SaRa Abubakar Death: ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ ನಿಧನ

| Updated By: ಆಯೇಷಾ ಬಾನು

Updated on: Jan 10, 2023 | 2:42 PM

ಸಾರ ಅಬೂಬಕ್ಕರ್ ನಿಧನ: ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

SaRa Abubakar Death: ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್ ನಿಧನ
ಸಾರಾ ಅಬೂಬಕ್ಕರ್
Follow us on

ಮಂಗಳೂರು: ಹಿರಿಯ ಸಾಹಿತಿ, ಕಾದಂಬರಿಗಾರ್ತಿ, ನಾಡೋಜ ಸಾರಾ ಅಬೂಬಕ್ಕರ್(SaRa Abubakar) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 86 ವರ್ಷ ವಯಸ್ಸಿನ ಸಾರಾ ಅಬೂಬಕ್ಕರ್ ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.

ಕಾಸರಗೋಡಿನ ಚಂದ್ರಗಿರಿಯಲ್ಲಿ ಜೂನ್ 30, 1936 ರಂದು ಹುಟ್ಟಿ ಬೆಳೆದ ಸಾರಾ ಅಬೂಬಕ್ಕರ್ ಅವರು ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದರು. ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಜನಪ್ರಿಯವಾಗಿ ಗಮನ ಸೆಳೆದಿದೆ. ಕುಗ್ರಾಮದಲ್ಲಿ ಹುಟ್ಟಿ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇವರು 10 ಕ್ಕೂ ಹೆಚ್ಚು ಕಾದಂಬರಿ, 6 ಕಥಾ ಸಂಕಲನ, 5 ಬಾನುಲಿ ನಾಟಕ, 4 ಲೇಖನ, ಒಂದು ಪ್ರವಾಸ ಕಥನ ಬರೆದಿದ್ದಾರೆ. 11 ಕ್ಕೂ ಹೆಚ್ಚು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಸಾಹಿತಿಗಳನ್ನು ಸಮ್ಮೇಳನದಿಂದ ದೂರ ಮಾಡಿರುವ ಆರೋಪ: ಹರಿಪ್ರಸಾದಗೆ ತಿರುಗೇಟು ನೀಡಿದ ಮಹೇಶ್ ಜೋಶಿ

ಸಾರಾ ಅಬೂಬಕ್ಕರ್ ಅವರಿಗೆ ಸಂದಿರುವ ಪ್ರಶಸ್ತಿಗಳು

ಸಾರಾ ಅಬೂಬಕ್ಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.

ಇಂದು ರಾತ್ರಿ 8 ಗಂಟೆಗೆ ಅಂತಿಮ ಸಂಸ್ಕಾರ

ಮುಸ್ಲಿಂ ಹೆಣ್ಣುಮಕ್ಕಳಿಗೆ ಶಿಕ್ಷಣ ವಿಚಾರದಲ್ಲಿ ಸೌದಿಯ ‘ವಹಾಬಿಸಂ’ ವಿರುದ್ಧ ಮಾತನಾಡಿ ಸಾರಾ ಅಬೂಬಕ್ಕರ್ ಗಮನ ಸೆಳೆದಿದ್ದರು. ಹಾಗೂ ಸಾರಾ ಅಬೂಬಕರ್ ಅವರ ‘ವಜ್ರಗಳು’ ಕಾದಂಬರಿ ಇತ್ತೀಚೆಗೆ ‘ಸಾರಾ ವಜ್ರ’ ಅನ್ನೊ ಹೆಸರಿನ ಸಿನಿಮಾ ಕೂಡ ಆಗಿತ್ತು.  ಇವರು ಮಂಗಳೂರಿನ ಹ್ಯಾಟ್ ಹಿಲ್ ಬಳಿ ನೆಲೆಸಿದ್ದು, ನಾಲ್ವರು ಪುತ್ರರು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಂಗಳೂರಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಇಂದು ರಾತ್ರಿ 8 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:29 pm, Tue, 10 January 23