ಅತ್ತೆಯ ಕರಿಮಣಿ ಸರಕ್ಕೇ ಕನ್ನ, ಸಿಸಿ ಕ್ಯಾಮರಾದಲ್ಲಿ ಸೆರೆ ಆಯ್ತು ಅಳಿಯನ ಕಳ್ಳಾಟ

ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಾಗಿ ಹೊರಗಿನ ವ್ಯಕ್ತಿ ಬಂದು ಕೃತ್ಯ ನಡೆಸಿರುವುದನ್ನು ಕೇಳಿರ್ತೆವೆ. ಆದ್ರೆ ಇಲ್ಲೊಬ್ಬ ಅಳಿಯ ತನ್ನ ಅತ್ತೆಯ ಕರಿಮಣಿ ಸರಕ್ಕೆ ಕನ್ನ ಹಾಕೋಕೆ ಹೋಗಿ ಅಂದರ್ ಆಗಿದ್ದಾನೆ. ಈ ಕೃತ್ಯವನ್ನು ಸಂಬಂಧಿಕನೆ ಮಾಡಿದ ಅಲ್ವಾ ಎಂದು ಗೊತ್ತಾಗಿ ಮನೆಯವರು ಶಾಕ್‌ಗೆ ಒಳಗಾಗಿದ್ದಾರೆ.

ಅತ್ತೆಯ ಕರಿಮಣಿ ಸರಕ್ಕೇ ಕನ್ನ, ಸಿಸಿ ಕ್ಯಾಮರಾದಲ್ಲಿ ಸೆರೆ ಆಯ್ತು ಅಳಿಯನ ಕಳ್ಳಾಟ
ಅತ್ತೆಯ ಕರಿಮಣಿ ಸರಕ್ಕೇ ಕನ್ನ, ಸಿಸಿ ಕ್ಯಾಮರಾದಲ್ಲಿ ಸೆರೆ ಆಯ್ತು ಅಳಿಯನ ಕಳ್ಳಾಟ
Updated By: ಆಯೇಷಾ ಬಾನು

Updated on: Jul 27, 2021 | 9:08 AM

ಮಂಗಳೂರು ಕಮೀಷನರೇಟ್‌ನ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಮಿತ್ತೊಟ್ಟು ಪ್ರದೇಶದಲ್ಲಿ ಇತ್ತೀಚೆಗೆ ವಿಚಿತ್ರ ಕಳ್ಳತನ ಪ್ರಕರಣವೊಂದು ನಡೆದಿತ್ತು. ಒಂಟಿ ಮಹಿಳೆಯ ಮನೆಗೆ ಇಬ್ರು ಕಳ್ಳರು ನುಗ್ಗಿ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದರು. (Gold Chain Theft) ಸಂತ್ರಸ್ತ ಮಹಿಳೆ ಸುಮತಿ ಆಚಾರ್ಯ ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆರಂಭದಲ್ಲೇ ಇದು ಪರಿಚಿತರ ಕೃತ್ಯ ಅನ್ನೋ ಸುಳಿವು ಸಿಕ್ಕಿತ್ತು. ತನಿಖೆಯ ಭಾಗವಾಗಿ ಸ್ಥಳೀಯ ಸಿ.ಸಿ ಕ್ಯಾಮಾರ ಚೆಕ್ ಮಾಡಿದಾಗ ಕೃತ್ಯ ಎಸಗಿ ಇಬ್ಬರು ಪರಾರಿಯಾಗಿರುವುದು ರೆಕಾರ್ಡ್ ಆಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಅಳಿಯನೇ(son in law) ಈ ಕಳ್ಳತನ ಕೃತ್ಯ ನಡೆಸಿರುವುದು ಪತ್ತೆಯಾಗಿದೆ. ಸದ್ಯ ದೂರು ಕೊಟ್ಟಿರೋ ಮಹಿಳೆಯ ಅಳಿಯ ವಿನಯ್ ಕುಮಾರ್, ಆತನ ಜೊತೆಗಿದ್ದ ಮಣಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿನಯ್ ಕುಮಾರ್ ಸುರತ್ಕಲ್‌ನ ಕೃಷ್ಣಾಪುರ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆ ಅಳಿಯ ವಿನಯ್ ಕುಮಾರ್ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಇಬ್ಬರು ಆರೋಪಿಗಳು ಏಕಾಏಕಿ ಮನೆಯೊಳಗೆ ನುಗ್ಗಿ ಸುಮತಿ ಆಚಾರ್ಯರ ಬಾಯಿಗೆ ಬಟ್ಟೆಕಟ್ಟಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಳೆದು ಏಸ್ಕೇಪ್ ಆಗಿದ್ದರು. ಸದ್ಯ ಇಬ್ಬರು ಆರೋಪಿಗಳಿಂದ 60 ಸಾವಿರ ಮೌಲ್ಯದ 32 ಗ್ರಾಂ ತೂಕದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಅಳಿಯನೇ ಕಳ್ಳತನ ಕೃತ್ಯ ನಡೆಸಿರುವ ಬಗ್ಗೆ ಗೊತ್ತಾಗ್ತಿದ್ದಂತೆ ಅತ್ತೆ ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಒಟ್ಟಿನಲ್ಲಿ ಹೆಣ್ಣು ಕೊಟ್ಟ ಮನೆಗೆ ಕನ್ನ ಹಾಕಲು ಬಂದು ಅಳಿಯ ಈಗ ಅಂದರ್ ಆಗಿದ್ದಾನೆ.

ಇದನ್ನೂ ಓದಿ: ಮಾತನಾಡುವ ನೆಪದಲ್ಲಿ ಕರೆಸಿ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಯುವಕನ ಭೀಕರ ಕೊಲೆ

Published On - 9:06 am, Tue, 27 July 21