ಧರ್ಮಸ್ಥಳ ತಲೆಬುರುಡೆ ಕೇಸ್​: ತಿಮರೋಡಿ ಮತ್ತು ತಂಡಕ್ಕೆ ಶಾಕ್​ ಕೊಟ್ಟ ಹೈಕೋರ್ಟ್​

ಧರ್ಮಸ್ಥಳ ತಲೆಬುರುಡೆ ಪ್ರಕರಣ ಸಂಬಂಧ ಎಫ್ಐಆರ್ 39/2025ರ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ಹೀಗಾಗಿ ಎಸ್​ಐಟಿ ವಿಚಾರಣೆ ಮುಂದುವರಿಯಲಿದ್ದು,ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಪ್ರಮುಖರು ಮತ್ತೆ ತನಿಖೆ ಎದುರಿಸಬೇಕಿದೆ. ಮ್ಯಾಜಿಸ್ಟ್ರೇಟ್ ಅನುಮತಿ ಪಡೆದೇ ತನಿಖೆ ನಡೆಯುತ್ತಿದೆ ಎಂದು ಎಸ್​ಐಟಿ ವಾದಿಸಿತ್ತು.

ಧರ್ಮಸ್ಥಳ ತಲೆಬುರುಡೆ ಕೇಸ್​: ತಿಮರೋಡಿ ಮತ್ತು ತಂಡಕ್ಕೆ ಶಾಕ್​ ಕೊಟ್ಟ ಹೈಕೋರ್ಟ್​
ಕರ್ನಾಟಕ ಹೈಕೋರ್ಟ್
Edited By:

Updated on: Nov 12, 2025 | 2:11 PM

ಬೆಂಗಳೂರು, ನವೆಂಬರ್​ 12: ಧರ್ಮಸ್ಥಳ ತಲೆಬುರುಡೆ ಕೇಸ್ (Dharmasthala Mass Burial Case)​ ತನಿಖೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಧರ್ಮಸ್ಥಳ ಠಾಣೆಯ ಎಫ್ಐಆರ್ 39/2025 ತನಿಖೆಗೆ ಅ.30ರಂದು ನೀಡಿದ್ದ ತಡೆಯಾಜ್ಞೆಯನ್ನ ತೆರವುಗೊಳಿಸಿದ್ದು, ತನಿಖೆಗೆ ಅನುಮತಿ ನೀಡಿದೆ. ಹೀಗಾಗಿ ಗಿರೀಶ್ ಮಟ್ಟಣ್ಣನವರ್​, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠ್ಠಲಗೌಡ ಎಸ್​ಐಟಿ ತನಿಖೆಯನ್ನ ಮತ್ತೆ ಎದುರಿಸಬೇಕಿದೆ.

ಪ್ರಕರಣ ಸಂಬಂಧ ಎಸ್‌ಐಟಿ ಪರ ವಾದಿಸಿದ್ದ ವಿಶೇಷ ಅಭಿಯೋಜಕ ಬಿ.ಎನ್.ಜಗದೀಶ್, ಮ್ಯಾಜಿಸ್ಟ್ರೇಟ್ ಅನುಮತಿ ಪಡೆದ ನಂತರವೇ ತನಿಖೆ ನಡೆಸಲಾಗುತ್ತಿದೆ. ಎಸ್‌ಐಟಿ ತನಿಖೆಯನ್ನು ಅರ್ಜಿದಾರರೇ ಹೊಗಳಿದ್ದಾರೆಂದು ನ್ಯಾಯಾಲಕ್ಕೆ ತಿಳಿಸಿದ್ದರು. ಈ ಹಿನ್ನಲೆ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ, ಆರೋಪಿಗಳಿಗೆ ಕಿರುಕುಳ ನೀಡದಂತೆ ಮಧ್ಯಂತರ ಆದೇಶ ವಿಸ್ತರಣೆ ಮಾಡಿ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ಮಾಡಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​, ಚಿನ್ನಯ್ಯ ಹಿಂದಿದ್ದ ಟೀಂನ ಮತ್ತೊಂದು ಕಳ್ಳಾಟ ಬಯಲು

ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ 39/2025 ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್​, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠ್ಠಲಗೌಡ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಬಾಲನ್​, ಈಗಾಲೇ 9 ಬಾರಿ ನೋಟಿಸ್​ ನೀಡಿ ವಿಚಾರಣೆ ನಡೆಸಲಾಗಿದೆ. ಎಫ್ಐಆರ್​ನಲ್ಲಿ ನಮ್ಮನ್ನು ಆರೋಪಿಗಳೆಂದು ಉಲ್ಲೇಖಿಸಿಲ್ಲ. ಖುದ್ದಾಗಿ ನೋಟಿಸ್ ಜಾರಿ ಮಾಡದೇ ವಾಟ್ಸ್ಯಾಪ್​, ಇಮೇಲ್​ಗಳಲ್ಲಿ ನೀಡಿದ್ದಾರೆ. BNSS ಸೆಕ್ಷನ್​​ 35(3) ಅಡಿಯಲ್ಲಿ ಸಮನ್ಸ್ ನೀಡಿದ್ದು, ಎಸ್ಐಟಿ ಸಮನ್ಸ್ ನೀಡಿರುವುದು ಕಾನೂನು ಬಾಹಿರ. ನಾವು ಆರೋಪಿಗಳೂ ಅಲ್ಲ, ಸಾಕ್ಷಿಯೂ ಅಲ್ಲವೆಂದು ವಾದ ಮಂಡಿಸಿದ್ದರು. ರಾಜಕೀಯ , ಧಾರ್ಮಿಕ ಮತ್ತು ಸಂಘಟನಾತ್ಮಕ ವೈರತ್ವದಿಂದ ನೋಟಿಸ್ ನೀಡಲಾಗಿದೆ. ವಿಚಾರಣೆ ಹೆಸರಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕೂರಿಸಲಾಗುತ್ತೆ. ಈಗಾಗಲೇ 150 ಗಂಟೆಗೂ ಹೆಚ್ಚು ಕಾಲ ಅಜರ್ಜದಾರರ ವಿಚಾರಣೆ ನಡೆಸಲಾಗಿದೆ. ಆರಂಭದಲ್ಲಿ 211(a) ಅಡಿ ಎಫ್‌ಐಆರ್ ದಾಖಲಿಸಿ ನಂತರ ಬೇರೆ ಸೆಕ್ಷನ್ ಸೇರಿಸಿದ್ದಾರೆ ಎಂದುವಾದಿಸಿದ್ದರು.

ಎಸ್‌ಐಟಿ ಪರ ಎಸ್‌ಪಿಪಿ ಬಿ.ಎನ್. ಜಗದೀಶ್ ವಾದ ಮಂಡಿಸಿದ್ದು, ಅರ್ಜಿದಾರರ ಪ್ರಚೋದನೆ ಮೇಲೆಯೇ ಚಿನ್ನಯ್ಯ ದೂರು ನೀಡಿದ್ದಾನೆ. ನಂತರ 164 ಹೇಳಿಕೆ ನೀಡಿ ಅರ್ಜಿದಾರರ ಮೇಲೆ ಆರೋಪ ಮಾಡಿದ್ದಾನೆ. ಧರ್ಮಸ್ಥಳ ಗ್ರಾಮದ 20 ಕಡೆ ಅಗೆದು ಪರಿಶೀಲನೆ ನಡೆಸಲಾಗಿದ್ದು, ಈಗ ಆರೋಪಿಗಳನ್ನಾಗಿಸಿ ಇವರಿಗೆ ನೋಟಿಸ್ ನೀಡಲಾಗಿದೆ. 35(3) ಅಡಿ ನೋಟಿಸ್ ಜಾರಿಗೊಳಿಸಿದ ಬಳಿಕ ಅರ್ಜಿದಾರರು ಬಂದಿಲ್ಲ. ಈಗ ಹೊಸದಾಗಿ 35(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದರು. ಪರ-ವಿರೋಧ ವಾದ ಆಲಿಸಿದ್ದ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಪೀಠ, ಪ್ರಕರಣದ ತನಿಖೆಗೆ ನ.12ರವರೆಗೆ ತಡೆ ನೀಡಿ ಆದೇಶಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:09 pm, Wed, 12 November 25