ಇಂದು ರಜೆ ಮೇಲೆ ಹುಟ್ಟೂರಿಗೆ ಬರಬೇಕಿದ್ದ ಮಂಗಳೂರಿನ ಯೋಧ ಹೃದಯಾಘಾತದಿಂದ ಸಾವು, ನಾಳೆ ಅಂತ್ಯಸಂಸ್ಕಾರ

ಭೋಪಾಲ್​ನಲ್ಲಿ‌ ಸಶಸ್ತ್ರ ಸೀಮಾ ಬಲ್​ನಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರಿನ ಯೋಧ ಮುರಳಿಧರ್ ರೈ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಿನ್ನೆ ಮುಂಜಾನೆ ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇಂದು ರಜೆ ಮೇಲೆ ಹುಟ್ಟೂರಿಗೆ ಬರಬೇಕಿದ್ದ ಮಂಗಳೂರಿನ ಯೋಧ ಹೃದಯಾಘಾತದಿಂದ ಸಾವು, ನಾಳೆ ಅಂತ್ಯಸಂಸ್ಕಾರ
ಮೃತ ಯೋಧ ಮುರಳಿಧರ್ ರೈ (ಎಡ ಚಿತ್ರ)
Edited By: Rakesh Nayak Manchi

Updated on: Jan 24, 2023 | 8:11 PM

ಮಂಗಳೂರು: ಇಂದು ರಜೆಯ ಮೇಲೆ ಊರಿಗೆ ಬರಬೇಕಾಗಿದ್ದ ಮಂಗಳೂರು ಮೂಲದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ (Mangalore soldier passes away). ಮಧ್ಯಪ್ರದೇಶದ ಭೋಪಾಲ್​ನಲ್ಲಿ‌ ಸಶಸ್ತ್ರ ಸೀಮಾ ಬಲ್​ನಲ್ಲಿ ಕರ್ತವ್ಯದಲ್ಲಿದ್ದ ಮುರಳಿಧರ್ ರೈ (37) ಮೃತ ಯೋಧರಾಗಿದ್ದಾರೆ. ನಿನ್ನೆ (ಜನವರಿ 23) ಮುಂಜಾನೆ ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಮುರಳಿಧರ್ ಅವರ ಪಾರ್ಥಿವ ಶರೀರ ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತು. ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಗಿದೆ.

ನಿನ್ನೆ ಬೆಳಗ್ಗೆ ಮಲಗಿದ್ದಲ್ಲಿಯೇ ಯೋಧ ಮುರಳಿಧರ್ ಅವರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಮೃತ ಯೋಧ‌ನ ಪಾರ್ಥಿವ ಶರೀರ ಆಗಮಿಸಿದ್ದು, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸೇರಿದಂತೆ ಅಧಿಕಾರಿಗಳು ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಬಳಿಕ ಮೃತದೇಹವನ್ನು ಎ.ಜೆ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಯಿತು. ನಾಳೆ ಶಕ್ತಿನಗರದ ಯೋಧನ ಮನೆಯಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದೆ.

ಇದನ್ನೂ ಓದಿ: Balkrishna Vithaldas Doshi: ಪ್ರಸಿದ್ಧ ವಾಸ್ತುಶಿಲ್ಪಿ ಬಾಲಕೃಷ್ಣ ವಿಠ್ಠಲದಾಸ್ ದೋಶಿ ನಿಧನ: ಪ್ರಧಾನಿ ಮೋದಿ ಸಂತಾಪ

2007ರಲ್ಲಿ ಕಾನ್ಸ್‌ಟೇಬಲ್ ಆಗಿ ಸಶಸ್ತ್ರ ಸೀಮಾ ಬಲ್​ಗೆ ಸೇರ್ಪಡೆಯಾಗಿದ್ದ ಮುರಳಿಧರ್ ರೈ, ಹವಾಲ್ದಾರ್ ಆಗಿ ಭೋಪಾಲ್​ನಲ್ಲಿ ಕರ್ತವ್ಯದಲ್ಲಿದ್ದರು. ಇಂದು ರಜೆಯ ಮೇಲೆ ಊರಿಗೆ ಬರಬೇಕಾಗಿದ್ದ ಮುರಳಿಧರ್ ರೈ, ಪತ್ನಿ ಹಾಗೂ ಆರು ತಿಂಗಳ ಮಗುವನ್ನು‌ ಅಗಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Tue, 24 January 23

Web contact

TV9 Kannada

Read More
Follow Us