ಮಂಗಳೂರು: ಅಪಘಾತದ ಸ್ಥಳದಿಂದ 2 ದಿನ ಕದಲದೆ ಅಚ್ಚರಿ ಮೂಡಿಸಿದ ಹರಕೆ ಕೋಳಿ

ದೈವದ ಹರಕೆಗಾಗಿ ಕೋಳಿ ತೆಗೆದುಕೊಂಡು ಸೀತಾರಾಮ ಎಂಬುವರು ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಸೀತಾರಾಮ ಅವರ ಮೇಲೆ ಮರ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ತೆಗೆದುಕೊಂಡು ಹೋಗುತ್ತಿದ್ದ ಕೋಳಿ ಎರಡು ದಿನ ಕಳೆದರೂ ಅಪಘಾತ ಸ್ಥಳದಿಂದ ಕದಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಘಟನೆ ನಡೆದಿದೆ.

ಮಂಗಳೂರು: ಅಪಘಾತದ ಸ್ಥಳದಿಂದ 2 ದಿನ ಕದಲದೆ ಅಚ್ಚರಿ ಮೂಡಿಸಿದ ಹರಕೆ ಕೋಳಿ
ಅಪಘಾತ ಸ್ಥಳದಲ್ಲಿ ಕೋಳಿ
Edited By:

Updated on: Nov 05, 2024 | 9:54 AM

ಮಂಗಳೂರು, ನವೆಂಬರ್​ 05: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ (Kadab) ತಾಲೂಕಿನ ಪುಳಿಕುಕ್ಕು ಎಂಬಲ್ಲಿ ಭಾನುವಾರ (ನ.03) ಚಲಿಸುತ್ತಿದ್ದ ಸ್ಕೂಟಿಯ ಮೇಲೆ ಮರ ಬಿದಿತ್ತು. ಪರಿಣಾಮ, ಸ್ಕೂಟಿಯಲ್ಲಿದ್ದ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸೀತಾರಾಮ ಅವರು ತಮ್ಮ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಳಿ (Chicken) ತೆಗೆದುಕೊಂಡು ಹೋಗುತ್ತಿದ್ದಾಗ ಅವಘಡ ಸಂಭವಿಸಿತ್ತು.

ಘಟನೆಯ ವೇಳೆ ಕೋಳಿಗೆ ಹಗ್ಗದಿಂದ ಕಾಲುಗಳನ್ನು ಕಟ್ಟಿದ್ದರಿಂದ ಮೃತದೇಹದ ಬಳಿಯೇ ಬಿದ್ದಿತ್ತು. ಬಳಿಕ ಸ್ಥಳದಲ್ಲಿದ್ದವರು ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಿದ್ದರು. ಆಗ ಹತ್ತಿರದ ಕಾಡಿನೊಳಗೆ ಹೋಗಿದ್ದ ಕೋಳಿ, ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನರು ಚದುರಿದ ಬಳಿಕ ಮತ್ತೆ ಬಂದಿದೆ. ಮರಬಿದ್ದು ನಜ್ಜುಗುಜ್ಜಾಗಿದ್ದ ಸೀತಾರಾಮ ಅವರ ಸ್ಕೂಟಿಯ ಮೇಲೆ ಬಂದು ಕುಳಿತಿದೆ. ಜನರು ಹತ್ತಿರ ಬಂದಾಗ ಪಕ್ಕದ ಮರದ ರೆಂಬೆಯ ಮೇಲೆ ಆಶ್ರಯ ಪಡೆಯುತ್ತಿದೆ.

ಇದನ್ನೂ ಓದಿ: ಕಾಡಿನಲ್ಲಿ ಮಹಿಳೆಯ ತಲೆ ಬುರುಡೆ ಹಾಗೂ ಎಲುಬುಗಳು ಪತ್ತೆ

ಕೋಳಿ ಎರಡು ದಿನ ಕಳೆದರೂ ಘಟನಾ ಸ್ಥಳ ಬಿಟ್ಟು ಕದಲದೆ ಜನರ ಸೋಜಿಗಕ್ಕೆ ಕಾರಣವಾಗಿದೆ. ದೈವದ ಹರಕೆಗೆಂದು ತೆಗೆದುಕೊಂಡು ಹೋಗುತ್ತಿದ್ದ ಕೋಳಿಯಾದ ಕಾರಣದಿಂದ ಅಚ್ಚರಿ ಮೂಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:24 am, Tue, 5 November 24