್ಲಿ ಇಡಬೇಕು ಎಂದು ರಕ್ಷಣಾ ಸಚಿವಾಲಯ ಸೂಚಿಸಿದೆ. ಒಂದು ವೇಳೆ ಈ ಬದಲಾವಣೆಯನ್ನು ಬಯಸದೇ ಇದ್ದರೆ ಸ್ತಬ್ಧಚಿತ್ರವನ್ನು ಹಿಂಪಡೆಯಬಹುದು ಎಂದು ಸಚಿವಾಲಯ ಹೇಳಿತ್ತು ಎಂದು ಮಾತೃಭೂಮಿ ನ್ಯೂಸ್ ವರದಿ ಮಾಡಿದೆ. ಆದರೆ ಆದಿಶಂಕರರ ಪ್ರತಿಮೆಯನ್ನು ಜಟಾಯುಪಾರದ ಜತೆ ಇರಿಸುವ ಮೂಲಕ ಇದನ್ನು ತೀರ್ಥಯಾತ್ರೆ ಎಂದು ಪರಿಗಣಿಸಲಾಗುವುದು. ಜಟಾಯುಪಾರ ಇರುವ ಚಡಯಮಂಗಲಂ, ವರ್ಕಲ ಮತ್ತು ಚೆಂಪಳಂತಿಗೆ ಸಮೀಪದಲ್ಲಿರುವುದರಿಂದ ಗುರುದೇವನ ಪ್ರತಿಮೆ ಉತ್ತಮವಾಗಿರುತ್ತದೆ ಎಂದು ರಾಜ್ಯವು ವಿವರಣೆ ನೀಡಿದೆ. ತೀರ್ಪುಗಾರರ ಕೋರಿಕೆಯಂತೆ ಕೇರಳವೂ ಆದಿಶಂಕರರ ಪ್ರತಿಮೆ ಇರುವ ರೇಖಾಚಿತ್ರವನ್ನು ಸಲ್ಲಿಸಿತ್ತು ಎಂದು ಮಲಯಾಳಂ ಪತ್ರಿಕೆ ಕೇರಳ ಕೌಮುದಿ ವರದಿ ಮಾಡಿದೆ.

ಇದನ್ನೂ ಓದಿ: ನಾರಾಯಣ ಗುರುಗಳ ಸ್ತಬ್ಧಚಿತ್ರ ತಿರಸ್ಕರಿಸಿದೆ ಎಂಬುವುದು ಶುದ್ಧ ಸುಳ್ಳು: ಸಚಿವ ಸುನಿಲ್ ಕುಮಾರ್

ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್​​ಗೆ ಕೇರಳದ ಜಟಾಯುಪಾರ ಮತ್ತು ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ತಿರಸ್ಕರಿಸಿದ ಕೇಂದ್ರ

Published On - 11:47 am, Sun, 23 January 22